ಗುಡ್ಡೆಕಲ್ಲಿನಲ್ಲಿ ಆಡಿಕೃತ್ತಿಗೆ ಜಾತ್ರೆಗೆ ಅಂತಿಮ ಸಿದ್ಧತೆ, ಹರೋ ಹರ ಸ್ಮರಣೆಗೆ ಕ್ಷಣಗಣನೆ
ಶಿವಮೊಗ್ಗ, ಜುಲೈ 20: ಎರಡು ವರ್ಷದ ಬಳಿಕ ಶಿವಮೊಗ್ಗದಲ್ಲಿ ಆಡಿಕೃತ್ತಿಗೆ ಜಾತ್ರೆ ನಡೆಯುತ್ತಿದೆ. ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. ಶಿವಮೊಗ್ಗದ ಗುಡ್ಡೇಕಲ್ಲು ಶ್ರೀ ಬಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಡಿಕೃತ್ತಿಗೆ ಜಾತ್ರೆ ನಡೆಯಲಿದೆ. ಜುಲೈ 22 ಮತ್ತು 23ರಂದು ಜಾತ್ರೆ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ಇದಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.
ಜಾತ್ರೆ ಅಂಗವಾಗಿ ಸ್ವಾಗತ ಕಮಾನು, ಶುಭ ಕೋರುವ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ಹೊಳೆಹೊನ್ನೂರು ರಸ್ತೆಯಲ್ಲಿ ರೈಲ್ವೆ ಗೇಟ್ ಮುಂಭಾಗ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಇನ್ನು, ನಗರದಾದ್ಯಂತ ಜಾತ್ರೆಗೆ ಶುಭಕೋರುವ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ವಿವಿಧ ಪಕ್ಷಗಳ ರಾಜಕಾರಣಿಗಳು, ದೇವಸ್ಥಾನ ಸಮಿತಿ, ವಿವಿಧ ಸಂಘಟನೆಗಳು ಜಾತ್ರೆಗೆ ಶುಭ ಕೋರುವ ಫ್ಲೆಕ್ಸ್ ಅಳವಡಿಸಿವೆ.
ಗುಡ್ಡೇಕಲ್ಲು ಶ್ರೀ ಬಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು ಆರಂಭವಾಗಿವೆ. ವಿವಿಧ ಮಳಿಗೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಮುಖ್ಯ ರಸ್ತೆಯಿಂದ ದೇಗುಲವನ್ನು ಸಂಪರ್ಕಿಸುವ ರಸ್ತೆಯಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಆಡಿಕೃತ್ತಿಗೆ ಜಾತ್ರೆ ಕುರಿತು ಪ್ರಚಾರ ಕಾರ್ಯ ಬಿರುಸು ಪಡೆದುಕೊಂಡಿದೆ. ಆಟೋಗಳಲ್ಲಿ ಮೈಕ್ ಅಳವಡಿಸಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ಪ್ರತಿ ಬಡಾವಣೆಗೂ ಆಟೋ ಮೂಲಕ ತೆರಳಿ ಜಾತ್ರೆಯ ಮಾಹಿತಿ ನೀಡಲಾಗುತ್ತಿದೆ.

ಲಕ್ಷ ಲಕ್ಷ ಭಕ್ತರು ಭಾಗಿಯಾಗುತ್ತಾರೆ
ಪುರಾಣ ಪ್ರಸಿದ್ಧ ಆಡಿಕೃತ್ತಿಗೆ ಜಾತ್ರೆಗೆ ಶಿವಮೊಗ್ಗ ಸೇರಿದಂತೆ ವಿವಿಧೆಡೆಯಿಂದ ಜನರು ಬರುತ್ತಾರೆ. ಆದರೆ ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಈ ಜಾತ್ರೆ ಸ್ಥಗಿತಗೊಂಡಿತ್ತು. ಲಾಕ್ ಡೌನ್, ಜಾತ್ರೆಗಳಿಗೆ ನಿಷೇಧ, ಹೆಚ್ಚು ಜನರು ಸೇರದಂತೆ ಪೂಜೆ ಸಲ್ಲಿಸಬೇಕು ಎಂಬ ಸರ್ಕಾರದ ಸೂಚನೆ ಹಿನ್ನಲೆ ಜಾತ್ರೆಯನ್ನು ನಿರ್ಬಂಧ ಮಾಡಲಾಗಿತ್ತು. ಈಗ ಕೋವಿಡ್ ಆತಂಕ ದೂರಾಗಿದ್ದು, ಮತ್ತೆ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತಿದೆ.
ಗುಡ್ಡೆಕಲ್ಲು ಶ್ರೀ ಬಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯಲ್ಲಿ ಲಕ್ಷ ಲಕ್ಷ ಸಂಖ್ಯೆ ಭಕ್ತರು ಪಾಲ್ಗೊಳ್ಳುತ್ತಾರೆ. ಶಿವಮೊಗ್ಗ, ಭದ್ರಾವತಿ ಸೇರಿದಂತೆ ಸುತ್ತಮುತ್ತ ಜಿಲ್ಲೆಗಳು, ಹೊರ ರಾಜ್ಯದಿಂದ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಕಾವಡಿ ಹೊತ್ತು ಹರೋ ಹರೋ ಭಜನೆ ಮಾಡುತ್ತಾ ದೇಗುಲಕ್ಕೆ ಬಂದು ಹರಕೆ ತೀರಿಸುತ್ತಾರೆ.

ದೇವಸ್ಥಾನದ ಇತಿಹಾಸವೇನು?
ಆಷಾಢ ಅಥವಾ ಶ್ರಾವಣ ಮಾಸದಲ್ಲಿ ಕೃತ್ತಿಕೆ ದಿನದಂದು ಈ ಉತ್ಸವ ಆಚರಿಸಲಾಗುತ್ತದೆ. ಮೊದಲನೆಯ ದಿನ ಭರಣಿ ಕಾವಡಿ ಅಂತಲೂ, ಎರಡನೆಯ ದಿನವನ್ನು ಆಡಿ ಕೃತ್ತಿಕೆ ಅಂತಲೂ ಆಚರಿಸಲಾಗುತ್ತದೆ. ತಮಿಳುನಾಡಿನಿಂದ ಇಲ್ಲಿಗೆ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರು 80 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಸಣ್ಣದಾದ ವಿಗ್ರಹ ಸ್ಥಾಪಿಸಿ ಪೂಜೆ ಮಾಡಲು ಆರಂಭಿಸಿದ್ದರು ಎಂಬ ಪ್ರತೀತಿ ಇದೆ.












Click it and Unblock the Notifications