ಅಡಿಕೆ ಬೆಳೆಗಾರರ ನಿದ್ರೆಗೆಡಿಸಿದ ಬೆಲೆ: ಎಲೆ ಚುಕ್ಕೆ ರೋಗ, ಇಳುವರಿ ಕುಸಿತದ ಬೆನ್ನಿಗೆ ಮತ್ತೊಂದು ಶಾಕ್
ಶಿವಮೊಗ್ಗ, ಡಿ.11: ಎಲೆ ಚುಕ್ಕೆ ರೋಗದ ಹೊಡೆತದಿಂದ ಸುಧಾರಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಅಡಿಕೆ ಬೆಳೆಗಾರರಿಗೆ ಧಾರಣೆ ಇಳಿಕೆಯಿಂದ ಮತ್ತೊಂದು ಪೆಟ್ಟು ಬಿದ್ದಿದೆ. ಕಳೆದ ಎರಡು ತಿಂಗಳಲ್ಲಿ ಅಡಿಕೆ ಧಾರಣೆ ಕುಸಿತ ಕಾಣುತ್ತಿದೆ. ಈ ಬೆಳವಣಿಗೆ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಕುಸಿತ ಕಂಡಿದೆ. ಗೊರಬಲು, ಬೆಟ್ಟೆ, ರಾಶಿ ಅಡಿಕೆ ಧಾರಣೆಯಲ್ಲಿ ಇಳಿಕೆಯಾಗಿದೆ
ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಡಿಸೆಂಬರ್ 13ಕ್ಕೆ ಉದ್ಯೋಗ ಮೇಳ
2 ತಿಂಗಳಲ್ಲಿ ಸುಮಾರು 4 ಸಾವಿರ ರೂ. ಕುಸಿದ ಅಡಿಕೆ
ರಾಶಿ ಅಡಿಕೆ ಬೆಲೆ ಕಳೆದ 2 ತಿಂಗಳಲ್ಲಿ ಸುಮಾರು 4 ಸಾವಿರ ರೂ. ಕುಸಿತ ಕಂಡಿದೆ. ಅಕ್ಟೋಬರ್ 17 ರಂದು ಕನಿಷ್ಠ ದರ 43,099 ರೂಪಾಯಿ ಇದ್ದ ದರ ಅ.31ಕ್ಕೆ 44,009 ರೂ. ನ.15 ರಂದು 44,009, ನ.30 ರಂದು 43,669 ರೂ.ಗೆ ಇಳಿಕೆಯಾಗಿದೆ. ಡಿಸೆಂಬರ್ ಮಧ್ಯದಲ್ಲಿ 39,069 ರೂ.ಗೆ ಇಳಿಕೆಯಾಗಿದೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ ಕಳೆದ 2 ತಿಂಗಳಲ್ಲಿ ಬೆಟ್ಟೆ ಅಡಿಕೆ ಬೆಲೆ 7,400 ರೂಪಾಯಿ ಕಡಿಮೆಯಾಗಿದೆ. ಅ.17ರಂದು ಕನಿಷ್ಠ ದರ 50,119 ರೂ. ಇತ್ತು. ಅ.31ಕ್ಕೆ 49,090 ರೂ.ಗೆ ಕುಸಿತ ಕಂಡಿತ್ತು. ನ.15 ರಂದು 48,089 ರೂ.ಗೆ ಏರಿಕೆಯಾಗಿತ್ತು. ನ.30ಕ್ಕೆ 49,410 ರೂ.ಗೆ ಇಳಿಕೆಯಾಗಿದೆ. ಡಿಸೆಂಬರ್ ಮಧ್ಯ ಭಾಗದಲ್ಲಿ 42,699 ಸಾವಿರ ರೂ.ಗೆ ಕುಸಿದಿದೆ.
ನ್ಯೂ ವೆರೈಟಿ ಅಡಿಕೆಯಲ್ಲೂ 9 ಸಾವಿರ ರೂ. ಕುಸಿತ
ಗೊರಬಲು ಅಡಿಕೆ ಕನಿಷ್ಠ ಧಾರಣೆ ಕಳೆದ ಎರಡು ತಿಂಗಳಲ್ಲಿ ನಿರೀಕ್ಷಿತವಾಗಿಲ್ಲ ಎಂದು ರೈತರು ಆರೋಪಿಸುತ್ತಾರೆ. ಅ.17ರಂದು 17,009 ರೂ. ಇತ್ತು. ಅ.31ರಂದು 16,550 ರೂ., ನ.15ರಂದು 18,009 ರೂ., ನ.30ರಂದು 17,529 ರೂ., ಡಿ.9ರಂದು 17 ಸಾವಿರಕ್ಕೆ ಇಳಿದಿದೆ. ನ್ಯೂ ವೆರೈಟಿ ಅಡಿಕೆಯ ಗರಿಷ್ಠ ದರ ಕಳೆದ 2 ತಿಂಗಳಲ್ಲಿ 9 ಸಾವಿರ ರೂ. ಕುಸಿತ ಕಂಡಿದೆ. ಅ.17ರಂದು 47,159 ರೂ. ಇದ್ದ ಧಾರಣೆ ಡಿ.9ಕ್ಕೆ 39,109 ಕುಸಿತ ಕಂಡಿದೆ.
ಬೆಳೆಗಾರರನ್ನು ಕಡಿದ ಎಲೆ ಚುಕ್ಕೆ ರೋಗ
ಎಲೆ ಚುಕ್ಕೆ ರೋಗ ಮಲೆನಾಡಿನ ಅಡಿಕೆ ಬೆಳೆಗಾರರ ನಿರೀಕ್ಷೆಯನ್ನು ತಲೆಕೆಳಗಾಗಿಸಿದೆ. ರೋಗದ ಪರಿಣಾಮ ಮರಕ್ಕೆ ಸರಿಯಾದ ಪೋಷಕಾಂಶ ಲಭ್ಯವಾಗಿಲ್ಲ. ಹಾಗಾಗಿ ಇಳುವರಿ ಕುಸಿದಿದೆ. ಕೆಲವು ತೋಟಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಇಳುವರಿಯಾಗಿದೆ. 40 ಕ್ವಿಂಟಾಲ್ ಅಡಕೆ ಬೆಳೆಯುತ್ತಿದ್ದವರಿಗೆ 10 ರಿಂದ 15 ಕ್ವಿಂಟಾಲ್ ಇಳುವರಿ ಸಿಕ್ಕಿದೆ.
ಇಳುವರಿ ಕಡಿಮೆ ಇರುವುದರಿಂದ ಬೇಡಿಕೆ ಹೆಚ್ಚಳವಾಗಿ, ಉತ್ತಮ ಬೆಲೆ ಸಿಗಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಈ ಬಾರಿ ಇಳುವರಿ ಜೊತೆಗೆ ರೇಟ್ ಕುಸಿತ ಕಂಡಿರುವುದು ರೈತರಲ್ಲಿ ಆತಂಕ ಮತ್ತು ಅನುಮಾನ ಮೂಡಿಸಿದೆ.
ಎಪಿಎಂಸಿಗಳಲ್ಲಿನ ವಹಿವಾಟಿಗಿಂತಲು ಹೊರಗಿನ ವ್ಯಾಪಾರ ಹೆಚ್ಚು
ಸುಗ್ಗಿ ಸಮಯದಲ್ಲಿ ಉತ್ಪನ್ನಗಳ ಧಾರಣೆ ಕುಸಿತ ಕಾಣುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳು ಮಾರುಕಟ್ಟೆಗೆ ಬರುವುದರಿಂದ ವರ್ತಕರು ಖರೀದಿಸುತ್ತಾರೆ. ಸುಗ್ಗಿ ಮುಗಿಯುತ್ತಿದ್ದಂತೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಸಾಮಾನ್ಯ.
ಮತ್ತೊಂದೆಡೆ, ಎಪಿಎಂಸಿಗಳಲ್ಲಿನ ವಹಿವಾಟಿಗಿಂತಲು ಹೊರಗಿನ ವ್ಯಾಪಾರ ಹೆಚ್ಚಾಗಿದೆ. ರೈತರ ಮನೆ ಬಳಿಗೆ ಬರುವ ವರ್ತಕರು ಮಾರುಕಟ್ಟೆಗಿಂತಲು ತುಸು ಹೆಚ್ಚಿನ ದರ ನೀಡಿ ಅಡಿಕೆ ಕೊಳ್ಳುತ್ತಿದ್ದಾರೆ. ಇದರಿಂದ ಬೆಳೆಗಾರರಿಗೆ ಲಾಭವಾದಂತೆ ತೋರುತ್ತದೆ. ಆದರೆ ಜಿ.ಎಸ್.ಟಿಯನ್ನು ವಂಚಿಸಿ ಇಂತಹ ವರ್ತಕರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ದಾಸ್ತಾನು ಇರಿಸಿ, ಬೆಲೆ ಹೆಚ್ಚಾದಾಗ ಅಡಿಕೆ ಮಾರಾಟ ಮಾಡುತ್ತಾರೆ.
ಎಲೆ ಚುಕ್ಕೆ ರೋಗ, ಇಳುವರಿ ಕುಸಿತದ ನಡುವೆ ಅಡಿಕೆ ಧಾರಣೆ ಕುಸಿತ ಕಂಡಿರುವುದು ಬೆಳೆಗಾರರ ನಿದ್ರೆಗೆಡಿಸಿದೆ. ದಾಸ್ತಾನು ಮಾಡಲಾಗದ ಸಣ್ಣಪುಟ್ಟ ಬೆಳೆಗಾರರು ಈ ವರ್ಷ ಲಾಭ ಕಾಣದೆ ಕೈ ಸುಟ್ಟುಕೊಳ್ಳುವಂತಾಗಿದೆ.