ರಾಮನಗರ ಚುನಾವಣೆ : ಸಿ.ಎಂ.ಲಿಂಗಪ್ಪ v/s ದೇವೇಗೌಡ ಕುಟುಂಬದ ಹೋರಾಟ
ರಾಮನಗರ, ಅಕ್ಟೋಬರ್ 12 : ರಾಮನಗರ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ರಾಮನಗರ ಚುನಾವಣೆ ಎಂದರೆ ಅದು ಸಿ.ಎಂ.ಲಿಂಗಪ್ಪ ಮತ್ತು ಎಚ್.ಡಿ.ದೇವೇಗೌಡ ಕುಟುಂಬದ ನಡುವಿನ ಹೋರಾಟ. ಆದರೆ, ಈ ಉಪ ಚುನಾವಣೆಯಲ್ಲಿ ಲಿಂಗಪ್ಪ ಪುತ್ರ ಬಿಜೆಪಿಗೆ ಸೇರಿರುವುದು ವಿಶೇಷ.
ನವೆಂಬರ್ 3ರಂದು ನಡೆಯಲಿರುವ ರಾಮನಗರ ಉಪ ಚುನಾವಣೆಗೆ ಅನಿತಾ ಕುಮಾರಸ್ವಾಮಿ ಅವರು ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ. ಆದರೆ, ಲಿಂಗಪ್ಪ, ದೇವೇಗೌಡ ಕುಟುಂಬದ ನಡುವಿನ ಹೋರಾಟ ನಿಂತಿಲ್ಲ. ಲಿಂಗಪ್ಪ ಪುತ್ರ ಅನಿತಾ ಕುಮಾರಸ್ವಾಮಿ ಅವರ ಎದುರಾಳಿ.
ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪುತ್ರ ಎಲ್.ಚಂದ್ರಶೇಖರ್ ಬಿಜೆಪಿ ಸೇರಿದ್ದು ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಪಕ್ಷಗಳು ಬೇರೆ-ಬೇರೆಯಾದರೂ ಕುಟುಂಬದ ನಡುವಿನ ಹೋರಾಟ ಮುಂದುವರೆದಿದೆ.
1985 ರಿಂದ 2018ರ ತನಕ ದೇವೇಗೌಡ, ಸಿ.ಎಂ.ಲಿಂಗಪ್ಪ ಕುಟುಂಬದವರು ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ರಾಮನಗರ ಕ್ಷೇತ್ರದ ಚುನಾವಣೆ ಎಂದರೆ ಈ ಎರಡೂ ಕುಟುಂಬಗಳ ನಡುವಿನ ಹೋರಾಟವಾಗಿದೆ...

ಸಿ.ಎಂ.ಲಿಂಗಪ್ಪ ಹಳಬರು
ರಾಮನಗರದಲ್ಲಿ ಈಗ ದೇವೇಗೌಡ ಕುಟುಂಬದ ಪ್ರಭಾವವಿದೆ. ಆದರೆ, ಸಿ.ಎಂ.ಲಿಂಗಪ್ಪ ಕ್ಷೇತ್ರಕ್ಕೆ ಹಳಬರು. 1985ರ ಚುನಾವಣೆಯಲ್ಲಿ 2 ಸಾವಿರ ಮತಗಳ ಅಂತರದಲ್ಲಿ ಲಿಂಗಪ್ಪ ಸೋತಿದ್ದರು. ಜನತಾ ಪಕ್ಷದ ಪುಟ್ಟಸ್ವಾಮಿ ಗೌಡ ಗೆದ್ದಿದ್ದರು.
1989ರ ಚುನಾವಣೆಯಲ್ಲಿ ಲಿಂಗಪ್ಪ ಅವರು 38 ಸಾವಿರ ಮತಗಳ ಅಂತದಲ್ಲಿ ಗೆದ್ದರು. 1994ರಲ್ಲಿ ದೇವೇಗೌಡರು ರಾಮನಗರಕ್ಕೆ ಬಂದರು. 9 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಲಿಂಗಪ್ಪ ಅವರ ಕೋಟೆಗೆ ಲಗ್ಗೆ ಹಾಕಿದರು. ಮುಖ್ಯಮಂತ್ರಿಯೂ ಆದರು.

ಅಂಬರೀಶ್ ಸೋಲಿಸಿದರು
1994ರ ಚುನಾವಣೆಯಲ್ಲಿ ದೇವೇಗೌಡರು ಗೆದ್ದು ಮುಖ್ಯಮಂತ್ರಿಯಾದರು. ಆದರೆ, 1996ರಲ್ಲಿ ಅವರು ಪ್ರಧಾನಿಯಾಗಿದ್ದರಿಂದ ರಾಜೀನಾಮೆ ಕೊಟ್ಟರು.
ಆಗ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ನಿಂದ ಅಂಬರೀಶ್ ಕಣಕ್ಕಿಳಿದಿದ್ದರು. 9 ಸಾವಿರ ಮತದ ಅಂತರದಿಂದ ಲಿಂಗಪ್ಪ ಅವರು ಅಂಬರೀಶ್ ಸೋಲಿಸಿದರು. 1999ರಲ್ಲಿ ಲಿಂಗಪ್ಪ ಅವರು ಮತ್ತೆ ಗೆದ್ದರು.

ಅಪ್ಪನ ಕ್ಷೇತ್ರಕ್ಕೆ ಮಗ
2004ರಲ್ಲಿ ದೇವೇಗೌಡ ಪುತ್ರ ಎಚ್.ಡಿ.ಕುಮಾರಸ್ವಾಮಿ ರಾಮನಗರ ಕ್ಷೇತ್ರಕ್ಕೆ ಬಂದರು. ಇದರೊಂದಿಗೆ ಲಿಂಗಪ್ಪ ಅವರ ಹೋರಾಟ ಮತ್ತೆ ಮುಂದುವರೆಯಿತು. ಕುಮಾರಸ್ವಾಮಿ ಲಿಂಗಪ್ಪ ಅವರನ್ನು 25 ಸಾವಿರ ಮತಗಳ ಅಂತರದಿಂದ ಸೋಲಿಸಿ ಮುಖ್ಯಮಂತ್ರಿಯಾದರು.
2008ರಲ್ಲಿ ಮತ್ತೆ ಕುಮಾರಸ್ವಾಮಿ ಗೆದ್ದರು. 2009ರಲ್ಲಿ ಸಂಸದರಾಗಿದ್ದರಿಂದ ರಾಜೀನಾಮೆ ಕೊಟ್ಟರು. ಉಪ ಚುನಾವಣೆಯಲ್ಲಿ ಜೆಡಿಎಸ್ನ ಕೆ.ರಾಜು ಲಿಂಗಪ್ಪ ಅವರನ್ನು 22 ಸಾವಿರ ಮತಗಳ ಅಂತದಿಂದ ಸೋಲಿಸಿದರು.

ಲಿಂಗಪ್ಪ ಸ್ಪರ್ಧೆ ಮಾಡಲಿಲ್ಲ
2013ರ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ರಾಮನಗರಕ್ಕೆ ಬಂದರು. ಆದರೆ, ಲಿಂಗಪ್ಪ ಅವರು ಚುನಾವಣೆಗೆ ಸ್ಪರ್ಧಿಸಲಿಲ್ಲ. ಕಾಂಗ್ರೆಸ್ನ ಮರಿದೇವರು ಕುಮಾರಸ್ವಾಮಿ ವಿರುದ್ದ ಸೋತರು. 2018ರ ಚುನಾವಣೆಯಲ್ಲಿಯೂ ಕುಮಾರಸ್ವಾಮಿ ಗೆದ್ದರು. ಆದರೆ, ಕಾಂಗ್ರೆಸ್ನಿಂದ ಇಕ್ಬಾಲ್ ಹುಸೇನ್ ಕಣಕ್ಕಿಳಿದಿದ್ದರು.

ಲಿಂಗಪ್ಪ ಪುತ್ರ ಅಭ್ಯರ್ಥಿ
ನವೆಂಬರ್ 3ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ದೇವೇಗೌಡ ಮತ್ತು ಲಿಂಗಪ್ಪ ಕುಟುಂಬದ ಹೋರಾಟ ಮುಂದುವರೆಯಲಿದೆ.
ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪುತ್ರ ಎಲ್.ಚಂದ್ರಶೇಖರ್ ಬಿಜೆಪಿ ಸೇರಿದ್ದು, ಅವರು ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಅನಿತಾ ಕುಮಾರಸ್ವಾಮಿ ಅವರ ಚಂದ್ರಶೇಖರ್ ಅವರ ಎದುರಾಳಿ.












Click it and Unblock the Notifications