ರಾಮನಗರ: ರೇಷ್ಮೆ ಬೆಳೆಗಾರರಿಗೆ 1.5 ಕೋಟಿ ಹಣ ವಂಚಿಸಿ ನಾಪತ್ತೆಯಾದ ರೇಷ್ಮೆ ಮಾರುಕಟ್ಟೆ ಅಧಿಕಾರಿ
ರಾಮನಗರ, ಮಾರ್ಚ್ 23: ಏಷ್ಯಾದಲ್ಲೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಎಂದು ಪ್ರಸಿದ್ಧಿ ಪಡೆದಿರುವ ರೇಷ್ಮೆ ನಗರಿ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಅಧಿಕಾರಿಯೊಬ್ಬರು ರೇಷ್ಮೆ ಬೆಳೆಗಾರರಿಗೆ ಹಣ ಪಾವತಿಸದೇ ನಾಪತ್ತೆಯಾಗಿರುವ ಘಟನೆ ನಡೆದಿದೆ.
ರಾಜ್ಯದಲೇ ಅತಿ ಹೆಚ್ಚು ರೇಷ್ಮೆಗೂಡು ಮಾರಾಟವಾಗುವ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ರಾಜ್ಯ ಹಾಗೂ ಹೊರ ರಾಜ್ಯದ ಸಾವಿರಾರು ರೈತರು ರೇಷ್ಮೆಗೂಡು ಮಾರಾಟ ಮಾಡುತ್ತಿದ್ದಾರೆ. ಸುಮಾರು 400 ರೇಷ್ಮೆ ಬೆಳೆಗಾರರಿಗೆ ಆನ್ ಲೈನ್ ಪೇಮೆಂಟ್ ಮಾಡದೇ ಮಾರುಕಟ್ಟೆ ಅಧಿಕಾರಿ ಪಂಗನಾಮ ಹಾಕಿದ್ದಾರೆ. ಅಲ್ಲದೇ ಕಳೆದ ಐದು ದಿನಗಳಿಂದ ಯಾರಿಗೂ ಸಿಗದೆ ನಾಪತ್ತೆಯಾಗಿದ್ದಾರೆ.
ಕಳೆದ ಶುಕ್ರವಾರದಿಂದ ರೇಷ್ಮೆ ಮಾರುಕಟ್ಟೆಯ ಉಪ ನಿರ್ದೇಶಕ ಮುನ್ಷಿಬಸಯ್ಯ ರೈತರಿಗೆ ನೀಡಬೇಕಾದ ಸುಮಾರು 1 ಕೋಟಿ 50 ಲಕ್ಷ ನೀಡದೆ ನಾಪತ್ತೆಯಾಗಿದ್ದಾರೆ. ಶುಕ್ರವಾರ ಕರ್ತವ್ಯ ಮುಗಿಸಿ ಹೋದ ಅಧಿಕಾರಿ ಮನೆಗೂ ಹೋಗದೆ, ಕಡತಗಳೊಂದಿಗೆ ಅಧಿಕಾರಿ ನಾಪತ್ತೆಯಾಗಿದ್ದಾರೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದೆ.

ರೇಷ್ಮೆ ಗೂಡು ಖರೀದಿಸಿದ ಬಳಿಕ ಡೀಲರ್ಸ್ಗಳು ಹಣ ಸಂದಾಯ ಮಾಡಿಲ್ಲವೋ ಅಥವಾ ಸಂದಾಯವಾದ ಹಣವನ್ನು ಮುನ್ಷಿಬಸಯ್ಯ ರೈತರಿಗೆ ಕೊಟ್ಟಿಲ್ಲವೋ ಎಂಬ ಗೊಂದಲವೂ ಮಾರುಕಟ್ಟೆಯಲ್ಲಿ ಏರ್ಪಟಿದೆ. ಇದೀಗ ಮೇಲ್ನೋಟಕ್ಕೆ ಉಪ ನಿರ್ದೇಶಕ ಮುನ್ಷಿಬಸಯ್ಯ ಅವರಿಂದಲೇ ಕರ್ತವ್ಯ ಲೋಪವಾಗಿದೆ ಎಂದು ಪರಿಗಣಿಸಿ ರೇಷ್ಮೆ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ವನಿತಾ ಅವರು ಮುನ್ಷಿಬಸವಯ್ಯನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನು ಮುನ್ಷಿಬಸಯ್ಯ ಕಾಣಿಯಾಗಿದ್ದಾರೆ ಎಂದು ಬೆಂಗಳೂರಿನ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲು ಸಹ ಮಾಡಿದ್ದಾರೆ. ದೂರು ಕೊಟ್ಟ ಹಿನ್ನೆಲೆಯಲ್ಲಿ ಆರ್.ಆರ್ ನಗರ ಪೊಲೀಸರು ರಾಮನಗರದ ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿ ಮುನ್ಷಿಬಸಯ್ಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ರೇಷ್ಮೆ ಗೂಡು ಮಾರಾಟ ಮಾಡಿ ತಿಂಗಳು ಕಳೆದರು ಸಹ, ಹಣ ಸಂದಾಯವಾಗಿಲ್ಲ ಎಂಬ ಕಾರಣಕ್ಕಾಗಿ ರೈತರು ಮಾರುಕಟ್ಟೆಯಲ್ಲಿ ಹಲವು ಬಾರಿ ಗಲಾಟೆ ಸಹ ಮಾಡುತ್ತಿದ್ದರು. ಇಂದು ಸಹ ರೈತರು ಅಧಿಕಾರಿಗಳನ್ನು ಭೇಟಿ ಮಾಡಿ ಹಲವು ದಿನಗಳ ಹಿಂದೆಯೇ ಗೂಡು ಮಾರಾಟ ಮಾಡಲಾಗಿದೆ. ಆದರೆ, ಇದುವರೆಗೆ ಹಣ ಮಾತ್ರ ಖಾತೆಗೆ ಜಮೆಯಾಗಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications