ಕೇಂದ್ರ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ: ದಿನೇಶ್ ಗುಂಡೂರಾವ್
ಶಿವಮೊಗ್ಗ, ಆಗಸ್ಟ್.28: ಕೇಂದ್ರ ಸರ್ಕಾರ ಆಡಳಿತದ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದೆ. ಭ್ರಷ್ಟಾಚಾರ ನಿಲ್ಲಲಿಲ್ಲ. ಅತ್ಯಾಚಾರ ಹೆಚ್ಚಾಗಿದೆ. ಕಪ್ಪುಹಣ ವಾಪಾಸ್ ಬರಲಿಲ್ಲ. ಉದ್ಯೋಗ ಸೃಷ್ಟಿಯೇ ಆಗಲಿಲ್ಲ. ಆರ್ಥಿಕ ಬೆಳವಣಿಗೆ ಕುಂಟಿತಗೊಂಡಿದೆ. ಲೋಕಪಾಲ್ ಮಸೂದೆ ಜಾರಿಯಾಗಲಿಲ್ಲ. ಭಯೋತ್ಪಾದನೆ, ಪೆಟ್ರೋಲ್ ಬೆಲೆ, ರೂಪಾಯಿ ಬೆಲೆ ಹೆಚ್ಚಳ ಎಲ್ಲದರಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಶಿವಮೊಗ್ಗದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಎಂದೂ ಜನತೆಗೆ ಪ್ರಚೋದನೆ ಮಾಡಿ ಅದರಿಂದ ಲಾಭ ಪಡೆಯುವ ಕೆಲಸ ಮಾಡುವುದಿಲ್ಲ. ಆದರೆ ಬಿಜೆಪಿ, ಆರ್ಎಸ್ಎಸ್ ಜನರನ್ನು ಧರ್ಮದ ಹೆಸರಿನಲ್ಲಿ ವಂಚಿಸಲು ಹೊರಟಿದೆ. ಅನೈತಿಕ ರಾಜಕಾರಣ ಮಾಡುತ್ತಾ ದೇಶದ ಭವಿಷ್ಯವನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿದ್ದಾರೆ. ಇಂತಹ ಕೆಲಸವನ್ನು ಕೈಬಿಡಬೇಕು ಎಂದರು.
ಯುವ ಕಾಂಗ್ರೆಸ್ನಿಂದ ಕೆಪಿಸಿಸಿ ತನಕ, ದಿನೇಶ್ ಗುಂಡೂರಾವ್ ಪರಿಚಯ
ಬಿಜೆಪಿಯ ಅಮಿತ್ ಶಾ, ಶೋಭಾ ಕರಂದ್ಲಾಜೆ, ಅನಂತ್ ಕುಮಾರ್ ಹೆಗಡೆ ಸೇರಿದಂತೆ ಅನೇಕ ಮುಖಂಡರುಗಳು ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದರೂ ಕೂಡ ಮೋದಿಯವರು ಮೌನ ತಳೆದಿದ್ದಾರೆ. ಇದರಿಂದ ಅವರ ಮಾತುಗಳಿಗೆ ಮನ್ನಣೆ ನೀಡುತ್ತಿದ್ದಾರೆ ಎಂಬರ್ಥ ಎಂದು ಟೀಕಿಸಿದರು.
ಸಮನ್ವಯ ಸಮಿತಿಯಲ್ಲಿ ಜೆಡಿಎಸ್ ನಿಂದ ಒಬ್ಬರು ಇರಬೇಕು ಎಂಬ ದೇವೇಗೌಡರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಯಾರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬುದು ಜೆಡಿಎಸ್ ಗೆ ಬಿಟ್ಟ ವಿಚಾರ. ಆಡಳಿತದ ಎಲ್ಲ ವಿಚಾರಗಳು ಸಮನ್ವಯ ಸಮಿತಿಯಲ್ಲಿ ಚರ್ಚಿಸಿಯೇ ಮಾಡಲಾಗುತ್ತಿದೆ.
ಸಾಲ ಮನ್ನಾಕ್ಕೂ ಇದು ಹೊರತಾಗಿಲ್ಲ. ಎಲ್ಲವೂ ಸರಿಯಾಗಿದೆ. ಸಣ್ಣಪುಟ್ಟ ಗೊಂದಲಗಳನ್ನು ಸರಿಮಾಡಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರು ಭಾಷಣದಲ್ಲಿ ಸಹಜವಾಗಿ ಜನರು ಮತ್ತೆ ಅವಕಾಶ ನೀಡಿದರೆ ತಾವು ಮುಖ್ಯಮಂತ್ರಿಯಾಗುವುದಾಗಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಭದ್ರವಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಿರುವ ಸವಾಲುಗಳು!
ಸುಮಾರು 108 ಪೌರ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ಸಾಹ ಮೂಡಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಎಲ್ಲೆಡೆ ಪಕ್ಷಕ್ಕೆ ಉತ್ತಮ ಜನಬೆಂಬಲ ದೊರಕುತ್ತಿದೆ.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಆದ ಅಭಿವೃದ್ದಿ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಅಚ್ಚಳಿಯೇ ಉಳಿದಿದೆ. ಒಂದು ಸುಭದ್ರ ಸರ್ಕಾರವನ್ನು ಜನತೆಗೆ ನೀಡಲಾಗಿತ್ತು. ಕೊಟ್ಟ ಮಾತಿನಂತೆ ಎಲ್ಲ ಭರವಸೆಗಳನ್ನು ಈಡೇರಿಸಲಾಗಿತ್ತು. ಜನತೆ ಸರ್ಕಾರವನ್ನು ನಕಾರಾತ್ಮಕವಾಗಿ ನೋಡಲಿಲ್ಲ. ಇದೆಲ್ಲವೂ ಕಾಂಗ್ರೆಸ್ ಗೆಲುವಿಗೆ ಪೂರಕವಾಗಲಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಯುವ ಪಡೆ ಕಟ್ಟುತ್ತಿದ್ದಾರೆ ದಿನೇಶ್ ಗುಂಡೂರಾವ್
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮಿರಿತ್ತು. ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಸಾಧನೆ ಮಾಡಲಾಗಿತ್ತು. ಬಂಡಾವಾಳ ಹೂಡಿಕೆಯಲ್ಲೂ ರಾಜ್ಯ ಪ್ರಥಮ ಸ್ಥಾನ ಗಳಿಸಿತ್ತು. ಉದ್ಯೋಗ ಸೃಷ್ಟಿಯಲ್ಲೂ ಉತ್ತಮ ಸಾಧನೆ ತೋರಿದೆ. ಜನತೆಗೆ ಇದೆಲ್ಲವನ್ನು ತಿಳಿಸಿ ಹೇಳುತ್ತೇವೆ. ಆ ಮೂಲಕ ಮತಯಾಚನೆ ನಡೆಸುತ್ತೇವೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅನೇಕ ಕಡೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ, ಇಲ್ಲವೇ ತ್ರಿಕೋನ ಸ್ಪರ್ಧೆ ಇದೆ. ಆದರೂ ಕೂಡ ಫಲಿತಾಂಶ ಕಾಂಗ್ರೆಸ್ ಪರವಾಗಿಯೇ ಬರುತ್ತದೆ. ಏಕೆಂದರೆ ಕಾಂಗ್ರೆಸ್ ಅಭಿವೃದ್ದಿ ಪಕ್ಷ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲ ತಗ್ಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿರುವುದು ನಿಜ. ಬೂತ್ ಮಟ್ಟದಿಂದ ಸಂಘಟನೆಯನ್ನು ಮಾಡಲಾಗುವುದು. ಸಂಘಟನೆಗೆ ಒತ್ತು ಕೊಡಲಾಗುವುದು. ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಪ್ರಯತ್ನಿಸಲಾಗುವುದು. ಇಲ್ಲಿನ ಒಳಜಗಳಗಳನ್ನು ಸರಿಪಡಿಸಲಾಗುವುದು ಎಂದರು.
ಕಾಂಗ್ರೆಸ್ ಗೆ ಬಂಡಾಯವಾಗಿ ಕೆಲವರು ಚುನಾವಣೆಗೆ ನಿಂತಿದ್ದಾರೆ. ಟಿಕೆಟ್ ಹಂಚಿಕೆಯನ್ನು ಸರಿಯಾಗಿಯೇ ಮಾಡಲಾಗಿದೆ. ಆದರೂ ಪಕ್ಷದ ವಿರುದ್ದ ಸ್ಪರ್ಧಿಸಿರುವವರಿಗೆ ಈಗಾಗಲೇ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದರು.
ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಪ್ರಕರಣವನ್ನು ಮೊದಲು ಭೇದಿಸಿದ್ದು ಕರ್ನಾಟಕ ಪೊಲೀಸರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಇದರಿಂದ ಎಲ್ಲ ರೀತಿಯ ತನಿಖಾ ಸಂಸ್ಥೆಗಳಿಗೆ ಅನುಕೂಲವಾಗುತ್ತದೆ. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ನಾವು ಪ್ರಚೋದನಾಕಾರಿಯಾಗಿ ಮಾತನಾಡುವುದಿಲ್ಲ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಹೆಚ್.ಎಂ.ಚಂದ್ರಶೇಖರಪ್ಪ, ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಎನ್.ರಮೇಶ್, ವೈ.ಹೆಚ್.ನಾಗರಾಜ್, ಇಸ್ಮಾಯಿಲ್ ಖಾನ್, ಹೆಚ್.ಎಸ್.ಸುಂದರೇಶ್, ವಿಶ್ವನಾಥ್ ಕಾಶಿ, ವಿಜಯಲಕ್ಷ್ಮಿ ಪಾಟೀಲ್ ಉಪಸ್ಥಿತರಿದ್ದರು.