ಶಿವಮೊಗ್ಗ; ವಿಮಾನದಲ್ಲಿ ಬಂದು ಸರ ಕದಿಯುತ್ತಿದ್ದ ಗ್ಯಾಂಗ್ ಬಂಧನ
ಶಿವಮೊಗ್ಗ, ಅಕ್ಟೋಬರ್ 28 : ವಿಮಾನದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ 6 ಜನ ಅಂತರ್ ರಾಜ್ಯ ಸರಗಳ್ಳರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 9 ಲಕ್ಷ ಮೌಲ್ಯದ ಚಿನ್ನಾಭರಣ, ಬೈಕ್, ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಶಿವಮೊಗ್ಗ ಎಸ್ಪಿ ಕೆ. ಎಂ. ಶಾಂತರಾಜು ಆರೋಪಿಗಳ ಬಗ್ಗೆ ಮಾಹಿತಿ ನೀಡಿದರು. ಬಂಧಿತರೆಲ್ಲರೂ ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ನಗರದಲ್ಲಿಇನ್ನೂ ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ.
ಬಂಧಿತ ಆರೋಪಿಗಳನ್ನು ಉತ್ತರ ಪ್ರದೇಶದ ಮೀರತ್ನ ನಿವಾಸಿ ಫೈಜಲ್ (25), ಸಲ್ಮಾನ್ (24), ಆಶೀಸ್ ಕುಮಾರ್ (36), ಮೆಹತಾಬ್ (35), ಸಲ್ಮಾನ್ (22) ಮತ್ತು ಶಿವಮೊಗ್ಗದ ಜೋಸೆಫ್ ನಗರದ ನಿವಾಸಿ ಮಹಮ್ಮದ್ ಚಾಂದ್ ಎಂದು ಗುರುತಿಸಲಾಗಿದೆ.

ಶಿವಮೊಗ್ಗ ನಗರದಲ್ಲಿ ಕಳೆದ ತಿಂಗಳು ಸಾಲು ಸಾಲು ಸರಗಳ್ಳತನ ಪ್ರಕರಣಗಳು ನಡೆದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಗಳ ಬಂಧನಕ್ಕೆ ತಂಡ ರಚಿಸಿದ್ದರು. ಜಯನಗರ ಮತ್ತು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ ನಡೆದಿತ್ತು.
ಒಬ್ಬ ಆರೋಪಿ ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದು, ಅಲ್ಲಿಂದ ಬೈಕ್ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದ. ವಿದ್ಯಾನಗರ ಬಳಿಯ ಲಾಡ್ಜ್ನಲ್ಲಿ ಆರೋಪಿಗಳು ಇರುವ ಕುರಿತು ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ.

ಬಂಧಿತ ಆರೋಪಿಗಳಿಂದ 9 ಲಕ್ಷ 31 ಸಾವಿರದ 50 ರೂ ಮೌಲ್ಯದ 213.20 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಪಿಸ್ತೂಲು, ಗುಂಡು ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ. ಜಯನಗರ ಮತ್ತು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 8 ಕಳವು ಪ್ರಕರಣಗಳು ದಾಖಲಾಗಿದ್ದವು.
ಜೋಸೆಫ್ ನಗರದ ನಿವಾಸಿ ಮಹಮ್ಮದ್ ಚಾಂದ್ ಉತ್ತರ ಪ್ರದೇಶದಿಂದ ಬಂದ ಆರೋಪಿಗಳಿಗೆ ಸಹಕಾರ ನೀಡಿದ್ದ. ನಗರದಲ್ಲಿ ಬೆಡ್ ಶೀಟ್ ವ್ಯಾಪಾರ ಮಾಡುತ್ತಿದ್ದ ಮಹಮ್ಮದ್ ಚಾಂದ್, ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications