ತೀರ್ಥಹಳ್ಳಿ : ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಡಿಸಿ ಭೇಟಿ
ಶಿವಮೊಗ್ಗ, ಜೂನ್ 14 : ತೀರ್ಥಹಳ್ಳಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಲೋಕೇಶ್ ಗುರುವಾರ ತೀರ್ಥಹಳ್ಳಿ ತಾಲೂಕಿನಲ್ಲಿ ವರ್ಷದ ವಾಡಿಕೆ ಮಳೆಗಿಂತ ಹೆಚ್ಚಾಗಿ ಮಳೆಯಾದ ಮಂಡಗದ್ದೆ ಹೋಬಳಿಯ ಬೊಮ್ಮನಹಳ್ಳಿ ಹಾಗೂ ಗಬಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮಗಳಲ್ಲಿ ಮನೆಗಳ ಮೇಲ್ಛಾವಣಿಯ ಮೇಲೆ ಮರಗಳು ಬಿದ್ದು ಹಾನಿಯಾಗಿದೆ. ತಹಶೀಲ್ದಾರ್ ಹಾಗೂ ಸಿಬ್ಬಂದಿಗಳ ಜೊತೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಹಾನಿಗೊಳಗಾದ ಕುಟುಂಬದವರಿಗೆ ಶೀಘ್ರವೇ ಸೂಕ್ತ ಪರಿಹಾರವನ್ನು ಒದಗಿಸುವಂತೆ ತಹಶೀಲ್ದಾರ್ ಆನಂದನಾಯ್ಕ ಅವರಿಗೆ ಸೂಚಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರು ಜಾಗರೂಕರಾಗಿರುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಮಳೆಹಾನಿ ಸಂಭವವಿರುವ ಕಡೆ ಭೇಟಿ ನೀಡಿ, ಉನ್ನತಾಧಿಕಾರಿಗಳವರಿಗೆ ಮಾಹಿತಿಯನ್ನು ನೀಡುವಂತೆ ನಿರ್ದೇಶನ ನೀಡಿದರು.
ತೀರ್ಥಹಳ್ಳಿಯಲ್ಲಿ ಹಲವು ವರ್ಷಗಳ ಬಳಿಕ ಒಂದೇ ದಿನ ದಾಖಲೆಯ ಮಳೆಯಾಗಿದೆ. 231.80 ಮಿ.ಮೀ.ಮಳೆಯಾಗಿದ್ದು, ಇದರಿಂದಾಗಿ ತುಂಗಾ ನದಿಗೆ ಭಾರೀ ನೀರು ಹರಿದು ಬಂದಿದೆ. ಗಾಜನೂರಿನ ತುಂಗಾ ಜಲಾಶಯದ ಒಳಹರಿವು 47,651 ಕ್ಯುಸೆಕ್ಗೆ ಏರಿಕೆಯಾಗಿದೆ.
ಬುಧವಾರ ತೀರ್ಥಹಳ್ಳಿಯಲ್ಲಿ 231.80 ಮಿ.ಮೀ. ಮಳೆಯಾಗಿದೆ. ಯಡೂರಿನಲ್ಲಿ 198 ಮಿ.ಮೀ., ಹುಲಿಕಲ್ನಲ್ಲಿ 119 ಮಿ.ಮೀ., ಸಾಗರದಲ್ಲಿ 38.80 ಮಿ.ಮೀ.ಮಳೆಯಾಗಿದೆ.












Click it and Unblock the Notifications