ರಾಮನಗರಕ್ಕೆ ನೀಡಿದ ಅನುದಾನ ಸ್ಥಗಿತಗೊಳಿಸಿತಾ ಬಿಎಸ್ ವೈ ಸರ್ಕಾರ?
ರಾಮನಗರ, ಫೆಬ್ರವರಿ.16: ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಸದಾ ದ್ವೇಷದ ರಾಜಕಾರಣವನ್ನೇ ಮಾಡುತ್ತಾ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಸರ್ಕಾರದ ನಡೆಯನ್ನು ಫೆಬ್ರವರಿ.17ರಿಂದ ಆರಂಭವಾಗಲಿರುವ ಸದನದಲ್ಲಿ ಪ್ರಶ್ನೆ ಮಾಡುವುದಾಗಿ ಹೆಚ್ಡಿಕೆ ಗುಡುಗಿದ್ದಾರೆ.
ರಾಮನಗರದ ಕೈಲಾಂಚ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಲಕ್ಷ್ಮಿ ವೆಂಕಟೇಶ್ವರ ದೇಗುಲದ ಪ್ರವೇಶ ಹೆಬ್ಬಾಗಿಲು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಏಸು ಪ್ರತಿಮೆ ನಿರ್ಮಾಣ: ಫೆ. 25 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ
ಸೋಮವಾರ ನಡೆಯುವ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ವೇಳೆ ರಾಜ್ಯ ಸರ್ಕಾರದ ದ್ವೇಷದ ರಾಜಕಾರಣದ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಜೊತೆಗೆ ನನ್ನ ಕಾಲದಲ್ಲಿ ಕೊಟ್ಟಿರುವ ಎಲ್ಲಾ ಅನುದಾನಗಳನ್ನು ಸ್ಥಗಿತಗೊಳಿಸಿದ್ದನ್ನು ಪ್ರಶ್ನಿಸುತ್ತೇನೆ ಎಂದು ಹೇಳಿದರು.

ಜನವಿರೋಧಿ ನೀತಿ ವಿರುದ್ಧ ಜೆಡಿಎಸ್ ಹೋರಾಟ:
ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಜೆಡಿಎಸ್ ಪಕ್ಷವು ಸದಾ ಹೋರಾಟಗಳನ್ನು ಮಾಡುತ್ತಲೇ ಬಂದಿದೆ. ಈಗಲೂ ಸಹ ದೇವೇಗೌಡರ ನೇತೃತ್ವದಲ್ಲಿ ಹೋರಾಟವನ್ನು ಮುಂದುವರಿಸಲಾಗುತ್ತದೆ. ನಮ್ಮ ಕ್ಷೇತ್ರಗಳ ಅನುದಾನ ಕಡಿತದ ಬಗ್ಗೆ ಇಲಾಖೆಯ ಸಚಿವರು, ಅಧಿಕಾರಿಗಳು ಸ್ಪಂದಿಸಿದ್ದಾರೆ. ಆದರೆ ಸಿಎಂ ಬಳಿ ಫೈಲ್ ಗಳಿವೆ, ಅವರು ಯಾವಾಗ ಕಡತಗಳಿಗೆ ಸಹಿ ಹಾಕುತ್ತಾರೆ ಎಂದು ಕಾಯುತ್ತಿದ್ದಾರೆ. 2008ರಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ನಮಗೆ ಇದೇ ರೀತಿ ತೊಂದರೆಯಾಗಿತ್ತು. ಜೆಡಿಎಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಯಾವುದೇ ಸಹಕಾರ ನೀಡಿರಲಿಲ್ಲ. ಬಿಜೆಪಿ ಸರ್ಕಾರವು ಈಗಲೂ ಅದೇ ರೀತಿ ನಡೆದುಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಹಿಂದಿನ ದೋಸ್ತಿ ಸರ್ಕಾರ ಬೀಳುವುದಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಗೆ ಹೆಚ್ಡಿಕೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ನಮ್ಮ ಸರ್ಕಾರ ಕೆಡವಿದ್ರಾ ಅಥವಾ ನಮ್ಮನ್ನು ತಬ್ಬಿಕೊಂಡು ಸಹಕಾರ ಕೊಟ್ಟಿದ್ರಾ ಅನ್ನೋದು ಗೊತ್ತಿಲ್ಲ. ಅದೆಲ್ಲ ಮುಗಿದ ಅಧ್ಯಾಯವಾಗಿದ್ದು, ಈಗ ಅದರ ಬಗ್ಗೆ ಚರ್ಚೆ ಮಾಡೋದು ಬೇಡ ಎಂದರು.












Click it and Unblock the Notifications