ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕ ಕರಿಯಣ್ಣ ವಿಧಿವಶ
ಶಿವಮೊಗ್ಗ, ಡಿಸೆಂಬರ್ 14: ಜಿಲ್ಲೆಯ ಹಿರಿಯ ನಾಯಕ, ಕೆಪಿಸಿಸಿ ಉಪಾಧ್ಯಕ್ಷ, ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕ ಕರಿಯಣ್ಣ (74) ಇಂದು ಬೆಳಗ್ಗೆ ವಿಧಿವಶವಾಗಿದ್ದಾರೆ.
ಕಳೆದ ಆರು ತಿಂಗಳಿನಿಂದ ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದ್ದಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲೇ ಅನಾರೋಗ್ಯಕ್ಕೆ ತುತ್ತಾಗಿದ್ದ ಕರಿಯಣ್ಣ ಅವರು ತಮ್ಮ ಮಗ ಡಾ.ಶ್ರೀನಿವಾಸ್ ಅವರನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು.
ಕಾಂಗ್ರೆಸ್ ನ ಪ್ರಭಾವಿ ಹಿರಿಯ ನಾಯಕರಾಗಿದ್ದ ಕೆ.ಹೆಚ್ ಶ್ರೀನಿವಾಸ್ ಅವರು ಮೂಲತಃ ಲೆಕ್ಕಪರಿಶೋಧಕ ಇಲಾಖೆಯ ಗುಮಾಸ್ತರಾಗಿದ್ದ ಕರಿಯಣ್ಣ ಅವರನ್ನು ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ನಾಯಕನಾಗಿ ಗುರುತಿಸಿ ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದು, 1978 ರ ಅವಧಿಯಲ್ಲಿ ಶಿವಮೊಗ್ಗ ನಗರಾಭಿವೃದ್ದಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಅವರನ್ನು ಸಕ್ರೀಯ ರಾಜಕಾರಣಕ್ಕೆ ಇಳಿಸಿದ್ದರು.

1983 ರಲ್ಲಿ ಶಿವಮೊಗ್ಗ ನಗರಸಭೆ ಸದಸ್ಯರಾಗಿ, 1989 ಮತ್ತು 1999 ರಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ( ಅಂದಿನ ಹೊಳೆಹೊನ್ನೂರು ) ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜಯ ಸಾಧಿಸಿದ್ದರು. ಎಸ್.ಎಂ ಕೃಷ್ಣ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಒದಗಿ ಬಂದಿತ್ತಾದರೂ ಕೊನೆ ಕ್ಷಣದಲ್ಲಿ ಕೈತಪ್ಪಿದ್ದು, ಅನುಸೂಚಿತ ಜಾತಿ/ಪಂಗಡಗಳ ಅನುದಾನ ಪರಿಶೀಲನಾಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದ ಕರಿಯಣ್ಣ ಅವರು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಹಾಲಿ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ಶಿವಮೊಗ್ಗ ನಗರದ ಸಿಟಿ ಕೋ-ಆಪರೇಟೀವ್ ಬ್ಯಾಂಕ್ , ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ, ಕೋಟೆಶ್ರೀಮಾರಿಕಾಂಬ ದೇವಸ್ಥಾನ ಸಮಿತಿ, ರವೀಂದ್ರನಗರ ಗಣಪತಿ ದೇವಸ್ಥಾನ ಸಮಿತಿಗಳ ಅಧ್ಯಕ್ಷರಾಗಿ, ಸಕ್ರಿಯ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು.












Click it and Unblock the Notifications