ಎಚ್. ಡಿ. ಕುಮಾರಸ್ವಾಮಿಗೆ ದಿನೇಶ್ ಕಲ್ಲಹಳ್ಳಿ ಪ್ರಶ್ನೆಗಳು
ರಾಮನಗರ, ಮಾರ್ಚ್ 06: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮೊದಲು ಸಿಡಿಯನ್ನು ಬಹಿರಂಗಗೊಳಿಸಿ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ, "ಈ ಪ್ರಕರಣದಲ್ಲಿ 5 ಕೋಟಿಯ ಡೀಲ್ ನಡೆದಿದೆ. ಇದು ನನಗಿರುವ ಮೂಲಗಳ ಮಾಹಿತಿ. ಕಳೆದು ಮೂರು ತಿಂಗಳಿಂದ ಈ ಡೀಲ್ ವ್ಯವಹಾರ ನಡೆದಿದೆ. ದೊಡ್ಡ ದೊಡ್ಡವರೇ ಈ ಪ್ರಕರಣದಲ್ಲಿ ಇದ್ದಾರೆ" ಎಂದು ಹೇಳಿದ್ದರು.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ದಿನೇಶ್ ಕಲ್ಲಹಳ್ಳಿ, "ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯ ಸತ್ಯಾಸತ್ಯತೆಯನ್ನು ಬಹಿರಂಗ ಮಾಡಬೇಕು. ಮಾಧ್ಯಮಗಳ ಮುಂದೆ, ತನಿಖಾಧಿಕಾರಿಗಳ ಮುಂದೆ ಈ ಕುರಿತು ಸ್ಪಷ್ಟಪಡಿಸಬೇಕು" ಎಂದು ಒತ್ತಾಯಿಸಿದರು.

ಶನಿವಾರ ಕನಕಪುರದಲ್ಲಿ ಮಾತನಾಡಿದ ದಿನೇಶ್ ಕಲ್ಲಹಳ್ಳಿ, "ಕುಮಾರಸ್ವಾಮಿ ಅವರು ಸಿಡಿ ಪ್ರಕರಣ ಕಳೆದ 3 ತಿಂಗಳ ಹಿಂದೆ ನಡೆದಿದೆ, ಇದರ ಹಿಂದೆ ಪ್ರಭಾವಿಗಳ ಕೈವಾಡವಿದೆ, 5 ಕೋಟಿ ಹಣದ ವ್ಯವಹಾರ ನಡೆದಿದೆ ಎಂದು ಹೇಳಿದ್ದಾರೆ. ಹಾಗಾಗಿ ನಾನು ಒತ್ತಾಯ ಮಾಡುತ್ತಿದ್ದೇನೆ ನೀವು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಯಾಗಿದ್ದವರು ನಿಮಗೂ ಸಾಮಾಜಿಕ ಕಳಕಳಿ ಹಾಗೂ ಬದ್ಧತೆ ಇದೆ. ನಿಮ್ಮಲ್ಲಿರುವ ಸಾಕ್ಷ್ಯವನ್ನು ಬಹಿರಂಗ ಮಾಡಿ" ಎಂದು ಹೇಳಿದರು.
"ಸಿಡಿ ಹಿಂದೆ ಪ್ರಭಾವಿಗಳಿದ್ದಾರೆ ಎಂದು ಹೇಳಿದ್ದೀರಿ. ಪ್ರಕರಣದ ಹಿಂದಿರುವ ಪ್ರಭಾವಿಗಳು ಯಾರು?. ಕಾಂಗ್ರಸ್, ಜೆಡಿಎಸ್ ಅಥವ ಬಿಜೆಪಿ ನಾಯಕರೇ ಎಂಬುದನ್ನು ಸ್ಪಷ್ಟಪಡಿಸಿ. ಕುಮಾರಸ್ವಾಮಿ ತಮ್ಮಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸಬೇಕು" ಎಂದರು.
"5 ಕೋಟಿ ಹಣದ ವ್ಯವಹಾರ ನಡೆದಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಹಣ ಕೊಟ್ಟವರು ಯಾರು?, ಯಾರಿಗೆ ಕೊಟ್ಟಿದ್ದಾರೆ? ಮತ್ತು ಹಣ ಪಡೆದವರು ಯಾರು? ಯಾವ ಉದ್ದೇಶದಿಂದ ಹಣದ ವ್ಯವಹಾರ ನಡೆದಿದೆ? ಎಂಬ ಮಾಹಿತಿಯನ್ನು ತನಿಖೆ ಮಾಡಿಸಿ, ಸತ್ಯ ಜನರಿಗೆ ತಿಳಿಯಲಿ" ಎಂದು ಆಗ್ರಹಿಸಿದರು.












Click it and Unblock the Notifications