ಕಾರ್ಮಿಕರ ಬಿಕ್ಕಟ್ಟು ಪರಿಹಾರಕ್ಕೆ ಒಂದು ದಿನ ಕೇಳಿದ ಟೊಯೋಟಾ
ರಾಮನಗರ, ಫೆಬ್ರವರಿ 4; ರಾಮನಗರದ ಬಿಡದಿಯಲ್ಲಿರುವ ಟೊಯೋಟಾ ಕಾರು ತಯಾರಿಕಾ ಘಟಕದ ಕಾರ್ಮಿಕರು 88 ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಸಮಸ್ಯೆ ಇತ್ಯರ್ಥಪಡಿಸಲು ಟೊಯೋಟಾ ಒಂದು ದಿನದ ಕಾಲಾವಕಾಶ ಕೇಳಿದೆ.
ಗುರುವಾರ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಟೊಯೋಟಾ ಕಾರ್ಖಾನೆಗೆ ಇಲಾಖೆಯ ಅಧಿಕಾರಿಗಳ ಜೊತೆ ಭೇಟಿ ನೀಡಿದರು. ಕಾರ್ಮಿಕರ ಪ್ರತಿಭಟನೆ 88ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಸಚಿವರೇ ಖುದ್ದಾಗಿ ಬಂದು ಸಮಸ್ಯೆ ಬಗೆ ಹರಿಸುವ ಪ್ರಯತ್ನ ನಡೆಸಿದರು.
ಮೊದಲಿಗೆ ಟೊಯೋಟಾ ಆಡಳಿತ ಮಂಡಳಿಯವರ ಜೊತೆ ಕಂಪನಿಯಲ್ಲಿ ಸಭೆ ನಡೆಸಿದರು. ನಂತರ ಬಿಡದಿ ಕೈಗಾರಿಕಾ ಸಂಘದ ಕಚೇರಿಯಲ್ಲಿ ಟೊಯೋಟಾ ಕಾರ್ಮಿಕ ಸಂಘದ ಪದಾಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸಿದರು. ಈ ಎರಡು ಸಭೆಗಳಿಂದ ಸಚಿವರು ಮಾಧ್ಯಮದವರನ್ನು ದೂರ ಇಟ್ಟಿದ್ದರು.

ಎರಡೂ ಸಭೆಗಳ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "74 ಮಂದಿ ಕಾರ್ಮಿಕರ ಅಮಾನತು ಆದೇಶ ಹಿಂಪಡೆಯಲು ಆಡಳಿತ ಮಂಡಳಿಗೆ ಮನವಿ ಮಾಡಿದ್ದೇನೆ. ಕೆಲಸಕ್ಕೆ ಕಾರ್ಮಿಕರು ಹಾಜರಾಗುವುದಕ್ಕೆ ಮುಚ್ಚಳಿಕೆಗೆ ಸಹಿ ಮಾಡಬೇಕೆಂದು ಆಡಳಿತ ಮಂಡಳಿ ಹೇಳಿದೆ" ಎಂದರು.
"ಕಾರ್ಮಿಕ ಕಾನೂನಿನಲ್ಲಿ ಮುಚ್ಚಳಿಕೆಗೆ ಸಹಿ ಹಾಕಲು ಅವಕಾಶವಿಲ್ಲ. ಇದಕ್ಕೆ ಸರ್ಕಾರ ಸಹ ಒಪ್ಪುವುದಿಲ್ಲ ಎಂದು ಹೇಳಿದ್ದೇನೆ. ಆಡಳಿತ ಮಂಡಳಿಯವರು ಸಮಸ್ಯೆ ಇತ್ಯರ್ಥ ಪಡಿಸಲು ಒಂದು ದಿನದ ಕಾಲಾವಕಾಶ ಕೇಳಿದ್ದಾರೆ" ಎಂದು ತಿಳಿಸಿದರು.
ಸಭೆಯ ನಂತರ ಮಾತನಾಡಿದ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಚಕ್ಕೆರೆ ಪ್ರಸನ್ನ, "ಕಳೆದ 88 ದಿನಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇವೆ, ಇಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮತ್ತು ಸ್ಥಳೀಯ ಶಾಸಕ ಎ. ಮಂಜುನಾಥ್ ಸಭೆ ನಡೆಸಿ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ನಾಳೆ ನಮ್ಮ ಹೋರಾಟ ತಾರ್ಕಿಕ ಅಂತ್ಯ ಕಾಣಬಹುದು ಎಂಬ ವಿಶ್ವಾಸವಿದೆ" ಎಂದರು.












Click it and Unblock the Notifications