ಶಿವಮೊಗ್ಗ: ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಮಗುವಿನ ಪ್ರಾಣ
ಶಿವಮೊಗ್ಗ, ಏಪ್ರಿಲ್ 28: ಆಟೋ ಚಾಲಕರೊಬ್ಬರ ಸಮಯ ಪ್ರಜ್ಞೆ ಮತ್ತು ಧೈರ್ಯ ಮಗುವಿನ ಪ್ರಾಣ ಕಾಪಾಡಿದೆ. ಶಿವಮೊಗ್ಗ ನಗರದ ಪ್ರಮುಖ ರಸ್ತೆಯೊಂದರ ಪಕ್ಕದಲ್ಲಿ ತೋಡಲಾಗಿದ್ದ ಗುಂಡಿಯೊಳಗೆ ಬಿದ್ದ ಮಗುವನ್ನು ಆಟೋ ಚಾಲಕ ರಕ್ಷಣೆ ಮಾಡಿದ್ದಾರೆ.
ಶಿವಮೊಗ್ಗದ ಆಲ್ಕೊಳ ಸರ್ಕಲ್ನಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದ್ದು, ಆಟೋ ಚಾಲಕ ಲೋಕೇಶ್ ಅವರ ಸಮಯ ಪ್ರಜ್ಞೆ ಭಾರಿ ದುರ್ಘಟನೆಯನ್ನು ತಪ್ಪಿಸಿದೆ.
ಏನಿದು ಘಟನೆ?
ಬುಧವಾರ ರಾತ್ರಿ ತಾಯಿ ಮತ್ತು ಮೂರು ವರ್ಷದ ಮಗು ಖಾಸಗಿ ಬಸ್ನಲ್ಲಿ ಆಗಮಿಸಿದ್ದಾರೆ. ಆಲ್ಕೊಳ ಸರ್ಕಲ್ನಲ್ಲಿ ಬಸ್ ಇಳಿದಿದ್ದಾರೆ. ಮಗುವನ್ನು ಬಸ್ನಿಂದ ಇಳಿಸಿ, ಲಗೇಜ್ ಕೆಳಗಿಳಿಸಿ ಪಕ್ಕಕ್ಕಿಡಲು ಮಹಿಳೆ ಮುಂದಾಗಿದ್ದಾರೆ. ಇಷ್ಟು ಹೊತ್ತಿಗೆ ಮಗು ನಾಪತ್ತೆಯಾಗಿತ್ತು.

ಗುಂಡಿಗೆ ಬಿದ್ದ ಮಗು
ಆಲ್ಕೊಳ ಸರ್ಕಲ್ ಅಯ್ಯಂಗಾರ್ ಬೇಕರಿ ಸಮೀಪ ರಸ್ತೆ ಪಕ್ಕದಲ್ಲೆ ದೊಡ್ಡ ಗುಂಡಿ ಇದೆ. ತಾಯಿ ಲಗೇಜ್ ಇಳಿಸಿಕೊಳ್ಳುವ ಹೊತ್ತಿಗೆ ಮಗು ಆ ಗುಂಡಿಯೊಳಗೆ ಬಿದ್ದು, ನೀರಿನಲ್ಲಿ ಮುಳುಗುತ್ತಿತ್ತು. ಇದನ್ನು ಗಮನಿಸಿದ ಆಟೋ ಚಾಲಕ ಲೋಕೇಶ್ ಅವರು ಗುಂಡಿಗೆ ಜಿಗಿದಿದ್ದಾರೆ. ಮಗುವನ್ನು ಕಾಪಾಡಿದ್ದಾರೆ.
ಆಟೋ ಚಾಲಕ ಲೋಕೇಶ್ ಅವರ ಸಮಯ ಪ್ರಜ್ಞೆಯಿಂದ ದುರ್ಘಟನೆ ತಪ್ಪಿದ್ದು, ತಾಯಿ ಮತ್ತು ಮಗು ತಕ್ಷಣ ಸ್ಥಳದಿಂದ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.

ಅಧಿಕಾರಿಗಳಿಗೆ ಹಿಡಿ ಶಾಪ
ಆಲ್ಕೊಳ ಸರ್ಕಲ್ನಲ್ಲಿ ರಸ್ತೆ ಪಕ್ಕದಲ್ಲಿ ದೊಡ್ಡ ಗುಂಡಿ ತೆಗೆಯಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಈ ಗುಂಡಿ ತೆಗೆದಿರಬಹುದು ಎಂದು ಸ್ಥಳೀಯರು ಮತ್ತು ಆಟೋ ಚಾಲಕರು ಆಪಾದಿಸುತ್ತಾರೆ. ಘಟನೆ ಕುರಿತು ಕಳೆದ ರಾತ್ರಿಯೇ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರ ತಿಳಿಸಲಾಗಿದೆ. ಇನ್ನು ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ದೀಪಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications