ಸರ್ಕಾರಕ್ಕೆ ಸೆಡ್ಡು ಹೊಡೆದು ತಾತ್ಕಾಲಿಕ ಸೇತುವೆ ನಿರ್ಮಿಸಿದ ಸುಗ್ಗನಹಳ್ಳಿ ಗ್ರಾಮಸ್ಥರು
ರಾಮನಗರ, ನವೆಂಬರ್, 25: ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಭಾರೀ ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಹಾಗೆಯೇ ಸುಗ್ಗನಹಳ್ಳಿ ಗ್ರಾಮದ ಸಂಪರ್ಕ ಸೇತುವೆಯೂ ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ತಿಂಗಳು ಕಳೆದರೂ ಸೇತುವೆ ನಿರ್ಮಾಣಕ್ಕೆ ಮುಂದಾಗದ ಸರ್ಕಾರಕ್ಕೆ ಗ್ರಾಮದ ಜನರು ಛೀಮಾರಿ ಹಾಕಿದ್ದಾರೆ. ಅಲ್ಲದೇ ಸರ್ಕಾರದ ಯಾವುದೇ ಸಹಾಯವಿಲ್ಲದೇ ಗ್ರಾಮಸ್ಥರೇ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಮೂಲಕ ಸೆಡ್ಡು ಹೊಡೆದಿದ್ದಾರೆ.
ಜಿಲ್ಲೆಯಲ್ಲಿ ಕಳೆದ ತಿಂಗಳು ಸುರಿದ ಮಳೆಗೆ ಮಂಚನಬೆಲೆ ಜಲಾಶಯ ಭರ್ತಿಯಾಗಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಅರ್ಕಾವತಿ ನದಿಗೆ ಬಿಡಲಾಗಿತ್ತು. ಈ ಹಿನ್ನೆಲೆ ಸುಗ್ಗನಹಳ್ಳಿ ಬಳಿಯ ಸೇತುವೆ ಕೊಚ್ಚಿ ಹೋಗಿದ್ದು, ಪಕ್ಕದ ಹತ್ತಾರು ಗ್ರಾಮಗಳ ಜನರು ತೊಂದರೆಗೆ ಸಿಲುಕಿದ್ದರು.
ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಬಸಪ್ಪನ ಕ್ರೇತ್ರದಲ್ಲಿ ಲಕ್ಷ ದೀಪೋತ್ಸವದ ಸೊಬಗು
ಸುಗ್ಗನಹಳ್ಳಿ ಹಾಗೂ ರಾಮನಗರಕ್ಕೆ ಪ್ರಮುಖ ಸಂಪರ್ಕವಾಗಿದ್ದ ಸೇತುವೆ ಮುರಿದು ಬಿದ್ದಿದ್ದರಿಂದ ಪಕ್ಕದ ಗ್ರಾಮಗಳ ಜನರು ಹಾಗೂ ಶಾಲಾ ಮಕ್ಕಳು ಪ್ರತಿನಿತ್ಯ ಸಮಸ್ಯೆ ಎದುರಿಸುವಂತೆ ಆಗಿದೆ. ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಸುಮಾರು 30 ಕಿಲೋ ಮೀಟರ್ ಸುತ್ತಿ ಬಿಡದಿ ಮೂಲಕ ರಾಮನಗರ ತಾಲೂಕು ಕೇಂದ್ರವನ್ನು ತಲುಪಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಗ್ರಾಮಸ್ಥರಿಂದ ತಾತ್ಕಾಲಿಕ ಸೇತುವೆ ನಿರ್ಮಾಣ
ಮುರಿದು ಬಿದ್ದಿರುವ ಸೇತುವೆಯನ್ನು ಪುನರ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಇದರಿಂದ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮಸ್ಥರು ಸರ್ಕಾರದ ನೆರವಿಲ್ಲದೇ ತಮ್ಮ ಸ್ವಂತ ವೆಚ್ಚದಲ್ಲಿ ಸುಗ್ಗನಹಳ್ಳಿ ಗ್ರಾಮ ಅರ್ಕಾವತಿ ನದಿಗೆ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ಕಸಬಾ ಹೋಬಳಿ ಪ್ರದೇಶದ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರಿಗೆ ಸೇತುವೆ ಇಲ್ಲದೆ ತುಂಬಾ ತೊಂದರೆ ಆಗಿತ್ತು. ಮಕ್ಕಳು ಶಾಲೆಗೆ ನದಿ ದಾಟಿಯೇ ಹೋಗಬೇಕಿತ್ತು.
ಸರ್ಕಾರದ ವಿರುದ್ಧ ಗ್ರಾಮಸ್ಥರ ಆರೋಪ
ಮಳೆ ಸುರಿದ ಸಂದರ್ಭದಲ್ಲಂತೂ ನದಿ ದಾಟಲು ಹರಸಾಹಸವೇ ಪಡಬೇಕಾಗಿತ್ತು. ಹಾಗಾಗಿ ನಾವೇ ಖುದ್ದು ಸೇತುವೆಯನ್ನು ನಿರ್ಮಿಸಿಕೊಂಡಿದ್ದೇವೆ. ಸೇತುವೆ ನಿರ್ಮಿಸಿಕೊಡಿ ಎಂದು ಸಂಬಂಧಪಟ್ಟ ಅಧಿಕಾರಿಗಳು, ಶಾಸಕರಿಗೆ ಮನವಿಯನ್ನೂ ಮಾಡಿದ್ದೆವು. ಸರ್ಕಾರಕ್ಕೂ ಸಹ ಅರ್ಜಿ ಸಲ್ಲಿಸಿದ್ದೆವು. ಆದರೂ ಯಾವ ಪ್ರಯೋಜನವೂ ಆಗಲಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸರ್ಕಾರ ಹಾಗೂ ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಶಾಶ್ವತ ಸೇತುವೆ ನಿರ್ಮಾಣ ಮಾಡಿ ಎಂದು ಸುಗ್ಗನಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದರು. 1985ರಲ್ಲಿಅಂದಿನ ಶಾಸಕರಾಗಿದ್ದ ಸಿ.ಬೋರಯ್ಯ ಅವರ ಹೋರಾಟದ ಫಲವಾಗಿ ಸುಗ್ಗನಹಳ್ಳಿ ಗ್ರಾಮದ ಬಳಿಯ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಾಣವಾಗಿತ್ತು. ಸುಮಾರು 150 ಮೀಟರ್ ಉದ್ದ ಹಾಗೂ 30 ಅಡಿ ವಿಸ್ತೀರ್ಣದ ಸೇತುವೆಗೆ ನೀರು ಹರಿಯಲು ಪೈಪ್ಗಳನ್ನು ಅಳವಡಿಕೆ ಮಾಡಲಾಗಿತ್ತು.
15 ವರ್ಷಗಳಿಂದ ಅಪಾಯದಲ್ಲಿದ್ದ ಸೇತುವೆ
ಕಳೆದ ಹತ್ತು - ಹದಿನೈದು ವರ್ಷಗಳ ಹಿಂದೆ ಅರ್ಕಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆಯಿಂದ ನಡೆದಿತ್ತು. ಆದ್ದರಿಂದ ಗಟ್ಟಿಮುಟ್ಟಾಗಿದ್ದ ಸೇತುವೆ ಪ್ರವಾಹಕ್ಕೆ ಕೊಚ್ಚಿಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಲೂಟಿಕೋರರು ಸೇತುವೆಯ ಬುಡದಲ್ಲೇ ಮರಳನ್ನು ತೆಗೆದ ಪರಿಣಾಮ, ಸೇತುವೆ ಮುರಿದುಬಿದ್ದಿದೆ. ಕಳೆದ ಹದಿನೈದು ವರ್ಷಗಳಿಂದ ಈ ಸೇತುವೆ ಅಪಾಯದಲ್ಲಿತ್ತು. ಆದರೆ ನದಿಯಲ್ಲಿ ಹೆಚ್ಚು ನೀರು ಬಾರದ ಕಾರಣ ಸೇತುವೆ ಕುಸಿದಿರಲಿಲ್ಲ. ಆದರೆ, ಇದೀಗ ಬೆಂಗಳೂರು ಸೇರಿದಂತೆ ತಿಪ್ಪಗೊಂಡನಹಳ್ಳಿ, ಮಂಚನಬೆಲೆ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾದ ಕಾರಣ 5 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ರಭಸವಾಗಿ ಹರಿದುಬಂದಿದೆ. ಆದ್ದರಿಂದ ಸೇತುವೆ ಕೊಚ್ಚಿ ಹೋಗಿದೆ.