ಆಗುಂಬೆ ಘಾಟ್ನಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ
ಶಿವಮೊಗ್ಗ, ಜುಲೈ 08; ಮಳೆ ಕಡಿಮೆ ಇರುವ ದಿನಗಳಲ್ಲಿ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಕ್ಟೋಬರ್ 10ರವರೆಗೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದ ಜಿಲ್ಲಾಡಳಿತ ಶಿವಮೊಗ್ಗ-ತೀರ್ಥಹಳ್ಳಿ-ಉಡುಪಿ ಮಾರ್ಗದಲ್ಲಿ ಆಗುಂಬೆ ಘಾಟಿ ಹೊರತು ಪರ್ಯಾಯ ಮಾರ್ಗ ಸೂಚಿಸಿತ್ತು.
ಮಳೆ ಜೋರಿರುವಾಗ ಭಾರೀ ವಾಹನಗಳ ಸಂಚಾರದಿಂದ ರಸ್ತೆ ಕುಸಿಯುವ ಆತಂಕವಿತ್ತು. ಆದರೆ ಮಳೆ ಕ್ಷೀಣಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ. ಇದರ ಆಧಾರದ ಮೇಲೆ ಹಿಂದಿನ ಆದೇಶದಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಪರ್ಯಾಯ ಮಾರ್ಗ; ಒಂದು ವೇಳೆ ಆಗುಂಬೆಯಲ್ಲಿ ಭಾರೀ ಮಳೆಯಾದರೆ ಘಾಟಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ಅವಕಾಶ ನೀಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಸಂದರ್ಭ ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಸೂಚಿಸಲಾಗಿದೆ.
ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುವವರು ತೀರ್ಥಹಳ್ಳಿಯಿಂದ ಉಂಟೂರುಕಟ್ಟೆ ಕೈಮರ, ಮಾಸ್ತಿಕಟ್ಟೆ, ಹುಲಿಕಲ್ ಮೂಲಕ ಕುಂದಾಪುರಕ್ಕೆ ತಲುಪಬಹುದಾಗಿದೆ. ಇನ್ನು, ಶಿವಮೊಗ್ಗದಿಂದ ಕಾರ್ಕಳಕ್ಕೆ ತೆರಳುವವರು ತೀರ್ಥಹಳ್ಳಿಯಿಂದ ಕಮ್ಮರಡಿ, ಶೃಂಗೇರಿ, ಕೆರೆಕಟ್ಟೆ ಮೂಲಕ ಕಾರ್ಕಳ ತಲುಪಬಹುದಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ಹದಿನೈದು ದಿನದಿಂದ ಮಳೆ ಕಡಿಮೆಯಾಗಿದೆ. ಹಾಗಿದ್ದೂ ಭಾರೀ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿದ್ದವು.












Click it and Unblock the Notifications