ಶಿವಮೊಗ್ಗದಲ್ಲಿ ರಸ್ತೆ ನಟ್ಟನಡುವೆ ಉದ್ಭವವಾಯ್ತು ಹುತ್ತ; ಏನಿದರ ಹಿಂದಿನ ತಂತ್ರ?
ಶಿವಮೊಗ್ಗ, ನವೆಂಬರ್ 16: ಶಿವಮೊಗ್ಗದ ಜೈಲ್ ಸರ್ಕಲ್ ನಲ್ಲಿ ಬೆಳ್ಳಂಬೆಳಿಗ್ಗೆ ವಾಕಿಂಗ್ ಬಂದವರಿಗೆ ಒಂದು ಅಚ್ಚರಿ ಕಾದಿತ್ತು. ರಸ್ತೆಯಲ್ಲಿ, ಅದೂ ನಟ್ಟನಡುವೆ ಹುತ್ತವೊಂದು ಉದ್ಭವವಾಗಿತ್ತು. ಹುತ್ತದ ಮೇಲೇ ಹಾವೊಂದು ಹೆಡೆ ಎತ್ತಿ ಕೂತಂತಿತ್ತು. ಅರೆ, ನಿನ್ನೆವರೆಗೂ ಇಲ್ಲದಿದ್ದ ಹುತ್ತ ಅದೆಲ್ಲಿಂದ ಪ್ರತ್ಯಕ್ಷವಾಯಿತು ಎಂದು ಹತ್ತಿರ ಹೋಗಿ ಕಣ್ಣರಳಿಸುತ್ತಿದ್ದರು ಜನ.
ಹೀಗೆ ರಸ್ತೆ ನಡುವೆ ಏಕಾಏಕಿ ಹುತ್ತ ಹುಟ್ಟಿಕೊಳ್ಳುವ ಹಿಂದೆ ಒಂದು ತಂತ್ರವೇ ನಡೆದಿದೆ. ಆ ತಂತ್ರ ಮತ್ತೇನಲ್ಲ, ಪಾಲಿಕೆ ತೋಡಿ ಬಿಟ್ಟಿದ್ದ ಮಣ್ಣು.
ಶಿವಮೊಗ್ಗ ಮಹಾನಗರ ಪಾಲಿಕೆಯವರು ಜೈಲ್ ವೃತ್ತದಲ್ಲಿ ಗುಂಡಿ ಅಗಿದು ಅದನ್ನು ಮುಚ್ಚುವಾಗ ಸುಮಾರು ಎರಡು ಅಡಿಯಷ್ಟು ಎತ್ತರದ ಮಣ್ಣಿನ ದಿಬ್ಬವನ್ನು ಹಾಗೇ ಬಿಟ್ಟಿದ್ದರು. ಇದರಿಂದಾಗಿ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ಈ ಸಮಸ್ಯೆಯನ್ನು ಗಮನಿಸಿದ ಪ್ರಜಾಕೀಯ ಪಕ್ಷದ ವೆಂಕಟೇಶ್, ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪಾಲಿಕೆ ಗಮನಕ್ಕೆ ತರಬೇಕು ಎಂದು ಆ ಮಣ್ಣಿನಲ್ಲೇ ದಿಬ್ಬ ನಿರ್ಮಿಸಿ, ಅರಿಶಿಣ ಕುಂಕುಮ ಹಚ್ಚಿ ಹಾವಿನ ಹುತ್ತದಂತೆ ಮಾಡಿ ಕೃತಕ ಹಾವನ್ನೂ ಇಟ್ಟು ಪಾಲಿಕೆಯ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ದಿಬ್ಬಕ್ಕೆ ಹೂವಿನ ಹಾರ, ಊದುಬತ್ತಿ ಹಚ್ಚಿ ಪೂಜೆ ಮಾಡಿ "ರಾಜಕೀಯದ ಕೊಡುಗೆ ಬದಲಾವಣೆಗಾಗಿ" ಎಂಬ ನಾಮಫಲಕ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ವಿಡಿಯೋ ಮಾಡಿ ಪಾಲಿಕೆಗೆ ಎಚ್ಚರಿಸಲು ಮುಂದಾದರು.
ಈ ಕುರಿತು ಒನ್ ಇಂಡಿಯಾದೊಂದಿಗೆ ಮಾತನಾಡಿದ ವೆಂಕಟೇಶ್, "ಪಾಲಿಕೆಯವರು ಕಾಟಾಚಾರಕ್ಕೆ ಕೆಲಸಗಳನ್ನು ಮಾಡುತ್ತಿದ್ದಾರೆ. ಸರ್ಕಲ್ ಮಧ್ಯದಲ್ಲಿ ಇಷ್ಟು ದೊಡ್ಡ ಮಣ್ಣಿನ ದಿಬ್ಬ ಹಾಗೇ ಬಿಟ್ಟಿರುವುದರಿಂದ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಜನತೆಗೆ ತಿಳಿಯಲಿ ಎಂದು ಈ ರೀತಿ ಪ್ರತಿಭಟನೆ ಮಾಡಿದ್ದೇನೆ" ಎಂದು ತಿಳಿಸಿದರು.












Click it and Unblock the Notifications