ಭದ್ರಾವತಿ ಹೊಸ ಸೇತುವೆ ಜಲಾವೃತ, ಸಂಚಾರ ಸ್ಥಗಿತ, 120 ಮಂದಿ ಸ್ಥಳಾಂತರ
ಶಿವಮೊಗ್ಗ, ಜುಲೈ 15: ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಬಿಡುಗಡೆ ಮಾಡಿರುವುದರಿಂದ ಪರಿಣಾಮ ಭದ್ರಾವತಿಯ ಹೊಸ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ಕಳೆದ ರಾತ್ರಿಯಿಂದಲೆ ಈ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮಲೆನಾಡಿನಲ್ಲಿ ಮಳೆ ಅಬ್ಬರ ಹೆಚ್ಚಾದ ಕಾರಣ ಭದ್ರಾ ಜಲಾಶಯ ಭರ್ತಿಯಾಗಿದೆ. ಗುರುವಾರ ಮಧ್ಯಾಹ್ನದಿಂದ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್ಗಳನ್ನು ತೆರೆದು ನೀರನ್ನು ಹೊರಗೆ ಬಿಡಲಾಗಿದೆ.
ಭದ್ರಾ ಡ್ಯಾಂ ಭರ್ತಿ; ನದಿಗೆ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಜಲಾಶಯದಲ್ಲಿ ನೀರು ಭರ್ತಿಯಾಗಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ ಎಂದು ಇಂಜಿನಿಯರ್ಗಳು ತಿಳಿಸಿದ್ದು, ರಾತ್ರಿ ವೇಳೆ ಭಾರಿ ಪ್ರಮಾಣದ ನೀರನ್ನು ಜಲಾಶಯದಿಂದ ಹೊರ ಬಿಡಲಾಯಿತು. ಗುರುವಾರ ಸಂಜೆ ವೇಳೆಗೆ ಭದ್ರಾ ಜಲಾಶಯದಿಂದ 52 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಬಿಡಲಾಯಿತು. ಇದರಿಂದ ಭದ್ರಾ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ.
ಮುಳುಗಿದ ಭದ್ರಾವತಿ ಹೊಸ ಸೇತುವೆ
ಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಭದ್ರಾವತಿಯ ಹೊಸ ಸೇತುವೆ ಮುಳುಗಡೆಯಾಗಿದೆ. KSRTC ಬಸ್ ನಿಲ್ದಾಣದ ಪಕ್ಕದಲ್ಲಿರುವ ಹೊಸ ಸೇತುವೆಯ ಮಟ್ಟಕ್ಕೆ ನೀರು ಬರುತ್ತಿದ್ದಂತೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಶುಕ್ರವಾರವೂ ಕೂಡ ಬೆಳಗಿನ ಜಾವದ ವೇಳೆಗೆ ಹೊಸ ಸೇತುವೆ ಮೇಲಿಂದ ನೀರು ಹರಿಯುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಮುಂಭಾಗ ಬ್ಯಾರಿಕೇಡ್ ಹಾಕಲಾಗಿದೆ. ಸೇತುವೆ ಬಳಿಗೆ ಯಾರೂ ತೆರಳದಂತೆ ನಿರ್ಬಂಧ ವಿಧಿಸಲಾಗಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.ಭದ್ರಾ ಡ್ಯಾಂನಿಂದ ನೀರು ಬಿಡುಗಡೆ: ಒಂದೆಡೆ ಸಂತಸ, ಮತ್ತೊಂದೆಡೆ ಭಯ?
ಕವಲುಗಂದಿ ಬಡಾವಣೆಯ 30 ಮನೆ ಖಾಲಿ
ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ, ಗುರುವಾರ ಸಂಜಯೇ ಭದ್ರಾವತಿಯ ಕವಲುಗಂದಿ ಬಡಾವಣೆಯ 30 ಮನೆಗಳನ್ನು ಖಾಲಿ ಮಾಡಿಸಿ, ಅಲ್ಲಿದ್ದ 120 ಜನರನ್ನು ಒಕ್ಕಲಿಗ ಸಭಾ ಭವನದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲೆ ಅವರಿಗೆ ಊಟ ವಸತಿ ಕಲ್ಪಿಸಲಾಗಿದೆ.
ವಸತಿ ನಿಲಯದ 35 ಮಕ್ಕಳ ಸ್ಥಳಾಂತರ
ಭದ್ರಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ, ಹುತ್ತಾ ಕಾಲೋನಿಯ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ 35 ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಜೊತೆಗೆ ಏಕಿಷಾ ಕಾಲೋನಿಯ ನಿವಾಸಿಗಳನ್ನು ಅಲ್ಲಿಂದ ತೆರವುಗೊಳಿಸಿ, ಗುಂಡೂರಾವ್ ಶೆಡ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ರಾತ್ರಿ ಡಿಸಿ ಡಾ.ಸೆಲ್ವಮಣಿ ಅವರು ಭೇಟಿ ನೀಡಿ ಕಾಳಜಿ ಕೇಂದ್ರದ ವ್ಯವಸ್ಥೆ ಗಮನಿಸಿದ್ದಾರೆ.
ಸಾವಿರಾರು ಎಕರೆ ಭೂಮಿಗೆ ನೀರೊದಗಿಸುವ ಭದ್ರೆ
ಭದ್ರಾ ಜಲಾಶಯ ತುಂಬಿ, ನೀರನ್ನು ಹೊರ ಬಿಟ್ಟಿರುವುದರಿಂದ ಕೆಲವು ಕಡೆ ಪ್ರವಾಹದ ಭೀತಿ ಎದುರಾಗಿದೆ, ಆದರೆ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ ಸೇರಿದಂತೆ ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ರೈತರ ಮುಖಮದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಸಾವಿರಾರು ಎಕರೆ ಭೂಮಿ ಕೃಷಿ ಭೂಮಿಗೆ ಭದ್ರೆ ನೀರು ಒದಗಿಸುತ್ತಿದ್ದಾಳೆ. ಶಿವಮೊಗ್ಗ ತಾಲೂಕು ಕೊಡ್ಲಿಯಲ್ಲಿ ಭದ್ರೆಯು ತುಂಗಾ ನದಿಗೆ ಸೇರಿ ತುಂಗ-ಭದ್ರಾ ನದಿಯಾಗಿ ಹರಿದು ಮುಂದೆ ಕೃಷ್ಣೆಯನ್ನು ಸೇರಿ ಹಿಂದೂ ಮಹಾಸಾಗರಕ್ಕೆ ಸೇರಿಕೊಳ್ಳುತ್ತದೆ.