ಕೃಷಿಭೂಮಿ ಬಿಟ್ಟು ಯೋಜನೆ ಮಾರ್ಗ ಬದಲಾಗುವವರೆಗೂ ಧರಣಿ: ಬಿ.ಡಿ.ಹಿರೇಮಠ
ಶಿವಮೊಗ್ಗ, ಜನವರಿ 20: ತಾಳಗುಂದ, ಉಡುತಣಿ ಹಾಗೂ ಹೊಸೂರು ಹೋಬಳಿಗಳ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಯ ಪೈಪ್ಲೈನ್ ನ್ನು ರೈತರ ಕೃಷಿ ಭೂಮಿಯಲ್ಲಿ ಅಳವಡಿಸಬಾರದು, ಪರ್ಯಾಯ ಮಾರ್ಗದಲ್ಲಿ ನೀರನ್ನು ತೆಗೆದುಕೊಂಡು ಹೋಗಬೇಂದು ರಟ್ಟಿಹಳ್ಳಿ ತಾಲ್ಲೂಕಿನ ನಮ್ಮ ಭೂಮಿ, ನಮ್ಮ ಹಕ್ಕು ಹೋರಾಟ ಸಮಿತಿಯ ಸಾಮಾಜಿಕ ಹೋರಾಟಗಾರ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ಪಾದಯಾತ್ರೆ ಶಿಕಾರಿಪುರಕ್ಕೆ ಆಗಮಿಸಿದೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕು ಚಟ್ನಹಳ್ಳಿಯಿಂದ ಆರಂಭವಾಗಿರುವ ಈ ಪಾದಯಾತ್ರೆಯು ಮಾಸೂರು, ನಿಡನೇಗಿಲು, ವರಾಹ ಮೂಲಕ ಪೈಪ್ ಲೈನ್ ಹಾದುಹೋಗುವ ಮಾರ್ಗದ ಉದ್ದಕ್ಕೂ ಸಾಗಿಬಂದಿದ್ದು, ಅಡಗಂಟಿ ಮೂಲಕ ಶಿಕಾರಿಪುರ ತಾಲ್ಲೂಕಿಗೆ ಮಂಗಳವಾರ ಸಂಜೆ ಆಗಮಿಸಿದೆ.
ಈ ಬಗ್ಗೆ ಮಾತನಾಡಿದ ಹೋರಾಟಗಾರ ಬಿ.ಡಿ.ಹಿರೇಮಠ, ನೀರಾವರಿ ಯೋಜನೆಗೆ ನಮ್ಮ ವಿರೋಧವಿಲ್ಲ. ಹೋರಾಟ ಸರ್ಕಾರದ ವಿರುದ್ಧವಲ್ಲ, ಆದರೆ ರೈತರ ಕೃಷಿ ಭೂಮಿಯಲ್ಲಿ ಪೈಪ್ ಲೈನ್ ಅಳವಡಿಸಿ ಆ ಮಾರ್ಗವನ್ನು ರಸ್ತೆಯಾಗಿ ಪರಿವರ್ತಿಸುವುದರ ವಿರುದ್ಧ ನಮ್ಮ ಹೋರಾಟ ಎಂದರು.

ನೀರಾವರಿ ಅಧಿಕಾರಿಗಳು ಮುಂದಾಲೋಚನೆ ಮಾಡದೆ ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸಿ, ಉಳ್ಳವರ ಅನೂಕೂಲಕ್ಕಾಗಿ ರೈತರ ಜಮೀನಿನ ಮೇಲೆ ಅವೈಜ್ಞಾನಿಕವಾಗಿ ಈ ಯೋಜನೆಯನ್ನು ತರಾತುರಿಯಲ್ಲಿ ನಿರ್ಮಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಈ ನೀರಾವರಿಗಾಗಿ 1800ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಅಳವಡಿಸುತ್ತಿರುವ ಪೈಪ್ಗಳನ್ನು ಕೃಷಿ ಜಮೀನಿನಲ್ಲಿ ಅಳವಡಿಸದೆ, ರಸ್ತೆ ಪಕ್ಕದಲ್ಲಿ ಅಳವಡಿಸುವ ಮೂಲಕ ಪರ್ಯಾಯವಾಗಿ ಯೋಜನೆ ರೂಪಿಸಲು ಆಗ್ರಹಿಸುತ್ತಿದ್ದೇವೆ. ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷಿಸಿದಲ್ಲಿ ಹೋರಾಟ ಮುಂದುವರೆಯುತ್ತದೆ ಎಂದರು.

ತಾಲ್ಲೂಕು ನೀರಾವರಿ ಇಲಾಖೆ ಎದುರು ಧರಣಿ ನಿರತರಾಗಿರುವ ಪ್ರತಿಭಟನಕಾರರು, ಈ ಯೋಜನೆ ಮಾರ್ಗ ಬದಲಾಯಿಸುವವರೆಗೂ ಹಾಗೂ ರೈತರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎನ್ನುತ್ತಾರೆ.
ಮಾರ್ಗ ಬದಲಾವಣೆ ಹೇಗೆ ಎಂಬುದರ ಬಗ್ಗೆ ನೀರಾವರಿ ಉನ್ನತ ಅಧಿಕಾರಿಗಳು ಸಭೆ ನಡೆಸಿದ್ದರು, ನಾನು ಸಲಹೆ ನೀಡಿದ್ದೇನೆ. ರಸ್ತೆ ಮಾರ್ಗವಾಗಿ ಪೈಪ್ ಲೈನ್ ತರಬಹುದು. ಆದರೆ ಕೆಲ ಭ್ರಷ್ಟಾಚಾರಿ ಅಧಿಕಾರಿಗಳು ಹಣ ಉಳಿಸಿಕೊಳ್ಳಲು ಹಣ ಜಾಸ್ತಿ ಖರ್ಚು ಆಗುತ್ತದೆ ಎನ್ನುತ್ತಾರೆ. ಅದರೆ ನಿಮ್ಮ ಮನೆಗಳಿಂದ ಹಣ ನೀಡುವುದಿಲ್ಲ, ನೂರಾರು ವರ್ಷಗಳಿಂದ ಜಮೀನು ಮಾಡುವ ರೈತರ ಒಳಿತಿಗೆ ಪರ್ಯಾಯ ಮಾರ್ಗ ಮಾಡಬೇಕಿದೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಗೆ ನೀಡಿದ್ದೇವೆ ಎಂದು ಬಿ.ಡಿ ಹಿರೇಮಠ ತಿಳಿಸಿದರು.
ಈ ಸಂದರ್ಭದಲ್ಲಿ ವಿನಯ್ ಪಾಟೀಲ್, ರಾಜಶೇಖರ್ ಕೃಷಿಕ್ ಸಮಾಜ, ಇಗಳಗುಂದಿ ಹರೀಶ್, ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಚ್ ಈಶ್ವರಪ್ಪ, ಬಸವರಾಜ್ ಪಾಟೀಲ್, ಹಸನ್ ಸಾಬ್ ಇದ್ದರು.












Click it and Unblock the Notifications