ತೂಕ ಹೆಚ್ಚಿಸಲು ಮೇಕೆಗಳಿಗೆ ಬಲವಂತವಾಗಿ ನೀರು ಕುಡಿಸುವ ಅಮಾನವೀಯ ಕೃತ್ಯ ಬಯಲು
ರಾಮನಗರ, ಡಿಸೆಂಬರ್12: ಹಣದಾಸೆಗಾಗಿ ಮೇಕೆ ಮಾರಾಟಗಾರರು ತೂಕ ಹೆಚ್ಚಿಸಲು ಬಲವಂತವಾಗಿ ಮೇಕೆಗಳಿಗೆ ಪೈಪ್ ಮೂಲಕ ನೀರು ಕುಡಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವ್ಯಾಪಾರಸ್ಥರು ಮೂಕ ಪ್ರಾಣಿಯ ಜೀವಕ್ಕೆ ಕುತ್ತು ತರುವ ಜೊತೆಗೆ ಅಮಾಯಕ ಗ್ರಾಹಕರನ್ನು ವಂಚಿಸುತ್ತಿರುವ ಘಟನೆ ಮಾಗಡಿ ಸಂತೆಯಲ್ಲಿ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.
Mandous Cyclone: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಡಿ.13 ರವರೆಗೆ ಮಳೆ
ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ನಡೆಯುವ ಶುಕ್ರವಾರ ಸಂತೆಯಲ್ಲಿ ಮೇಕೆಗಳಿಗೆ ಬಲವಂತವಾಗಿ ನೀರು ಕುಡಿಸಿ ತೂಕ ಹೆಚ್ಚಿಸಿ ರೈತರಿಗೆ ಮೋಸ ಮಾಡುತ್ತಿರುವ ವಿಚಿತ್ರ ದಂಧೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಹಣಕ್ಕಾಗಿ ಮಾನವೀಯತೆಯನ್ನೇ ಮರೆತ ವ್ಯಾಪಾರಸ್ಥರು, ಮೂಕ ಪ್ರಾಣಿಗಳನ್ನು ಸಾವಿನ ದವಡೆಗೆ ನೂಕುತ್ತಿದ್ದಾರೆ ಎಂದು ಪ್ರಾಣಿ ಪ್ರಿಯರು ಕಿಡಿಕಾರಿದ್ದಾರೆ.
ರಾಜ್ಯದಲ್ಲೇ ಉತ್ತಮ ತಳಿಯ ಕುರಿ ಮೇಕೆಗಳಿಗೆ ಹೆಸರು ಪಡೆದಿರುವ ಮಾಗಡಿ ಕೋಟೆ ಮೈದಾನದಲ್ಲಿ ನಡೆಯುವ ಶುಕ್ರವಾರ ಸಂತೆಯಲ್ಲಿ ವ್ಯಾಪಾರಸ್ಥರು ಈ ರೀತಿಯ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಕುರಿ ಹಾಗೂ ಮೇಕೆ ಖರೀದಿಸಲು ಬರುವ ಜನರಿಗೆ ವಂಚನೆಯಾಗುತ್ತಿದೆ. ಮೇಕೆಗಳ ತೂಕ ಹೆಚ್ಚಾಗಬೇಕೆಂದು ಬಲವಂತವಾಗಿ ನೀರುಣಿಸುತ್ತಿರುವ ದಲ್ಲಾಳಿಗಳು ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಬೆಂಗಳೂರು ವಿವಿ ಘಟಿಕೋತ್ಸವ: 6 ಚಿನ್ನದ ಪದಕಗಳಿಗೆ ಕೊರಳೊಡ್ಡಿದ ರಾಮನಗರದ ಸ್ಪೂರ್ತಿ
ಉತ್ತರ ಕರ್ನಾಟಕದ ಭಾಗದಿಂದ ಕುರಿ ಮೇಕೆಗಳನ್ನು ಮಾಗಡಿ ಶುಕ್ರವಾರ ಸಂತೆಗೆ ತರುವ ವ್ಯಾಪಾರಿಗಳು, ಸಂತೆ ತಲುಪುವ ಮೊದಲೇ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಸಣ್ಣ ಪಂಪ್ ಬಳಸಿ ಮೇಕೆಗಳ ಬಾಯಿಗೆ ಪೈಪ್ ತುರುಕಿ ಬಲವಂತವಾಗಿ ಹಲವು ಲೀಟರ್ ನೀರನ್ನು ತುಂಬಿ ಮೇಕೆ ಗ್ರಾತವನ್ನು ಹಿಗ್ಗಿಸಿ ತೂಕ ಬರುವಂತೆ ಮಾಡಿ ಸಂತೆಗೆ ಬರುವ ಅಮಾಯಕ ಜನರನ್ನು ಸುಲಭವಾಗಿ ವಂಚಿಸುತ್ತಿದ್ದಾರೆ.
ಬಲವಂತವಾಗಿ ನೀರು ತುಂಬಿಸಿರುವ ಮೇಕೆ ಹೆಚ್ಚೆಂದರೆ ಮೂರು ಅಥವಾ ನಾಲ್ಕು ದಿನ ಮಾತ್ರ ಬದುಕುತ್ತದೆ. ಅಷ್ಟರಲ್ಲಿ ಮೇಕೆ ಖರೀದಿಸಿದ ಗ್ರಾಹಕ ಸೂಕ್ತ ಚಿಕಿತ್ಸೆ ನೀಡಿದರೆ ಮಾತ್ರ ಮೇಕೆ ಬದುಕುತ್ತದೆ. ಹಣ ಗಳಿಸುವ ಉದ್ದೇಶದಿಂದ ಮೂಕ ಪ್ರಾಣಿಗಳ ಪ್ರಾಣಕ್ಕೂ ಕುತ್ತು ತರುವುದರ ಜೊತೆಗೆ ಖರೀದಿಸುವ ಅಮಾಯಕ ಗ್ರಾಹಕರಿಗೂ ಅನ್ಯಾಯ ಎಸಗುತ್ತಿರುವ ಖದೀಮರ ಕೃತ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋ ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅಮಾನವೀಯ ಕೃತ್ಯ ಎಸಗುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.