ಶಿವಮೊಗ್ಗದಲ್ಲಿ ಅಪಾರ ಬೆಂಬಲಿಗರೊಂದಿಗೆ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ
ಶಿವಮೊಗ್ಗ, ಮಾರ್ಚ್ 28:ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಇಂದು ಗುರುವಾರ ನಾಮಪತ್ರ ಸಲ್ಲಿಸಿದರು.
ಇಂದು ರಾಯರ ವಾರ. ಹಾಗಾಗಿ ಹಿರಿಯರ ಆಶೀರ್ವಾದದೊಂದಿಗೆ ಶುಭ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಿರುವುದಾಗಿ ತಿಳಿಸಿದ ರಾಘವೇಂದ್ರ, ಈ ಬಾರಿ ಜಿಲ್ಲೆಯ ಎಲ್ಲಾ ಬೂತ್ಗಳಲ್ಲೂ ಹೆಚ್ಚು ಮತ ಸಿಗಲಿದ್ದು, ಅತ್ಯಧಿಕ ಮತಗಳ ಪಡೆಯುವ ಮೂಲಕ ಗೆಲ್ಲುವ ವಿಶ್ವಾಸವಿದೆ ಎಂದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಮ್ಮ ತಂದೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ಹೆಲಿಕಾಪ್ಟರ್ ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಬರಲು ಸಾಧ್ಯವಾಗಿಲ್ಲ. ಸಂಜೆ ವೇಳೆಗೆ ಅವರು ಶಿವಮೊಗ್ಗಕ್ಕೆ ಬರಲಿದ್ದಾರೆ ಎಂದರು.
ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ದಂಪತಿ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಹರತಾಳು ಹಾಲಪ್ಪ, ಎಸ್.ರುದ್ರೇಗೌಡ ಇದ್ದರು.
ಈ ಸಂದರ್ಭದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಗೌಪ್ಯತೆ ಕಾಪಾಡಬೇಕಾದ ಮುಖ್ಯಮಂತ್ರಿಗಳೇ ಐಟಿ ದಾಳಿಯ ಬಗ್ಗೆ ಮೊದಲೇ ಹೇಳಿಕೆ ನೀಡಿದ್ದಾರೆ. ಹಾಗಾಗಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವೇ ರಾಜ್ಯಪಾಲರು ವಜಾಗೊಳಿಸಬೇಕು. ಐಟಿ ಇಲಾಖೆ ಈಗಿನಿಂದ ಇಲ್ಲ. ಮೊದಲಿನಿಂದಲೂ ಕೆಲಸ ಮಾಡುತ್ತಿದೆ. ಮಂಡ್ಯ ಮತ್ತು ಹಾಸನ ಭಾರತದಲ್ಲೇ ಇದೆ. ಐಟಿ ದಾಳಿ ನಡಿಬಾರ್ದು ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.

ಸ್ವಗೃಹದಲ್ಲಿ ಪೂಜೆ ನೆರವೇರಿಸಿದ ರಾಘವೇಂದ್ರ
ನಾಮಪತ್ರ ಸಲ್ಲಿಕೆಗೂ ಮುನ್ನ ಬಿ.ವೈ.ರಾಘವೇಂದ್ರ ಅವರು, ಶಿಕಾರಿಪುರದ ತಮ್ಮ ಸ್ವಗೃಹದಲ್ಲಿ ಕುಟುಂಬದವರೊಂದಿಗೆ ಪೂಜೆ ನೆರವೇರಿಸಿ, ನಂತರ ಶ್ರೀ ಹುಚ್ಚುರಾಯ ಸ್ವಾಮಿ ಹಾಗೂ ರಾಯರ ಸನ್ನಿಧಿಯಲ್ಲಿ ನೆರವೇರಿಸಿದರು.

ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗಿ
ಬೆಳಗ್ಗೆ 9-20ಕ್ಕೆ ಶಿವಮೊಗ್ಗ ರವೀಂದ್ರ ನಗರದ ಗಣಪತಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಬಿ.ವೈ.ರಾಘವೇಂದ್ರ, ಬೆಳಗ್ಗೆ 10.30 ಕ್ಕೆ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್ ನಿಂದ ಬೃಹತ್ ಮೆರವಣಿಗೆಯ ಮೂಲಕ ಎನ್.ಇ.ಎಸ್. ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು.

ಅನ್ಯ ಕಾರ್ಯದ ನಿಮಿತ್ತ ಬಂದಿಲ್ಲ
ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬರುವುದಾಗಿ ಪಕ್ಷದ ಮುಖಂಡರು ತಿಳಿಸಿದ್ದರು. ಆದರೆ, ಅನ್ಯ ಕಾರ್ಯದ ನಿಮಿತ್ತ ಅವರು ಬಂದಿಲ್ಲ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.

ಸಾರ್ವಜನಿಕ ಸಭೆಯಲ್ಲಿದ್ದ ಗಣ್ಯರು
ಇನ್ನು ಸಾರ್ವಜನಿಕ ಸಭೆಯಲ್ಲಿ ಮಾಜಿ ಸಚಿವ ಶ್ರೀರಾಮುಲು, ಗೋವಿಂದ ಕಾರಜೋಳ, ರೇಣುಕಚಾರ್ಯ, ವಿಧಾನ ಪರಿಷತ್ ನ ಮಾಜಿ ಸಭಾಪತಿಗಳಾದ ಶ್ರೀ ಡಿ. ಎಚ್.ಶಂಕರಮೂರ್ತಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರಿದ್ದರು.












Click it and Unblock the Notifications