ಸರ್ಕಾರಿ ವಾಹನದಲ್ಲಿ ಬಂದು ದಂಡ ಹಾಕಿದ ನಕಲಿ ಅಧಿಕಾರಿ
ಶಿವಮೊಗ್ಗ, ನವೆಂಬರ್ 2: ಸರ್ಕಾರಿ ವಾಹನದಲ್ಲಿ ಬಂದ ನಕಲಿ ಅಧಿಕಾರಿಯೊಬ್ಬ ಅಂಗಡಿ ಮಾಲೀಕರಿಗೆ ದಂಡ ಹಾಕುವ ಬೆದರಿಕೆ ಒಡ್ಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನಕಲಿ ಅಧಿಕಾರಿ ದಂಡದಿಂದ ವಿನಾಯಿತಿ ಬೇಕಿದ್ದರೆ ತನಗೆ ಹಣ ನೀಡಬೇಕು ಎಂದು ಮಾಲೀಕರಿಗೆ ಸೂಚನೆ ಕೊಟ್ಟಿದ್ದಾನೆ. ಆರೋಪಿಯ ಅಸಲಿ ಬಣ್ಣ ಬಯಲಾಗುತ್ತಿದ್ದಂತೆ ಅಂಗಡಿ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಕಾಂಪೌಂಡ್ ಧ್ವಂಸ, ಗಂಧದ ಮರಕ್ಕೆ ಕೊಡಲಿ
ವಿನೋಬನಗರದ ಎಪಿಎಂಸಿ ಬಳಿ 100 ಅಡಿ ರಸ್ತೆಯಲ್ಲಿರುವ ಗೊರೂರು ಮಾರ್ಟ್ನಲ್ಲಿ ಈ ಘಟನೆ ಸಂಭವಿಸಿದೆ. ಮಾಲೀಕ ಕುಮಾರ್ ಅವರಿಂದ ಹಣ ವಸೂಲಿಗೆ ಯತ್ನಿಸಿದ ನಕಲಿ ಫುಡ್ ಇನ್ಸ್ಪೆಕ್ಟರ್ ಗಂಗಾಧರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾನುವಾರ ಸಂಜೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಬೋರ್ಡ್ ಇರುವ ಜೀಪಿನಲ್ಲಿ ಬಂದ ವ್ಯಕ್ತಿಯೊಬ್ಬ, ಗೊರೂರು ಮಾರ್ಟ್ ಒಳಗೆ ಬಂದು ತನ್ನನ್ನು ಫುಡ್ ಇನ್ಸ್ಪೆಕ್ಟರ್ ಗಂಗಾಧರ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಂಗಡಿಯೊಳಗೆ ಪರಿಶೀಲನೆ ನಡೆಸಿದ್ದಾನೆ. ಕೆಲವು ವಸ್ತುಗಳ ಅವಧಿ ಮುಕ್ತಾಯದ ಹಂತಕ್ಕೆ ಬಂದಿದೆ. ಇದನ್ನು ಮಾರಾಟ ಮಾಡುವಂತಿಲ್ಲ ಎಂದು ತಕರಾರು ತೆಗೆದಿದ್ದಾನೆ. ಅಲ್ಲದೇ ಜೀಪಿನಲ್ಲಿದ್ದ ವ್ಯಕ್ತಿಗೆ ರಶೀದಿ ಪುಸ್ತಕ ತರಲು ಸೂಚಿಸಿದ್ದಾನೆ. ರಶೀದಿ ಪುಸ್ತಕ ಕೈಯಲ್ಲಿ ಹಿಡಿದು 25 ಸಾವಿರ ರೂಪಾಯಿ ದಂಡ ವಿಧಿಸಬೇಕಾಗುತ್ತದೆ ಎಂದು ಗೊರೂರು ಮಾರ್ಟ್ ಮಾಲೀಕ ಕುಮಾರ್ ಅವರಿಗೆ ಬೆದರಿಕೆ ಒಡ್ಡಿದ್ದಾನೆ. ದಂಡದಿಂದ ವಿನಾಯಿತಿ ನೀಡಬೇಕಿದ್ದರೆ ತನಗೆ ಹಣ ಕೊಡಬೇಕು ಎಂದು ಸೂಚಿಸಿದ್ದಾನೆ. ಮೊದಲಿಗೆ 2 ಸಾವಿರ ರೂಪಾಯಿ ಹಣ ಪಡೆದು, ಇನ್ನೂ 10 ರಿಂದ 12 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಎಂದು ನಂಬಿಸಿ, ಅಂಗಡಿಯ ದಾಖಲೆಗಳನ್ನು ಪರಿಶೀಲಿಸಬೇಕಿರುವುದರಿಂದ ಮಾರನೇ ದಿನ ಬರುವುದಾಗಿ ತಿಳಿಸಿ ಜೀಪ್ನಲ್ಲಿ ತೆರಳಿದ್ದಾನೆ.
ಸೋಮವಾರ ಸಂಜೆ ಗೊರೂರು ಮಾರ್ಟ್ ಹೊರಗೆ ಜನ ಜಮಾಯಿಸಿದ್ದರು. ಒಳಗೆ ಕೆಲಸ ಮಾಡುತ್ತಿದ್ದ ಮಾಲೀಕ ಕುಮಾರ್ ದಿಢೀರ್ ಜನ ಸೇರಿರುವುದನ್ನು ಗಮನಿಸಿ ಹೊರಗೆ ಬಂದಿದ್ದಾರೆ. ಈ ವೇಳೆ ಆಹಾರ ಇಲಾಖೆ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಗಂಗಾಧರ್ನನ್ನು ಹಿಡಿಯಲು ಜನರು ಯತ್ನಿಸುತ್ತಿದ್ದರು. ತನ್ನ ನಿಜ ಬಣ್ಣ ಬಯಲಾಗುತ್ತಿದ್ದಂತೆ ಆರೋಪಿ ಗಂಗಾಧರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಆಹಾರ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ತಮ್ಮ ಅಂಗಡಿಗೆ ಬಂದು ದಂಡ ಹಾಕುವುದಾಗಿ ಬೆದರಿಕೆ ಒಡ್ಡಿ, ಹಣ ಪಡೆದ ಆರೋಪಿ ವಿರುದ್ಧ ಕುಮಾರ್, ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ನಕಲಿ ಅಧಿಕಾರಿಗೆ ಸರ್ಕಾರಿ ವಾಹನ ಹೇಗೆ ಸಿಕ್ಕಿತು ಎನ್ನುವುದರ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಸಹ್ಯಾದ್ರಿ ಕಾಲೇಜಿನ ಕಾಂಪೌಂಡ್ ಕೆಡವಿದ ಕಿಡಿಗೇಡಿಗಳು
ಇನ್ನು ಶಿವಮೊಗ್ಗದಲ್ಲಿ ನಕಲಿ ಅಧಿಕಾರಿಗಳು ಹಾಗೂ ಕಿಡಿಗೇಡಿಗಳ ಕೃತ್ಯ ಸೇರಿದಂತೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಇತ್ತೀಚಿಗೆ ದೀಪಾವಳಿ ಹಬ್ಬದ ಸಾಲು ರಜೆಯ ಸಂದರ್ಭದಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕಾಂಪೌಂಡ್ ಅನ್ನು ಕೆಡವಲಾಗಿದೆ. ಅಲ್ಲದೇ ಅಲ್ಲಿದ್ದ ಸುಮಾರು 20 ಗಂಧದ ಮರಗಳನ್ನು ಕಡಿದು ಹಾಕಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಹಿಂಭಾಗದ ಕಾಂಪೌಂಡ್ ಧ್ವಂಸ ಮಾಡಲಾಗಿದೆ. ಖಾಸಗಿ ಲೇಔಟ್ಗೆ ರಸ್ತೆ ನಿರ್ಮಿಸಿಕೊಳ್ಳಲು ಕಾಂಪೌಂಡ್ ಕೆಡವಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.