ಉಕ್ರೇನ್ನಲ್ಲಿ ಸಿಲುಕಿದ ರಾಮನಗರ ವಿದ್ಯಾರ್ಥಿನಿ; ರಾಜ್ಯದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟದಲ್ಲಿ
ರಾಮನಗರ, ಫೆಬ್ರವರಿ 25: ರಷ್ಯಾ ದೇಶವು ನೆರೆಯ ಉಕ್ರೇನ್ ಮೇಲೆ ಸಮರ ಸಾರಿದ್ದು, ಉಕ್ರೇನ್ನಲ್ಲಿ ರಾಜ್ಯದ 10 ಮಂದಿ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಸರ್ಕಾರ ನೀಡುತ್ತಿರುವ ಸಂಖ್ಯೆ ತಪ್ಪು. ಉಕ್ರೇನ್ನಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ ಎಂಬ ಸತ್ಯವನ್ನು ಉಕ್ರೇನ್ನಲ್ಲಿ ಸಿಲುಕಿರುವ ರಾಮನಗರ ಜಿಲ್ಲೆಯ ಯುವತಿ ನಿವೇದಿತಾ ಬಹಿರಂಗಪಡಿಸಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ನಿವೇದಿತಾ ತನ್ನ ಪೋಷಕರೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುವ ಸಮಯದಲ್ಲಿ ತಮ್ಮ ಆತಂಕ ಹೊರಹಾಕಿದ್ದಾರೆ. ತಾನು ವ್ಯಾಸಂಗ ಮಾಡುತ್ತಿರುವ ಉಕ್ರೇನ್ನ ಜಫೋರ್ಷಿಯಾ ಯೂನಿವರ್ಸಿಟಿ ಒಂದರಲ್ಲೇ 40ಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ತಿಳಿಸಿದರು.
ಉಕ್ರೇನ್ನಲ್ಲಿ ಸಿಲುಕಿದ ಕರ್ನಾಟಕದ ವಿದ್ಯಾರ್ಥಿಗಳು: 24/7 ಸಹಾಯವಾಣಿ ಆರಂಭ
ತಿಮ್ಮಸಂದ್ರ ಗ್ರಾಮದ ಚಂದ್ರಶೇಖರ್ ಎಂಬುವವರ ಪುತ್ರಿ ನಿವೇದಿತಾ ಉಕ್ರೇನ್ ಜಫೋರ್ಷಿಯಾ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಉಕ್ರೇನ್ ಯುದ್ಧದಿಂದ ನಿವೇದಿತಾ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಬೇಕೆಂದು ಸರ್ಕಾರವನ್ನು ನಿವೇದಿತಾ ಪೋಷಕರು ಒತ್ತಾಯಿಸಿದ್ದಾರೆ.
ದೇಶದ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ
ಉಕ್ರೇನ್ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ ನಿವೇದಿತಾ ಜಫೋರ್ಷಿಯಾ ಯೂನಿವರ್ಸಿಟಿಯಲ್ಲಿ ರಾಜ್ಯದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ದೇಶದ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸದ್ಯಕ್ಕೆ ಯೂನಿವರ್ಸಿಟಿ ಬಳಿ ಶಾಂತವಾಗಿದೆ. ಆದರೆ ಯಾವ ಕ್ಷಣದಲ್ಲಾದರೂ ದಾಳಿ ನಡೆಯಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಆಹಾರ, ಅಗತ್ಯ ವಸ್ತುಗಳು, ಪಾಸ್ಪೋರ್ಟ್ ಸಿದ್ಧ ಮಾಡಿಕೊಳ್ಳಿ, ಸುರಕ್ಷಿತ ಸ್ಥಳಕ್ಕೆ ನಿಮ್ಮನ್ನು ಸ್ಥಳಾಂತರ ಮಾಡುತ್ತೇವೆ ಎಂದು ಯೂನಿವರ್ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ಯಾವುದೇ ಮಾಲ್ಗಳು ತೆರೆಯುತ್ತಿಲ್ಲ, ದಿನಸಿ ಪದಾರ್ಥಗಳು ಖಾಲಿಯಾದರೆ ತೊಂದರೆ ಆಗುತ್ತದೆ ಹಾಗೂ ಯಾವುದೇ ಕ್ಷಣದಲ್ಲಿ ವಿದ್ಯುತ್ ಮತ್ತು ಇಂಟರ್ನೆಟ್ ಸೌಲಭ್ಯ ಸ್ಥಗಿತವಾಗುವ ಆತಂಕ ಕಾಡುತ್ತಿದೆ ಎಂದು ವಿವರಿಸಿದರು.
ಉಕ್ರೇನ್ನಲ್ಲಿ ಸಿಲುಕಿದ ಶಿವಮೊಗ್ಗದ ಮೂವರು ವಿದ್ಯಾರ್ಥಿಗಳು
ನಿವೇದಿತಾ ಪೋಷಕರ ಪ್ರತಿಕ್ರಿಯೆ
ಇನ್ನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಿವೇದಿತಾ ಪೋಷಕರು, ಉಕ್ರೇನ್ನಲ್ಲಿ ಯುದ್ಧದ ಭೀತಿ ನಿರ್ಮಾಣವಾದ ಹಿನ್ನಲೆಯಲ್ಲಿ ಅಧಿಕಾರಿಗಳು ಮಗಳನ್ನು ವಾಪಸ್ಸು ಕರೆಯಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಅಧಿಕಾರಗಳ ಸೂಚನೆಯಂತೆ ಫೆ.28ರ ಸಂಜೆ ಉಕ್ರೇನ್ನಿಂದ ಹೊರಟು 11 ಗಂಟೆಗಳ ಪ್ರಯಾಣ ಮಾಡಿ ಮಾ.1ರಂದು ಭಾರತಕ್ಕೆ ಬರುವ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದ್ದೇವು. ಅದರೆ ಈಗ ಉಕ್ರೇನ್ನ ಎಲ್ಲಾ ವಿಮಾನ ನಿಲ್ದಾಣ ಬಂದ್ ಮಾಡಿರುವುದರಿಂದ ಭಯವಾಗಿದೆ ಎಂದು ತಿಳಿಸಿದರು.
ನಿವೇದಿತಾ ತಾಯಿ ವಿನುತಾ ಮಾತನಾಡಿ, ಸದ್ಯಕ್ಕೆ ನಾನು ಸುರಕ್ಷಿತವಾಗಿ ಇದ್ದೇನೆ, ನಾವು ಇರುವ ಕಡೆ ದಾಳಿಯಾಗಿಲ್ಲ ಧೈರ್ಯವಾಗಿರಿ ಎಂದು ಮಗಳು ಪೋನ್ನಲ್ಲಿ ನಮಗೆ ಧೈರ್ಯ ಹೇಳಿದಳು. ಸರ್ಕಾರ ಶೀಘ್ರವಾಗಿ ದೂತವಾಸದ ಮೂಲಕ ಉಕ್ರೇನ್ನಲ್ಲಿ ಸಿಲುಕಿರುವ ನಮ್ಮ ಮಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ರಾಮನಗರದ ಮತ್ತೊಬ್ಬ ವಿದ್ಯಾರ್ಥಿನಿ ಸುರಕ್ಷಿತ
ರಾಮನಗರದ ಐಜೂರು ಬಡಾವಣೆಯ ವಿದ್ಯಾರ್ಥಿನಿ ಆಯೇಷಾ ಕಳೆದ ಮೂರು ತಿಂಗಳ ಹಿಂದೆ ಎಂಬಿಬಿಎಸ್ ವ್ಯಾಸಂಗಕ್ಕಾಗಿ ಉಕ್ರೇನ್ಗೆ ತೆರೆಳಿದ್ದಳು. ಸದ್ಯ ಉಕ್ರೇನ್ನ ಭಾರತೀಯ ರಾಯಭಾರ ಕಚೇರಿಯಲ್ಲಿ ಸುರಕ್ಷಿತವಾಗಿದ್ದು, ವಿದ್ಯಾರ್ಥಿನಿ ಆಯೇಷಾ ತನ್ನ ಪೋಷಕರೊಂದಿಗೆ ಫೋನ್ ಮೂಲಕ ಮಾತನಾಡಿ ತಾನು ಸುರಕ್ಷಿತರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸರ್ಕಾರದ ಮಾಹಿತಿಗಿಂತ ನನ್ನ ಮಾಹಿತಿ ಸ್ಪೀಡಾಗಿದೆ; ಎಚ್ಡಿಕೆ
ಉಕ್ರೇನ್ನಲ್ಲಿ ರಾಜ್ಯದ ಹಲವಾರು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಚನ್ನಪಟ್ಟಣದ ಹನಿಯೂರು ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಕ್ರೇನ್ನಲ್ಲಿ ಸಿಲುಕಿರುವ ತಿಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ ನಿವೇದಿತಾ ಜೊತೆ ಫೋನ್ನಲ್ಲಿ ಮಾತನಾಡಿದ್ದೇನೆ. ವಾಪಸ್ಸು ಬರಲು ಆಗುತ್ತಿಲ್ಲ, ಎಲ್ಲಾ ಏರ್ಪೋರ್ಟ್ಗಳು ಬಂದ್ ಆಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎಂದರು.
ನಿವೇದಿತಾ ಸೇರಿದಂತೆ ರಾಜ್ಯದ ಹಲವು ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಸಂದೇಶ ರವಾನಿಸಿದ್ದೇನೆ. ರಾಜ್ಯದ ತುಂಬಾ ಜನ ವಿದ್ಯಾರ್ಥಿಗಳು, ವಿದ್ಯಾಭ್ಯಾಸಕ್ಕೆ ಹೋದವರು ಸಂಕಷ್ಟದಲ್ಲಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಕಡಿಮೆ ಇದೆ. ಸರ್ಕಾರದ ಮಾಹಿತಿಗಿಂತಲೂ, ನನ್ನ ಮಾಹಿತಿ ಸ್ಪೀಡಾಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Recommended Video