ಚುನಾವಣಾ ಆಯೋಗ ಸತ್ತು ಹೋಗಿದೆಯೇ?: ವಾಟಾಳ್ ನಾಗರಾಜ್
ರಾಮನಗರ, ಅಕ್ಟೋಬರ್ 31: ಆರ್ ಆರ್ ನಗರ ಉಪ ಚುನಾವಣೆಯ ವಿಷಯದಲ್ಲಿ ಚುನಾವಣಾ ಆಯೋಗ ಸಂಪೂರ್ಣ ಸತ್ತು ಹೋಗಿದೆಯೇ ಎಂದು ಪ್ರಶ್ನಿಸಿದ್ದಾರೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್.
ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ಐಜೂರು ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯ ಭರಾಟೆ ನೋಡಿದರೆ ಪ್ರಜಾಪ್ರಭುತ್ವ ನಾಶವಾಗುತ್ತಿದೆ ಎನಿಸುತ್ತಿದೆ. ಚುನಾವಣಾ ಆಯೋಗ ವಾರದ ಮೊದಲೇ ನೂರು ಜನ ಚುನಾವಣಾ ವೀಕ್ಷಕರನ್ನು ನೇಮಿಸಬೇಕಿತ್ತು. ಚುನಾವಣೆ ದೊಡ್ಡ ದಂಧೆಯಾಗಿದೆ. ಚುನಾವಣೆಯ ರೀತಿ ನೀತಿ ಎಲ್ಲೂ ಪಾಲನೆಯಾಗುತ್ತಿಲ್ಲ. ಚುನಾವಣೆಯಲ್ಲಿ ಹೆಸರಿನಲ್ಲಿ ದರೋಡೆ ನಡೆಯುತ್ತಿದೆ. ಆದರೆ ಇದಕ್ಕೆಲ್ಲಾ ಎಲ್ಲೂ ಕಡಿವಾಣ ಇಲ್ಲ" ಎಂದು ಕಿಡಿಕಾರಿದರು.
"ಎಂಇಎಸ್ ಗಡಿಪಾರು ಮಾಡಿ"
ಎಂಇಎಸ್ ಮಹಾರಾಷ್ಟ್ರ ಏಕೀಕರಣ ಸಮಿತಿಯು, ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡುತ್ತೇವೆ ಎಂದಿದೆ. ರಾಜ್ಯ ಸರ್ಕಾರ ಕೂಡಲೇ ಎಂಇಎಸ್ ನವರನ್ನು ಬಂಧಿಸಿ ಗಡಿಪಾರು ಮಾಡಬೇಕು. ಕರಾಳ ದಿನಾಚರಣೆಗೆ ಅವಕಾಶ ಕೊಡಬಾರದು ಎಂದು ಸರ್ಕಾರವನ್ನು ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

ನ.1ರಂದು ಕನ್ನಡ ರಾಜ್ಯೋತ್ಸವವಿದ್ದು, ರಾಜ್ಯ ಸರ್ಕಾರ ಕನ್ನಡ ಭಾಷೆಯನ್ನು ಉಳಿಸುವಲ್ಲಿ ವಿಫಲವಾಗಿದೆ. ಇದನ್ನು ಖಂಡಿಸಿ ಇದೇ ನ.28ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪರಬಾಷೆಯ ವಿರುದ್ಧ ಚಳವಳಿ ಪ್ರಾರಂಭ ಮಾಡಲಾಗುವುದು ಎಂದು ಘೋಷಿಸಿದರು.












Click it and Unblock the Notifications