ರಾಮನಗರಕ್ಕೆ ಮತ್ತೆ ಜಲ ಕಂಟಕದ ಭೀತಿ, ಹೆದ್ದಾರಿ ಮಾರ್ಗ ಬದಲಿಸಲು ಪೊಲೀಸರ ಚಿಂತನೆ
ರಾಮನಗರ, ಸೆಪ್ಟೆಂಬರ್ 04: ಕಳೆದ ಹಲವು ದಶಕಗಳ ನಂತರ ರಾಮನಗರ ಜಿಲ್ಲೆಯಲ್ಲಿ ವರುಣ ಆರ್ಭಸಿದ್ದು, ಅಲ್ಲಿನ ಜನರು ಕಂಗಾಲಾಗಿದ್ದಾರೆ. ಕಳೆದ ವಾರ ಸುರಿದ ಭಾರಿ ಮಳೆಗೆ ರೇಷ್ಮೆನಾಡು ರಾಮನಗರ ಹಾಗೂ ಬೊಂಬೆನಾಡು ಚನ್ನಪಟ್ಟಣದಲ್ಲಿ ಅವಾಂತರವೇ ಸೃಷ್ಟಿ ಆಗಿದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಮಳೆ ನೀರಿನಿಂದ ಕೆರೆಯಂತಾಗಿ ಸಾರ್ವಜನಿಕರು, ವಾಹನ ಸವಾರರು ಸಂಕಷ್ಟಕ್ಕೆ ಸಲುಕಿದ್ದಾರೆ.
ಕಳೆದ ಐದು ದಿನಗಳಿಂದ ವರುಣ ಬಿಡುವು ನೀಡಿದ ಹಿನ್ನೆಲೆಯಲ್ಲಿ ಜನರು ಜಲಾಘಾತದಿಂದ ಕೊಂಚ ಚೇತರಿಸಿಕೊಳುತ್ತಿದ್ದರು. ಆದರೆ ಇಂದಿನಿಂದ ಬುಧವಾರದವರೆಗೆ ಮತ್ತೆ ಮಳೆ ಆರ್ಭಟ ಶುರು ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ಕೊಟ್ಟಿರುವುದು ಜನರಲ್ಲಿ ಆತಂಕ ಮನೆ ಮಾಡಿದೆ.
ಪ್ರಯಾಣಿಕರಿಗೆ ಹೆದ್ದಾರಿ ಸಂಚಾರ ದುಸ್ತರ
ಇಂದಿನಿಂದ ಬುಧವಾರದವರೆಗೆ ಭಾರಿ ಮಳೆ ಆಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆಯಿಂದ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಹೆದ್ದಾರಿ ಸಂಚಾರ ದುಸ್ತರ ಆಗಲಿದೆ. ಕಳೆದ ವಾರ ಭಾನುವಾರ ರಾತ್ರಿ ಸುರಿದ ಮಳೆಗೆ ನೂತನವಾಗಿ ನಿರ್ಮಾಣ ಆಗಿದ್ದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಕೆರೆಯಂತಾಗಿತ್ತು. ಇದರಿಂದ ವಾಹನಗಳು ನೀರಿನಲ್ಲಿ ಸಿಲುಕಿದ್ದು, ಪ್ರಯಾಣಿಕರು ಪರದಾಡಿದ್ದರು. ಇಂದಿನಿಂದ ಬೆಂಗಳೂರು-ಮೈಸೂರು ಕಡೆಗೆ ಹೋಗುವ ಪ್ರಯಾಣಿಕರು ಎಚ್ಚರದಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಸೂಚನೆ ನೀಡಿದ್ದಾರೆ. ಬುಧವಾರದವರೆಗೂ ಮತ್ತೆ ವರುಣ ಆರ್ಭಟಿಸಿದರೆ ಕಳೆದ ವಾರ ಆಗಿದ್ದ ಪರಿಸ್ಥಿತಿಯೇ ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರುಕಳಿಸುವ ಸಾಧ್ಯತೆ ಇದೆ ಎಂದು ಎಸ್ಪಿ ಆತಂಕ ವ್ಯಕ್ತಪಡಿಸಿದರು.

ಹೆದ್ದಾರಿ ಮಾರ್ಗ ಬದಲಾವಣೆಗೆ ಪೊಲೀಸರ ಚಿಂತನೆ
ಭಾರತೀಯ ಹವಾಮಾನ ಇಲಾಖೆ ನೀಡಿರುವ ಸೂಚನೆಯಂತೆ ಸತತ ಎರಡು ಗಂಟೆ ಅತಿಯಾಗಿ ಮಳೆ ಸುರಿದರೆ, ಮತ್ತೆ ಹೆದ್ದಾರಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಬದಲಿ ಮಾರ್ಗದ ವ್ಯವಸ್ಥೆ ಮಾಡುವ ಬಗ್ಗೆ ರಾಮನಗರ ಜಿಲ್ಲಾ ಪೊಲೀಸರು ಚಿಂತನೆ ನಡೆಸಿದ್ದಾರೆ. ಬುಧವಾರದವರೆಗೂ ಅತೀ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ. ಹಾಗಾಗಿ ಒಂದು ವೇಳೆ ಮಳೆ ಬಂದರೆ ಬದಲಿ ಮಾರ್ಗ ಮಾಡುತ್ತೇವೆ. ಆ ಮಾರ್ಗವಾಗಿಯೇ ವಾಹನ ಸವಾರರು ಸಂಚರಿಸಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಬದಲಿ ಮಾರ್ಗವಾಗಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವವರು ಕನಕಪುರ ಹಾಗೂ ಕುಣಿಗಲ್ ಮಾರ್ಗದ ಮೂಲಕ ಸಂಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ.
ಇನ್ನೂ ಮೈಸೂರಿನ ಕಡೆಯಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಹಾಗೂ ವಾಹನಗಳಿಗೆ ಮೈಸೂರು ಮತ್ತೆ ಮಂಡ್ಯ ಎಸ್ಯಿಂದ ಮಾಹಿತಿ ಪಡೆದು ಮಾರ್ಗವನ್ನು ಸೂಚಿಸಲಾಗುವುದು. ಮೂರು ಜಿಲ್ಲೆಗಳ ಎಸ್ಪಿ ಕಚೇರಿಗಳು ನೀಡುವ ಮಾಹಿತಿ ಮೇರೆಗೆ ಬೆಂಗಳೂರಿನ ಕಡೆಗೆ ತೆರಳುವವರಿಗೆ ಬದಲಿ ಮಾರ್ಗದ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವಾಗ ಬೇಕಾದರೂ ಮಳೆರಾಯ ಆರ್ಭಟ ಶುರು ಮಾಡಬಹುದು. ಹಾಗಾಗಿ ಅಂದಾಜಿಸುವುದು ಕಷ್ಟ ಆಗುತ್ತದೆ. ಹೆಚ್ಚು ಮಳೆ ಆಗುವ ಮುನ್ಸೂಚನೆ ಸಿಕ್ಕ ತಕ್ಷಣ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗುವುದು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.

ಜಲಾಶಯದ ಪರ್ಯಾಯ ಮಾರ್ಗವೂ ಬಂದ್
ಈಗಾಗಲೇ ಚನ್ನಪಟ್ಟಣದಲ್ಲಿ ಭಾರಿ ಮಳೆ ಸುರಿದಿದ್ದು, ಮಳೆ ನೀರು ಕಾಲುವೆಗಳಲ್ಲಿ ನದಿಯಂತೆ ಹರಿದಿದೆ. ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದ್ದು, ಪ್ರಸಿದ್ಧ ಕಣ್ಚ ಜಲಾಶಯದ ಸಂಪರ್ಕ ರಸ್ತೆ ಸ್ಥಗಿತಗೊಂಡಿತ್ತು. ಚನ್ನಪಟ್ಟಣ ತಾಲೂಕಿನಲ್ಲಿ ವಾಡಿಕೆಗಿಂತ ನೂರು ಪಟ್ಟು ಹೆಚ್ಚು ಮಳೆಯಾಗಿ ಎಲ್ಲಾ ಕೆರೆಗಳು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಹಳ್ಳ ಕೊಳ್ಳಗಳಲ್ಲಿ ರಭಸವಾಗಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ಕಣ್ವ ಜಲಾಶಯ ಸಂಪರ್ಕಿಸುವ ಕನ್ನಮಂಗಲ ರಸ್ತೆಯಲ್ಲಿ ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಹತ್ತಾರು ಹಳ್ಳಿಗಳ ಜನರಿಗೆ ತಿರುಗಾಡಲು ರಸ್ತೆಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಕನ್ನಮಂಗಲ ಗ್ರಾಮದ ಸಮೀಪದ ಕಡಿದಾದ ಇಳಿಜಾರಿನ ಬಳಿ ಹಳ್ಳದ ನೀರು ರಭಸವಾಗಿ ಹರಿಯುತ್ತಿದ್ದ ಪರಿಣಾಮ ರಸ್ತೆ ಕೊಚ್ಚಿ ಹೋಗಿದೆ. ಸೇತುವೆ ಕೊಚ್ಚಿ ಹೋದ ಸ್ಥಳದಲ್ಲಿ ಸುಮಾರು 30 ಅಡಿಗಳಷ್ಟು ಆಳದ ಗುಂಡಿಗಳು ಬಿದ್ದಿವೆ. ಈ ಮಾರ್ಗದಲ್ಲಿ ಯಾವುದೇ ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಉಂಟಾಗಿದೆ.
ಮಳೆ ರಾಯನ ಆರ್ಭಟದಿಂದಾಗಿ ಕನ್ನಮಮಂಗಲ ರಸ್ತೆ ಕೊಚ್ಚಿ ಹೋಗಿದ್ದು, ಕಣ್ವ ಜಲಾಶಯಕ್ಕೆ ಸಂಪರ್ಕ ಕಡಿತಗೊಂಡಿತ್ತು. ಚನ್ನಪಟ್ಟಣದಿಂದ ಕಣ್ವಗೆ ಹೋಗಲು ಇದ್ದ ಪ್ರಮುಖ ರಸ್ತೆ ಇದಾಗಿದ್ದು, ಈ ರಸ್ತೆ ಕುಸಿತ ಗೊಂಡಿರುವ ಹಿನ್ನೆಲೆಯಲ್ಲಿ ಕಣ್ವ ಜಲಾಶಯಕ್ಕೆ ತೆರಳಲು ಪರ್ಯಾಯ ಮಾರ್ಗ ಹುಡುಕುವ ಅನಿವಾರ್ಯತೆ ಎದುರಾಗಿದೆ. ಚನ್ನಪಟ್ಟಣದಿಂದ ದಶವಾರ ಗ್ರಾಮದ ಮೂಲಕ ಸಾಗುವ ರಸ್ತೆಗೆ ಅಡ್ಡಲಾಗಿ ಕಣ್ವ ನದಿ ಹರಿಯುತ್ತಿದೆ. ಕ್ರಸ್ಟ್ ಗೇಟ್ಗಳ ಮೂಲಕ ಅಪಾರ ಪ್ರಮಾಣದ ನೀರನ್ನು ಹೊರ ಬಿಡುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲೂ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಜಲಾಶಯಕ್ಕೆ ರಾಮನಗರದ ಮೂಲಕ ಬರುವ ಮಾರ್ಗ ಮಾತ್ರ ಉಳಿದಿದೆ. ಡ್ಯಾಂ ಏರಿಯ ರಸ್ತೆ ಕಿರಿದಾಗಿರುವ ಹಿನ್ನೆಲೆಯಲ್ಲಿ ಕಾರು, ಬಸ್ಗಳು ಸೇರಿದಂತೆ ಯಾವುದೇ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಕಾಲುನಡಿಗೆ ಅಥವಾ ಬೈಕ್ ಮುಖಾಂತರ ಮಾತ್ರ ಸಂಚರಿಸಬಹುದಾಗಿದ್ದು, ಸದ್ಯಕ್ಕೆ ಕಣ್ವ ಜಲಾಶಯ ತಲುಪಲು ಜನತೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.












Click it and Unblock the Notifications