5 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ರಾಮನಗರದ ಪ್ರಥಮ ವೈದ್ಯ ತಿಮ್ಮಯ್ಯ ಇನ್ನಿಲ್ಲ
ರಾಮನಗರ, ಸೆಪ್ಟೆಂಬರ್ 17: ತಾಲೂಕಿನ ಪ್ರಪ್ರಥಮ ಖಾಸಗಿ ವೈದ್ಯರು, ಸಮಾಜ ಸೇವಕರೂ ಆಗಿದ್ದ ಡಾ.ಎಲ್.ಎಲ್.ತಿಮ್ಮಯ್ಯ (92 ) ಸೋಮವಾರ ರಾತ್ರಿ ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಎಂಬಿಬಿಎಸ್ ವೈದ್ಯಕೀಯ ವ್ಯಾಸಂಗ ಪಡೆದ ತಾಲೂಕಿನ ಪ್ರಪ್ರಥಮ ಖಾಸಗಿ ವೈದ್ಯರು ಎಂಬ ಹೆಗ್ಗಳಿಕೆ ಪಡೆದ ಡಾ.ಎಸ್.ಎಲ್.ತಿಮ್ಮಯ್ಯ ರೈತ ಕುಟುಂಬದ ಹಿನ್ನೆಲೆಯಲ್ಲಿ ಬಂದವರು. ಎಂ.ಬಿ.ಬಿ.ಎಸ್ ಮುಗಿಸಿದ ನಂತರ ರಾಮನಗರದಲ್ಲೇ ವೈದ್ಯ ವೃತ್ತಿಯನ್ನು ಆರಂಭಿಸಿದರು. ಸುಮಾರು ಮೂರ್ನಾಲ್ಕು ದಶಕಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ ತಿಮ್ಮಯ್ಯನವರು ರೋಗಿಗಳಿಂದ ಪಡೆಯುತ್ತಿದ್ದದ್ದು 5 ರಿಂದ 10 ರೂ ಮಾತ್ರ. ನಗರ ಪ್ರದೇಶವಷ್ಟೇ ಅಲ್ಲದೇ ಹಳ್ಳಿಹಳ್ಳಿಗಳಿಂದ, ದೂರದೂರುಗಳಿಂದ ಬಂದು ಇವರ ಬಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ತಿಮ್ಮಯ್ಯನವರು ವೈದ್ಯರಾಗಿ, ಸಮಾಜ ಸೇವಕರಾಗಿ ಜನಮಾನಸದಲ್ಲಿ ಸ್ಥಾನ ಪಡೆದಿದ್ದರು. ಕನ್ನಡ ಪರ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಸಾಹಿತ್ಯ ಮತ್ತು ಸಂಸ್ಕ್ರತ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ ಕ್ಲಬ್ ಸೇರಿದಂತೆ ಹತ್ತಾರು ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು. ನಗರ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯ ವಿಚಾರದಲ್ಲೂ ಸಮಾನ ಮನಸ್ಕರ ಜೊತೆ ಹೋರಾಟದ ಹಾದಿ ತುಳಿದಿದ್ದರು. ಎಸ್.ಎಲ್.ತಿಮ್ಮಯ್ಯ ಅವರ ಸೇವೆಯನ್ನು ಗುರುತಿಸಿ ಅಭಿನಂದನಾ ಗ್ರಂಥವನ್ನು ಹೊರತರಲಾಗಿದೆ. ಈ ಗ್ರಂಥದ ದ್ವಿತೀಯ ಆವೃತ್ತಿಯೂ ಬಿಡುಗಡೆಯಾಗಿದೆ.

ಇವರಿಗೆ ಪತ್ನಿ, ನಾಲ್ವರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಅವರ ಅಂತ್ಯಕ್ರಿಯೆ ಇಂದು ಸ್ವಗ್ರಾಮ ಶ್ಯಾನಬೋಗನಹಳ್ಳಿಯಲ್ಲಿ ನೆರೆವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.












Click it and Unblock the Notifications