Breaking; ಶಿವಮೊಗ್ಗ-ಬೆಂಗಳೂರು ನಡುವೆ ಡೆಮು ರೈಲು, ವೇಳಾಪಟ್ಟಿ
ಶಿವಮೊಗ್ಗ, ಸೆಪ್ಟೆಂಬರ್ 14: ಭಾರತೀಯ ರೈಲ್ವೆ ಶಿವಮೊಗ್ಗ-ಬೆಂಗಳೂರು ನಡುವೆ ಡೆಮು ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿದೆ. ಈ ರೈಲಿನ ಮೂಲಕ ಜನರು ಹಗಲು ಹೊತ್ತಿನಲ್ಲಿ ಉಭಯ ನಗರಗಳ ನಡುವೆ ಸಂಚಾರ ನಡೆಸಬಹುದಾಗಿದೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದರು. ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಡೆಮು ರೈಲು ಸಂಚಾರ ಆರಂಭಿಸುವಂತೆ ಮನವಿ ಮಾಡಲಾಗಿತ್ತು.
ಸಂಸದರ ಮನವಿ ಪುರಸ್ಕರಿಸಿರುವ ರೈಲ್ವೆ ಇಲಾಖೆ ಅಧಿಕಾರಿಗಳು ಅರಸೀಕೆರೆ ನಡುವೆ ಸಂಚರಿಸುತ್ತಿದ್ದ ಡೆಮು ರೈಲನ್ನು ಶಿವಮೊಗ್ಗದ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ವೇಳಾಪಟ್ಟಿ; ಶಿವಮೊಗ್ಗದಿಂದ ಮಧ್ಯಾಹ್ನ 1.05ಕ್ಕೆ ರೈಲು ಹೊರಡಲಿದೆ. ಸಂಜೆ 5.30ಕ್ಕೆ ತುಮಕೂರು ತಲುಪಲಿದೆ. 5.40ಕ್ಕೆ ತುಮಕೂರಿನಿಂದ ಹೊರಟು 6.50ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಯಶವಂತಪುರದಿಂದ ಹೊರಡುವ ರೈಲು ಬಾಣಸವಾಡಿಗೆ 7.40ಕ್ಕೆ ತಲುಪುತ್ತದೆ.
ಬೆಳಗ್ಗೆ 5.50ಕ್ಕೆ ಬಾಣಸವಾಡಿಯಿಂದ ಹೊರಡುವ ರೈಲು, 6.40ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ. 7.55ಕ್ಕೆ ತುಮಕೂರು ತಲುಪಲಿದೆ. 8.05ಕ್ಕೆ ತುಮಕೂರಿನಿಂದ ಹೊರಟು, ಮಧ್ಯಾಹ್ನ 12.30ಕ್ಕೆ ಶಿವಮೊಗ್ಗ ನಿಲ್ದಾಣವನ್ನು ತಲುಪಲಿದೆ.
ಶಿವಮೊಗ್ಗದಿಂದ ಜನರು ರೈಲು ಹತ್ತುವಾಗ ಬಾಣಸವಾಡಿ ತನಕ ಟಿಕೆಟ್ ಪಡೆಯಬಹುದಾಗಿದೆ. ಈ ರೈಲು ಸೇವೆಯನ್ನು ಜನರು ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.
ಅಧಿಕಾರಿಗಳ ಭೇಟಿ; ಆಗಸ್ಟ್ 29ರಂದು ಶಿವಮೊಗ್ಗ-ತಾಳುಗುಪ್ಪ ವಿಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯ ವೀಕ್ಷಣೆಗಾಗಿ ಶಿವಮೊಗ್ಗಕ್ಕೆ ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕುಮಾರ್ ಭೇಟಿ ನೀಡಿದ್ದರು.
ಆಗ ಸಂಸದ ಬಿ. ವೈ. ರಾಘವೇಂದ್ರ ಶಿವಮೊಗ್ಗ ಜಿಲ್ಲೆಯ ವಿವಿಧ ರೈಲು ಯೋಜನೆಗಳ ಕುರಿತು ಅವರ ಜೊತೆ ಚರ್ಚೆ ನಡೆಸಿದ್ದರು. ಮುಖ್ಯವಾಗಿ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗದ ಕುರಿತು ಚರ್ಚಿಸಲಾಗಿತ್ತು.
ಕೋಟೆಗಂಗೂರು ಕೋಚಿಂಗ್ ಡಿಪೋ, ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲಿಸುವ ಬಗ್ಗೆ, ಸಾಗರದ ಜಂಬಗಾರು ರೈಲ್ವೆ ನಿಲ್ದಾಣದ ಅಭಿವೃದ್ಧಿ ಕುರಿತು, ಶಿವಮೊಗ್ಗ ನಗರ ಮತ್ತು ತಾಳಗುಪ್ಪ ರೈಲ್ವೆ ನಿಲ್ದಾಣದ ಉನ್ನತೀಕರಣ, ತಾಳಗುಪ್ಪ-ಶಿರಸಿ-ತಡಸ-ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗದ ಕುರಿತು ಚರ್ಚಿಸಿದ್ದರು.
ರೈಲು ಸಂಖ್ಯೆ 16580/ 16581 ಯಶವಂತಪುರ-ಶಿವಮೊಗ್ಗ-ಯಶವಂತಪುರ ರೈಲು ವಾರಕ್ಕೆ ಮೂರು ದಿನ ಸಂಚಾರ ನಡೆಸುತ್ತಿದೆ. ಈ ರೈಲನ್ನು ವಾರಪೂರ್ತಿ ವಿಸ್ತರಣೆ ಮಾಡಲು ಮನವಿ ಸಲ್ಲಿಸಲಾಗಿದೆ.












Click it and Unblock the Notifications