ತೀರ್ಥಹಳ್ಳಿ-ಮೇಗರವಳ್ಳಿ ರಸ್ತೆ ಅಗಲೀಕರಣ : 93 ಮರಗಳಿಗೆ ಕೊಡಲಿ
ಶಿವಮೊಗ್ಗ, ಮೇ 08 : ತೀರ್ಥಹಳ್ಳಿ-ಮೇಗರವಳ್ಳಿ ರಸ್ತೆ ಅಗಲೀಕರಣಕ್ಕೆ 93 ಮರಗಳಿಗೆ ಕೊಡಲಿ ಹಾಕಲಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಜನರೊಂದಿಗೆ ಸಮೀಕ್ಷೆ ನಡೆಸಿ ಮರಗಳ ಸಂಖ್ಯೆ ಅಂತಿಮಗೊಳಿಸಿದ್ದಾರೆ.
ಬುಧವಾರ ಆಗುಂಬೆ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ತೀರ್ಥಹಳ್ಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಶೃಂಗೇರಿ ಮತ್ತು ಆಗುಂಬೆ ವಲಯದ ಅರಣ್ಯಾಧಿಕಾರಿಗಳು ಸೇರಿ ಸಮೀಕ್ಷೆ ನಡೆಸಿದರು.
ತೀರ್ಥಹಳ್ಳಿ-ಆಗುಂಬೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತೀರ್ಥಹಳ್ಳಿ-ಮೇಗರವಳ್ಳಿ ರಸ್ತೆ ಅಗಲೀಕರಣದ ಬಗ್ಗೆ ಸಮೀಕ್ಷೆ ನಡೆಸಲಾಯಿತು. ರಾಷ್ಟ್ರೀಯ ಹೆದ್ದಾರಿ 169ಎ ನಲ್ಲಿ 2.00 ಕಿ.ಮೀ ರಿಂದ 15.98 ಕಿ.ಮೀ.ವರೆಗೆ ರಸ್ತೆ ಅಗಲೀಕರಣವಾಗಲಿದೆ.

ರಸ್ತೆ ಅಗಲೀಕರಣ ನಡೆಯುವ ಪ್ರದೇಶದಲ್ಲಿ ತೆರವುಗೊಳಿಸುವ 93 ವಿವಿಧ ಜಾತಿಯ ಮರಗಳನ್ನು ಗುರುತಿಸಿ ಬಿಳಿ ಬಣ್ಣದಿಂದ ಅವುಗಳನ್ನು ಮಾರ್ಕ್ ಮಾಡಲಾಗಿದೆ. ಅವಶ್ಯಕತೆ ಇಲ್ಲದ ಮರಗಳನ್ನು ಕೆಂಪು ಬಣ್ಣದಿಂದ ಮಾರ್ಕ್ ಮಾಡಲಾಗಿದೆ.
ಗುರುತು ಮಾಡಿರುವ ಮರಗಳನ್ನು ಅರಣ್ಯ ಇಲಾಖಾ ವತಿಯಿಂದ ಬಹಿರಂಗ ಹರಾಜು ಮೂಲಕ ಕಡಿದು ತೆರವುಗೊಳಿಸಲು ಸ್ಥಳೀಯರು ಸಹ ಒಪ್ಪಿಗೆ ನೀಡಿದ್ದಾರೆ. ಈ ಕುರಿತ ಪತ್ರಕ್ಕೆ ಸಮೀಕ್ಷೆ ಸಮಯದಲ್ಲಿ ಸ್ಥಳೀಯರು ಸಹಿ ಹಾಕಿದ್ದಾರೆ.

ಮರ ಕಡಿಯುವ ವಿವಾದ : ಮೊದಲು 450 ಮರಗಳನ್ನು ಕತ್ತರಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುತು ಮಾಡಿತ್ತು. ಇದಕ್ಕೆ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮರು ಸಮೀಕ್ಷೆ ನಡೆಸಿ ಎಂದು ಮನವಿ ಮಾಡಿದ್ದರು.
ಆದ್ದರಿಂದ, ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಜೊತೆ ಮರು ಸಮೀಕ್ಷೆ ನಡೆಸಿದರು. ಅಂತಿಮವಾಗಿ 93 ಮರಗಳನ್ನು ಕಡಿಯಲು ತೀರ್ಮಾನ ಕೈಗೊಳ್ಳಲಾಗಿದೆ.












Click it and Unblock the Notifications