ರಾಮನಗರ: ದ್ವಿಚಕ್ರ ವಾಹನದಲ್ಲಿದ್ದ 300 ಗ್ರಾಂ ಚಿನ್ನ ದೋಚಿದ ಕಳ್ಳರು
ರಾಮನಗರ, ಅಕ್ಟೋಬರ್ 17: ದ್ವಿಚಕ್ರ ವಾಹನದಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಒಡವೆಗಳನ್ನು ಕೆಲ ನಿಮಷಗಳಲ್ಲೇ ದೋಚಿರುವ ಘಟನೆ ನಗರದ ಲೋಕೋಪಯೋಗಿ ಕಚೇರಿ ಅವರಣದಲ್ಲಿ ನಡೆದಿದೆ.
ತಾಲ್ಲೂಕಿನ ಕೂಟಗಲ್ ಹೋಬಳಿಯ ಯರೇಹಳ್ಳಿ ಗ್ರಾಮದ ನಿವಾಸಿ ಮಹದೇವಯ್ಯ ಎಂಬುವರು ಚಿನ್ನದ ಒಡವೆಗಳನ್ನು ಕಳೆದುಕೊಂಡವರು. ಮಹದೇವಯ್ಯ ಅವರು ಚಿನ್ನದ ಒಡವೆಗಳನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಇಡುವುದನ್ನು ಗಮನಿಸಿದ್ದ ಕಳ್ಳರು ಮಹದೇವಯ್ಯನವರನ್ನು ಹಿಂಬಾಲಿಸಿದ್ದಾರೆ. ಅವರು ವಾಹನ ನಿಲ್ಲಿಸಿ pwd ಕಚೇರಿಗೆ ತೆರಳಿದಾಗ ಒಡವೆ ಲಪಟಾಯಿಸಿದ್ದಾರೆ.
ಮಹದೇವಯ್ಯ ಸುಮಾರು 500 ಗ್ರಾಂ ಒಡವೆಗಳನ್ನು ಬ್ಯಾಂಕ್ ಲಾಕರ್ ನಿಂದ ತೆಗೆದು, ಅದರಲ್ಲಿ 200 ಗ್ರಾಂ ಒಡವೆಗಳನ್ನು ಕರ್ನಾಟಕ ಬ್ಯಾಂಕ್ ನಲ್ಲಿ ಗಿರವಿ ಇಟ್ಟು ಉಳಿದ 300 ಗ್ರಾಂ ಒಡವೆಗಳನ್ನು ತಮ್ಮ ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದರು. ಲೋಕೋಪಯೋಗಿ ಇಲಾಖೆ ಅವರಣದಲ್ಲಿ ಸ್ಕೂಟರ್ ನಿಲ್ಲಿಸಿ ಕಚೇರಿ ಒಳಹೋಗಿ ವಾಪಸ್ಸು ಬರುವಷ್ಟರಲ್ಲಿ ಒಡವೆಗಳನ್ನು ದೋಚಿದ್ದಾರೆ.

ಈ ಸಂಬಂಧ ನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ನಡೆದ ಆವರಣದಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳು ಇರಲಿಲ್ಲ. ಜನನಿಬಿಡ ಪ್ರದೇಶದಲ್ಲಿ ಕಳ್ಳತನ ಎಸಗಿದ್ದಾರೆ.












Click it and Unblock the Notifications