ಶಿವಮೊಗ್ಗ ಜೈಲಿನಲ್ಲಿ ಖೈದಿಗಳ ಮಾರಾಮಾರಿ; ಒಬ್ಬನ ಸ್ಥಿತಿ ಗಂಭೀರ
ಶಿವಮೊಗ್ಗ, ಡಿಸೆಂಬರ್ 21: ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪದಲ್ಲಿನ ಕೇಂದ್ರ ಕಾರಗೃಹದಲ್ಲಿ ಖೈದಿಗಳ ನಡುವೆ ಮಾರಾಮಾರಿ ನಡೆದಿದೆ. ಗಾಯಗೊಂಡವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಓರ್ವ ಖೈದಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಭಾನುವಾರ ರಾತ್ರಿ ಊಟ ಮುಗಿದ ಮೇಲೆ ಕುಡಿಯುವ ನೀರಿನ ವಿಚಾರಕ್ಕೆ ಜಗಳ ಆರಂಭವಾಗಿದೆ. ಪ್ರಶಾಂತ್ ಎಂಬ ಖೈದಿಯು ಮಲ್ಲೇಶ್, ದೇವೇಂದ್ರಪ್ಪ ಹಾಗೂ ಚಿಕ್ಕಮಗಳೂರಿನ ಬೆನಕಶೆಟ್ಟಿ ಎಂಬುವವರಿಗೆ ಲೋಟದಿಂದ ಹಲ್ಲೆ ಮಾಡಿದ್ದಾನೆ, ಚಮಚದಿಂದ ಇರಿದಿದ್ದಾನೆ.
ಈ ಗಲಾಟೆಯಲ್ಲಿ ಎಲ್ಲರೂ ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಖೈದಿ ಮಲ್ಲೇಶ್ ಸ್ಥಿತಿ ಗಂಭೀರವಾಗಿದೆ. ಎದೆ ಮತ್ತು ಹೊಟ್ಟೆ ಭಾಗಕ್ಕೆ ಇರಿದಿದ್ದು, ಈ ಇರಿತ ಆಳವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಕೈದಿ ಪ್ರಶಾಂತ್ ಉಡುಪಿಯಲ್ಲಿ ಅಪರಾಧ ಎಸಗಿ ಶಿಕ್ಷೆಗೆ ಒಳಗಾಗಿದ್ದಾನೆ. ಉಡುಪಿ ನ್ಯಾಯಾಲಯದಲ್ಲಿ ನ್ಯಾಯಾಧೀಶರನ್ನು ನಿಂದಿಸಿ ಸಹ ಈತ ಸುದ್ದಿಯಾಗಿದ್ದ. ಆಗಗ ಸಹ ಖೈದಿಗಳಿಗೆ ನಿಂದಿಸುವುದು, ಜಗಳವಾಡುವುದು ಮಾಡುತ್ತಿದ್ದ ಎಂಬ ಮಾಹಿತಿಯೂ ಇದೆ.
ಪ್ರಶಾಂತ್ ವರ್ತನೆ ಬಗ್ಗೆ ಹಲವು ಬಾರಿ ಸಹ ಖೈದಿಗಳು ಜೈಲಿನ ಅಧಿಕಾರಿಗಳು ಮತ್ತು ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ಗೆ ದೂರು ನೀಡಿದ್ದರು. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಖೈದಿಗಳ ಮಾರಾಮಾರಿ ಕುರಿತು ದೂರು ದಾಖಲಾಗಿದೆ.












Click it and Unblock the Notifications