ಯಡಿಯೂರಪ್ಪ ಹುಚ್ಚಾಸ್ಪತ್ರೆಯಲ್ಲಿ ಇರಬೇಕಾಗಿತ್ತು; ವಾಟಾಳ್
ರಾಮನಗರ, ಜನವರಿ 04: "ಹುಚ್ಚಾಸ್ಪತ್ರೆಯ ವಿಶೇಷ ಘಟಕದಲ್ಲಿ ಇರಬೇಕಾದ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸೌಧದಲ್ಲಿದ್ದಾರೆ, ಅವರಿಗೆ ವಿಧಾನಸೌಧವೇ ಹುಚ್ಚಾಸ್ಪತ್ರೆ" ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ವ್ಯಂಗ್ಯವಾಡಿದರು.
ಸೋಮವಾರ ರಾಮನಗರದ ಐಜೂರು ವೃತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಡೆದು ವಾಟಾಳ್ ನಾಗರಾಜ್ ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ಖಂಡಿಸಿದರು.
"ಮರಾಠ ಪ್ರಾಧಿಕಾರ ಖಂಡಿಸಿ ಮೊದಲ ಹಂತದ ಹೋರಾಟ ನಡೆಸಿದ್ದೇವೆ. ಜನವರಿ 9ರಂದು ಎರಡನೇ ಹಂತದ ಹೋರಾಟದ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೈಲುಗಳನ್ನು ತಡೆದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ" ಎಂದು ವಾಟಾಳ್ ನಾಗರಾಜ್ ಹೇಳಿದರು.

"ಕರ್ನಾಟಕದ ಸರ್ಕಾರಕ್ಕೆ ಬುದ್ಧಿ, ತಲೆ ಎರಡೂ ಇಲ್ಲಾ. ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಸ್ಪೆಷಲ್ ವಾರ್ಡ್ನಲ್ಲಿ ಇರಬೇಕಾಗಿತ್ತು. ಅದರ ಬದಲು ವಿಧಾನಸೌಧದಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಸಚಿವರು ದಿಕ್ಕು ತಪ್ಪಿ ಹೋಗಿದ್ದಾರೆ" ಎಂದು ವಾಟಾಳ್ ದೂರಿದರು.
"ಯಡಿಯೂರಪ್ಪನ ಸರ್ಕಾರ ಅತಿ ಹೀನಾಯ ವಾದ ಸರ್ಕಾರ, ಆಡಳಿತ ಸಂಪೂರ್ಣವಾಗಿ ಕುಲಗೆಟ್ಟು ಹೋಗಿದೆ. ಅತ್ಯಂತ ಕೆಳ ದರ್ಚೆಯ ಸರ್ಕಾರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ" ಎಂದು ವಾಟಾಳ್ ನಾಗರಾಜ್ ವಿರುದ್ದ ಆರೋಪವನ್ನು ಮಾಡಿದರು.

"ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣೆಗಾಗಿ ಅನುಭವ ಪಂಟಪದ ನಾಟಕವಾಡುತ್ತಿದ್ದಾರೆ. ಇಷ್ಟು ದಿನ ಅನುಭವ ಮಂಟಪ ಯಾಕೆ ನೆನಪಾಗಲಿಲ್ಲ?, ಬಸವ ಕಲ್ಯಾಣದಲ್ಲಿ ಮುಂದೆ ನಡೆಯುವ ಚುನಾವಣೆಗಾಗಿ ಅನುಭವ ಮಂಟಪ ಅಭಿವೃದ್ಧಿ ನಾಟಕವಾಡುವ ಮೂಲಕ ಬಸವಣ್ಣನಿಗೆ ಯಡಿಯೂರಪ್ಪ ಅವಮಾನ ಮಾಡಿದ್ದಾರೆ" ಎಂದರು.












Click it and Unblock the Notifications