ಜಾರ್ಖಂಡ್ ನಲ್ಲಿ ಹತ್ತು ದಿನ ಹಸಿವಿನಲ್ಲಿದ್ದು ಮೃತಪಟ್ಟ 40ರ ಹರೆಯದ ವ್ಯಕ್ತಿ
ರಾಂಚಿ (ಜಾರ್ಖಂಡ್), ಜುಲೈ 18: ಜಾರ್ಖಂಡ್ ನಲ್ಲಿ ಹಸಿವಿನಿಂದ ಮೃತಪಟ್ಟ ಮತ್ತೊಂದು ಶಂಕಾಸ್ಪದ ಪ್ರಕರಣ ಬೆಳಕಿಗೆ ಬಂದಿದೆ. ಛತ್ರ ಜಿಲ್ಲೆಯ ದೊಡಗಧ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಹಸಿವಿನಿಂದ ಇದ್ದ ಕಾರಣಕ್ಕೆ ನಲವತ್ತರ ಹರೆಯದ ಝಿಂಗುರ್ ಭಿಯುನ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆದರೆ, ಹಳ್ಳಿಯ ಮುಖ್ಯಸ್ಥರಾದ ರಾಜವಂತಿ ದೇವಿ ಅವರು ಹೇಳಿದ ಪ್ರಕಾರ, ನಿರುದ್ಯೋಗದಿಂದ ಆತ ಸಾವನ್ನಪ್ಪಿದ್ದಾರೆ. "ಯಾರಿಗೆ ಕೆಲಸ ಮಾಡಲು ಸಾಧ್ಯವಿಲ್ಲವೋ ಅಂಥ ವ್ಯಕ್ತಿ ಹಸಿವಿನಿಂದ ಖಂಡಿತಾ ಸಾವನ್ನಪ್ಪುತ್ತಾನೆ. ತನ್ನಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನನ್ನ ಬಳಿ ತಿಳಿಸಿದ್ದರೆ ಏನಾದರೂ ವ್ಯವಸ್ಥೆ ಮಾಡುತ್ತಿದ್ದೆ" ಎಂದು ಆಕೆ ಹೇಳಿದ್ದಾರೆ.
ಭಿಯುನ್ ಸಾವಿನ ನಂತರ ಆ ತಕ್ಷಣವೇ ಜಿಲ್ಲಾ ಆಡಳಿತದಿಂದ ಆತನ ಕುಟುಂಬಕ್ಕೆ ಆಹಾರ ಧಾನ್ಯವನ್ನು ಒದಗಿಸಲಾಗಿದೆ. ಭಿಯುನ್ ನ ಪತ್ನಿ ರೂಬಿ ದೇವಿ ಮಾತನಾಡಿ, ಕಳೆದ ನಾಲ್ಕೈದು ತಿಂಗಳಿಂದ ಮನೆಯಲ್ಲಿ ಆಹಾರ ಪದಾರ್ಥ ಇರಲಿಲ್ಲ. ಹಳ್ಳಿಯಲ್ಲಿ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿದುದಾಗಿ ತಿಳಿಸಿದ್ದಾರೆ.

ಕೆಲವು ಕಾಲ ಹಳ್ಳಿಗರು ಕೂಡ ಈ ಕುಟುಂಬಕ್ಕೆ ಆಹಾರ ನೀಡಿದ್ದು, ಆ ನಂತರ ಅವರು ಕೂಡ ನಿಲ್ಲಿಸಿದ್ದಾರೆ. "ನಮ್ಮ ಹೆಸರಲ್ಲಿ ಯಾವುದೇ ಪಡಿತರ ಚೀಟಿ ಇಲ್ಲ" ಎಂದು ರೂಬಿ ದೇವಿ ಹೇಳಿದ್ದಾರೆ. ಅಂದ ಹಾಗೆ ಭಿಯುನ್ ನ ನಾಲ್ಕು ವರ್ಷದ ಮಗನ ಹೆಸರು ಆತನ ಅಜ್ಜಿಗೆ ವಿತರಿಸಿರುವ ಪಡಿತರ ಚೀಟಿಯಲ್ಲಿ ಇದೆ. ಇತ್ತೀಚೆಗೆ ಆಕೆ ಮೃತಪಟ್ಟಿದ್ದಾರೆ.
ಇನ್ನು ಕನ್ಹಛತ್ತಿ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಪಪ್ಪು ರಜಾಕ್ ಮಾತನಾಡಿ, ಭಿಯುನ್ ಕಳೆದ ಕೆಲ ತಿಂಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಆದ್ದರಿಂದ ಆಹಾರ ತೆಗೆದುಕೊಳ್ಳಲು ಆಗದೆ, ಅವರು ಮೃತಪಟ್ಟಿದ್ದಾರೆ ಎಂದಿದ್ದಾರೆ.
"ಹಸಿವಿನಿಂದ ಆತ ಮೃತಪಟ್ಟಿರುವುದಲ್ಲ. ಸರಿಯಾದ ಕಾರಣ ತಿಳಿದುಕೊಳ್ಳುವ ಸಲುವಾಅಗಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು" ಎಂದಿದ್ದಾರೆ.
ಹಳ್ಳಿ ಪ್ರಧಾನ್ ಹೇಳುವ ಪ್ರಕಾರ, ರಾಜ್ಯ ಸರಕಾರದಿಂದ ದೊರೆಯಬೇಕಾದ ಆಹಾರ ಧಾನ್ಯವನ್ನು ದೊರಕಿಸಿ ಕೊಟ್ಟಿದ್ದೇವೆ ಎಂದಿದ್ದಾರೆ. ಈ ಮಧ್ಯೆ, ಡೆಪ್ಯೂಟಿ ಕಮಿಷನರ್ ಜಿತೇಂದ್ರ ಕುಮಾರ್ ಸಿಂಗ್ ಅವರು ಸಾವಿಗೆ ಸರಿಯಾದ ಕಾರಣ ತಿಳಿಯಲು ತನಿಖೆಗೆ ಆದೇಶ ನೀಡಿದ್ದಾರೆ.












Click it and Unblock the Notifications