ಅಪ್ರಾಪ್ತೆ ಮದುವೆ ತಡೆಯಲು ಹೋದ ಶಿವಮೊಗ್ಗ ಪೊಲೀಸರಿಗೀಗ ಕ್ವಾರಂಟೈನ್
ಶಿವಮೊಗ್ಗ, ಮೇ 20: ಅಪ್ರಾಪ್ತೆಯ ಮದುವೆ ತಪ್ಪಿಸಲು ಹೋದ ಶಿವಮೊಗ್ಗ ಪೊಲೀಸರಿಗೆ ಇದೀಗ ಕೊರೊನಾ ಕಂಟಕ ಎದುರಾಗಿದೆ. ಈ ಒಂದು ಪ್ರಕರಣ ಇಡೀ ಪೊಲೀಸ್ ವ್ಯವಸ್ಥೆಯನ್ನೇ ಬದಲಾಯಿಸಿದೆ.
ಶಿವಮೊಗ್ಗದಲ್ಲಿ ರಾತ್ರೋರಾತ್ರಿ ನೂತನ ಎಎಸ್ ಪಿ, ನಾಲ್ವರು ಡಿವೈಎಸ್ ಪಿ ಹಾಗೂ ಏಳು ಮಂದಿ ಸರ್ಕಲ್ ಇನ್ಸ್ ಪೆಕ್ಟರ್ ಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಿನ್ನೆ ತಡ ರಾತ್ರಿಯೇ ನೂತನ ಎಸ್ಪಿಯಾಗಿ ಜಯಪ್ರಕಾಶ್ ಅಧಿಕಾರ ಸ್ವೀಕರಿಸಿದ್ದಾರೆ. ಇವರ ಜೊತೆಗೆ ನಾಲ್ವರು ಡಿವೈಎಸ್ ಪಿಗಳು ಹಾಗೂ ಏಳು ಮಂದಿ ಸಿಪಿಐಗಳು ಹೊಸದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಪ್ರಕರಣದ ಹಿನ್ನೆಲೆ ಏನು ಇಲ್ಲಿ ನೋಡೋಣ...
Recommended Video
ಅಪ್ರಾಪ್ತೆಯ ಮದುವೆ ತಡೆಯಲು ಹೋಗಿ ಕ್ವಾರಂಟೈನ್
ಐದು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ಅಪ್ರಾಪ್ತೆಗೆ ಆಕೆಯ ಪೋಷಕರು ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಶಿಕಾರಿಪುರ ಗ್ರಾಮಾಂತರ ಪೊಲೀಸರಿಗೆ ಬಂದಿತ್ತು. ಈ ಮಾಹಿತಿ ಹಿಡಿದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸರ್ಕಲ್ ಇನ್ಸ್ ಪೆಕ್ಟರ್, ಬಾಲಕಿಯನ್ನು ವಶಕ್ಕೆ ಪಡೆದು ಆಕೆಯನ್ನು ಶಿವಮೊಗ್ಗದ ಸುರಭಿ ಸಖಿ ಕೇಂದ್ರಕ್ಕೆ ಒಪ್ಪಿಸಿದ್ದರು.
ಶಿವಮೊಗ್ಗದಲ್ಲಿ ಪೊಲೀಸ್, ವೈದ್ಯರು ಸೇರಿ ಅನೇಕರಿಗೆ ಕ್ವಾರಂಟೈನ್!
ಅಪ್ರಾಪ್ತೆಗೆ ಕೊರೊನಾ ಸೋಂಕು
ಆದರೆ ಅದೇ ಅಪ್ರಾಪ್ತೆಯಲ್ಲಿ ಕೊರೊನಾ ಇರುವುದು ನಿನ್ನೆ ದೃಢಪಟ್ಟಿದೆ. ಬಾಲಕಿಯನ್ನು ಸಖಿ ಕೇಂದ್ರಕ್ಕೆ ಒಪ್ಪಿಸಿದ ಸಿಪಿಐ ಅವರು ನಂತರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದಾರೆ. ಇದೀಗ ಅಪ್ರಾಪ್ತೆಗೆ ಕೊರೊನಾ ಇರುವ ವರದಿ ಬರುತ್ತಿದ್ದಂತೆ ಪೊಲೀಸರಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ಜಿಲ್ಲೆಯ ಓರ್ವ ಎಎಸ್ ಪಿ, 5 ಮಂದಿ ಡಿವೈಎಸ್ ಪಿ, 12 ಮಂದಿ ಸಿಪಿಐ ಸೇರಿದಂತೆ ಸಖಿ ಕೇಂದ್ರದ ಸಿಬ್ಬಂದಿ ಅವರುಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಒಟ್ಟು ಹದಿನೆಂಟು ಪೊಲೀಸರು ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ.
ನೂತನ ಅಧಿಕಾರಿಗಳ ನಿಯೋಜನೆ
ಈ ಪೊಲೀಸರು ಕ್ವಾರಂಟೈನ್ ಗೆ ಹೋಗಿರುವ ಹಿನ್ನೆಲೆಯಲ್ಲಿ ಸರ್ಕಾರ ಶಿವಮೊಗ್ಗ ಜಿಲ್ಲೆಗೆ ಹೊಸ ಅಧಿಕಾರಿಗಳನ್ನು ನಿಯೋಜಿಸಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ನಾಲ್ಕು ಜನ ಡಿವೈಎಸ್ ಪಿಗಳನ್ನು ನಿಯೋಜಿಸಲಾಗಿದ್ದು, ನಿನ್ನೆ ರಾತ್ರಿಯಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಟಿ ವೆಂಕಟೇಶ್, ಎಂ ಕಲ್ಯಾಣ ಕುಮಾರ್, ನಿರಂಜನ ರಾಜೆ ಅರಸ್, ಟಿ ಮಹದೇವ ಅವರನ್ನು ಜಿಲ್ಲೆಗೆ ಸರ್ಕಾರ ನೂತನ ಡಿವೈಎಸ್ ಪಿಗಳಾಗಿ ನಿಯೋಜನೆ ಮಾಡಿದೆ. ಜಿಲ್ಲೆಗೆ ನಿನ್ನೆ ರಾತ್ರಿಯಿಂದಲೇ ಏಳು ಜನ ಇನ್ಸ್ ಪೆಕ್ಟರ್ ಗಳನ್ನು ನೇಮಕ ಮಾಡಿದ್ದು, ಆರ್ ಜಿ ಚನ್ನೇಗೌಡ, ಆರ್ ರಮೇಶ್, ಎಂ.ಎಸ್ ದೀಪಕ್, ಜಿಕೆ ಮಧುಸೂದನ್, ನಿತ್ಯಾನಂದ ಪಂಡಿತ್, ಎಂ ಗೋವಿಂದ ರಾಜು, ಕಿರಣ್ ಕುಮಾರ್ ನಾಯಕ್ ಅವರನ್ನು ತಕ್ಷಣದಿಂದಲೇ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ ಕೊರೊನಾ ಅಪ್ ಡೇಟ್
ಎಸ್ಪಿ ಕಚೇರಿ ಸಂಪೂರ್ಣ ಸ್ಯಾನಿಟೈಸ್
ಅಧಿಕಾರಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಕೇಂದ್ರ ಕಚೇರಿಗೆ ಸಂಪೂರ್ಣ ಸ್ಯಾನಿಟೈಸರ್ ಹಾಕಲಾಗಿದ್ದು, ಇನ್ನೂ ಅನೇಕ ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕೊರೊನಾ ವೈರಸ್ ಇದೀಗ ಪೋಲಿಸ್ ಇಲಾಖೆಗೆ ದೊಡ್ಡ ಆತಂಕವನ್ನು ಸೃಷ್ಟಿ ಮಾಡಿದೆ.