ಶಿವಮೊಗ್ಗ ಸ್ಪೋಟ: ಚರ್ಚೆಗೆ ಅವಕಾಶ ನೀಡಿ ಪರಿಷತ್ ಸಭಾಪತಿ ರೂಲಿಂಗ್
ಶಿವಮೊಗ್ಗ, ಜನವರಿ 29: ಶಿವಮೊಗ್ಗ ಜಿಲ್ಲೆಯ ಹುಣಸೋಡುವಿನಲ್ಲಿ ನಡೆದ ಭೀಕರ ಜಿಲೆಟಿನ್ ಸ್ಪೋಟದ ಕುರಿತು ಚರ್ಚಿಸಲು ಅವಕಾಶ ನೀಡುವುದಾಗಿ ವಿಧಾನ ಪರಿಷತ್ ಸಭಾಪತಿ ಭರವಸೆ ನೀಡಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರು ಶಿವಮೊಗ್ಗದಲ್ಲಿ ನಡೆದ ಕಲ್ಲುಕ್ವಾರಿ ಸ್ಫೋಟ ಪ್ರಕರಣದ ಕುರಿತು ಚರ್ಚೆಗೆ ಅನುಮತಿ ಕೋರಿ ನಿಲುವಳಿ ಸೂಚನೆಯನ್ನು ಪ್ರಶ್ನೋತ್ತರ ಕಲಾಪದ ನಂತರ ಕೈಗೆತ್ತಿಕೊಳ್ಳುವುದಾಗಿ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ರೂಲಿಂಗ್ ನೀಡಿದರು.
ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ನಿಯಮ 59ರ ಅಡಿ ನಿಲುವಳಿ ಸೂಚನೆ ಪ್ರಸ್ತಾಪ ಮಾಡಲು ಅವಕಾಶ ಕೋರಿದರು. ಹುಣಸೋಡು ಗ್ರಾಮದಲ್ಲಿ ನಡೆದ ಸ್ಪೋಟ ಘಟನೆಯನ್ನು ಪ್ರಸ್ತಾಪ ಮಾಡಿದರು.

ಸ್ಪೋಟ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಹಲವು ಸ್ಥಳೀಯ ಮನೆಗಳಿಗೆ ಹಾನಿ ಸಂಭವಿಸಿದೆ. ಈ ದುರಂತ ಘಟನೆ ಹಾಗೂ ಅಕ್ರಮ ಗಣಿಗಾರಿಕೆ ಮಹತ್ವದ ವಿಷಯವಾಗಿದ್ದು, ಚರ್ಚೆಗೆ ಅವಕಾಶ ನೀಡುವಂತೆ ಎಸ್.ಆರ್ ಪಾಟೀಲ್ ಕೋರಿದರು.
ಈ ನಿಲುವಳಿಗೆ ಸಭಾನಾಯಕ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು. ಪ್ರಶ್ನೋತ್ತರ ಆದ ಮೇಲೆ ಮಂಡಿಸಬೇಕು ಎಂದರು. ನಂತರ ಪ್ರಶ್ನೋತ್ತರ ಕಲಾಪದ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ರೂಲಿಂಗ್ ನೀಡಿದರು.
ಇತ್ತೀಚಿಗೆ ಶಿವಮೊಗ್ಗ ಸ್ಪೋಟದ ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದ್ದರು. ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಲಾಗಿದೆ.












Click it and Unblock the Notifications