ರಾಮಮಂದಿರ ನಿರ್ಮಾಣ ಬಿಟ್ಟು ಮೊದಲು ಜನರಿಗೆ ಮೂಲಭೂತ ಸೌಕರ್ಯ ನೀಡಿ: ನಟ ಚೇತನ್
ರಾಮಮಂದಿರ ನಿರ್ಮಾಣ ಬಿಟ್ಟು ಮೊದಲು ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡಿ ಎಂದು ನಟ ಚೇತನ್ ರಾಜಕಾರಣಿಗಳ ವಿರುದ್ಧ ಹರಿಹಾಯ್ದರು.
ರಾಮನಗರ, ಫೆಬ್ರವರಿ, 02: ದೇವಸ್ಥಾನಗಳು ನಮ್ಮ ಬದುಕನ್ನು ಕಟ್ಟಿಕೊಡುವುದಿಲ್ಲ. ರಾಮದೇವರ ಬೆಟ್ಟವನ್ನು ದಕ್ಷಿಣ ಅಯೋಧ್ಯೆ ಮಾಡಲು ಸರ್ಕಾರ ಅನುಮತಿ ನೀಡಬಾರದು. ಇದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಅಷ್ಟೇ. ರಾಮಮಂದಿರ ನಿರ್ಮಾಣ ಬಿಟ್ಟು ಮೊದಲು ಜನರಿಗೆ ಮೂಲಭೂತ ಸೌಕರ್ಯ ನೀಡಿ ಎಂದು ನಟ ಹಾಗೂ ಚಿಂತಕ ಚೇತನ್ ರಾಜಕಾರಣಿಗಳ ವಿರುದ್ಧ ಹರಿಹಾಯ್ದರು.
ನಗರದ ಜಿಲ್ಲಾಧಿಕಾರಿಗಳ ಸಂಕೀರ್ಣದ ಮುಂದೆ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ನಟ, ಚಿಂತಕ ಚೇತನ್, ರಾಮದೇವರ ಬೆಟ್ಟವನ್ನು ದಕ್ಷಿಣದ ಅಯೋಧ್ಯೆಯನ್ನಾಗಿ ಅಭಿವೃದ್ಧಿ ಮಾಡುವ ಮೊದಲು ದಲಿತ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಆಗ್ರಹಿಸಿದರು. ತಾಲೂಕಿನ ಕೂನಮುದ್ದನಹಳ್ಳಿ ಗ್ರಾಮಸ್ಥರು ನಟ ಚೇತನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಂಕೀರ್ಣದ ಮುಂದೆ ಪ್ರತಿಭಟನೆ ನಡೆಸಿದರು. ಕಳೆದ ನೂರು ವರ್ಷಗಳಿಂದ ವಾಸ ಮಾಡುತ್ತಿರುವ 60ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಮೂಲ ಭೂತಸೌಕರ್ಯಗಳಾದ ಸ್ಮಶಾನ, ವಸತಿ ಹಕ್ಕುಪತ್ರ ಹಾಗೂ ಬಯಲು ಶೌಚಾಲಯದಿಂದ ಮುಕ್ತಿ ನೀಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಕೇಂದ್ರ ಬಜೆಟ್ ಶ್ರೀಮಂತರ ಪರವಾಗಿದೆ
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಶ್ರೀಮಂತರ ಪರವಾಗಿದೆ. ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಯಾವುದೇ ಅನುಕೂಲ ಇಲ್ಲ. ತೆರಿಗೆ ವಿನಾಯಿತಿಯಿಂದ ಬಡವರಿಗೆ ಉಪಯೋಗವಿಲ್ಲ, 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ನೀಡಿದ್ದಾರೆ. ಅಂದರೆ ತಿಂಗಳಿಗೆ 60 ಸಾವಿರ ಸಂಬಳ ಪಡೆಯುತ್ತಿರುವ 2% ಜನರಿಗೆ ತೆರಿಗೆ ಯಾಕಿಲ್ಲ? ಎಂದು ಪ್ರಶ್ನೆ ಮಾಡಿದರು.

ಸರ್ಕಾರಗಳು ಶ್ರೀಮಂತರ ಪರ ಇವೆ
ತಿಂಗಳಿಗೆ 60 ಸಾವಿರ ವೇತನ ಪಡೆಯುವ 2% ಜನರಿಗೆ ತೆರಿಗೆ ಹಾಕದೆ ಯಾವ ರೀತಿಯಲ್ಲಿ ಸರ್ಕಾರಗಳು ಜನ ಕಲ್ಯಾಣ ಕಾರ್ಯಕ್ರಮ ನೀಡುತ್ತವೆ. ಸರ್ಕಾರಗಳು ಶ್ರೀಮಂತರ ಪರ ಕೆಲಸ ಮಾಡುತ್ತಿವೆ. ಹಾಗಾಗಿ ಬಡವ ಮತ್ತಷ್ಟು ಬಡವನಾಗುತ್ತಿದ್ದಾನೆ. ಹಾಗೆಯೇ ಬಂಡವಾಳ ಶಾಹಿ ಸರ್ಕಾರ ನೀಡಿರುವ ಬಜೆಟ್ ಶ್ರೀಮಂತರ ಬಜೆಟ್ ಎಂದು ನಟ ಚೇತನ್ ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಟ ಚೇತನ್ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಸಮಾನತೆ ಪರವಾದ ಹೋರಾಟ ಮಾಡುವುದಷ್ಟೇ ನಮ್ಮ ಕೆಲಸ. ಬುದ್ದ, ಬಸವ, ಅಂಬೇಡ್ಕರ್ ತತ್ವಕ್ಕೆ ನಮ್ಮ ಬೆಂಬಲವಿದೆ. ರಾಜ್ಯವನ್ನಾಳಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ರಾಜಕೀಯ ಪಕ್ಷಗಳು ಜನರಿಗೆ ನ್ಯಾಯ ಒದಗಿಸಿಲ್ಲ. ಅಲ್ಲದೇ ನವದೆಹಲಿಯಲ್ಲಿ ಬಂದಿರುವ ಪಕ್ಷ ಕೂಡ ದಲಿತರ ಪರವಿಲ್ಲ. ತಮ್ಮ ಅಭಿವೃದ್ಧಿಯಷ್ಟೇ ಅವರ ಹಿಡನ್ ಅಜೆಂಡ ಎಂದು ಆರೋಪಿಸಿದರು.












Click it and Unblock the Notifications