ವದಂತಿಗಳಿಗೆ ಕಿವಿಕೊಡದೆ ಕೋವಿಡ್ ಲಸಿಕೆ ಪಡೆಯಿರಿ; ಮುಸ್ಲಿಂ ಸಮುದಾಯಕ್ಕೆ ರಾಮನಗರ ಡಿಸಿ ಕರೆ
ರಾಮನಗರ, ಸೆಪ್ಟೆಂಬರ್ 15: ಕೋವಿಡ್ ಮೂರನೇ ಅಲೆ ಸಮರ್ಥವಾಗಿ ಎದುರಿಸಲು ಸಜ್ಜಾಗಿರುವ ರಾಮನಗರ ಜಿಲ್ಲಾಡಳಿತ, ಮುಸ್ಲಿಂ ಸಮುದಾಯದ ಕೆಲ ಮಂದಿ ವ್ಯಾಕ್ಸಿನ್ ನಿರಾಕರಿಸಿದ ಘಟನೆಗಳ ಹಿನ್ನಲೆಯಲ್ಲಿ, ವಂದಂತಿಗಳಿಗೆ ಕಿವಿಗೊಡಬೇಡಿ ಎಲ್ಲರೂ ಲಸಿಕೆ ಪಡೆಯಿರಿ ಎಂದು ಮುಸ್ಲಿಂ ಸಮುದಾಯಕ್ಕೆ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಕರೆ ನೀಡಿದರು.
"ಕೋವಿಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ ಎಲ್ಲರೂ ಪಡೆಯಬಹುದು ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಕೋವಿಡ್ ಲಸಿಕೆಯಿಂದ ತೊಂದರೆ ಉಂಟಾಗುತ್ತಿದೆ ಎಂಬ ವದಂತಿಗಳಿಗೆ ಕಿವಿಕೊಡಬಾರದು," ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದರು.
ಬುಧವಾರ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಸೀದಿ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ ಮಾತನಾಡಿದರು. "ಕೋವಿಡ್ ಸೋಂಕು ಯಾವಾಗ, ಹೇಗೆ, ಎಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಸೋಂಕು ಹೆಚ್ಚಾದರೆ ಕಠಿಣ ಕ್ರಮಗಳು ಅನಿವಾರ್ಯವಾಗಿ ಕೈಗೊಳ್ಳಬೇಕಾಗುತ್ತದೆ. ಇದರಿಂದ ದುಡಿಮೆಗೆ ತೊಂದರೆಯಾಗುತ್ತದೆ. ಇದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಲಸಿಕೆ ಪಡೆದ ನಂತರವೂ ಕೋವಿಡ್ ಸೋಂಕಿಗೆ ಒಳಗಾದರೂ ಸೋಂಕಿನ ತೀವ್ರತೆ ಕಡಿಮೆಯಿರುತ್ತದೆ," ಎಂದು ಮನವರಿಕೆ ಮಾಡಿದರು.

"ಮಸೀದಿ ಸಮಿತಿಯವರು ತಮ್ಮ ಸಮುದಾಯದವರಿಗೆ ಕೋವಿಡ್ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಮಸೀದಿಯಲ್ಲಿ ನಮಾಜ್ ನಡೆಯುವ ಸಂದರ್ಭದಲ್ಲಿ ಸೆಪ್ಟೆಂಬರ್ 17 ರಂದು ನಡೆಯುವ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ ಲಸಿಕೆ ಪಡೆಯುವಂತೆ ತಿಳಿಸಿ. ಮಸೀದಿಗಳ ಸಮಿತಿಯಿಂದ ಮಾಹಿತಿ ಪಡೆದು ಮಸೀದಿಯ ಹತ್ತಿರ ಲಸಿಕಾ ಕೇಂದ್ರಗಳನ್ನು ತೆರೆಯಿರಿ. ಮಸೀದಿಯಲ್ಲಿ ನಮಾಜ್ ಮುಗಿಸಿದ ನಂತರ ಜನರು ಕೋವಿಡ್ ಲಸಿಕೆ ಪಡೆದುಕೊಳ್ಳಬಹುದು," ಎಂದರು.
"ಕೋವಿಡ್ ಲಸಿಕೆ ಕೇವಲ ನಮ್ಮ ಕುಟುಂಬದವರು ಪಡೆದರೆ ಸಾಲದು. ನಮ್ಮ ಸುತ್ತಮುತ್ತಲು ವಾಸಿಸುವವರು ಪಡೆಯಬೇಕು. ಏಕೆಂದರೆ ನಾವು ದಿನನಿತ್ಯದ ಜೀವನದಲ್ಲಿ ಅವರೊಂದಿಗೂ ಸಹ ಸಂಪರ್ಕದಲ್ಲಿ ಇರುತ್ತೇವೆ," ಎಂದು ಮುಸ್ಲಿಂ ಸಮುದಾಯದ ಮುಖಂಡರಿಗೆ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ತಿಳಿಸಿದರು.
ಲಸಿಕೆ ಪಡೆದವರಲ್ಲಿ ಕೋವಿಡ್ ಅಪಾಯ ಕಡಿಮೆ; ಎಸ್ಪಿ ಎಸ್. ಗಿರೀಶ್
ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಮಾತನಾಡಿ, "ಪೊಲೀಸ್ ಸಿಬ್ಬಂದಿಗಳು ಪ್ರತಿದಿನ ಜನಸಂದಣಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಜಿಲ್ಲೆಯಲ್ಲಿ 1200 ಪೊಲೀಸ್ ಸಿಬ್ಬಂದಿಗಳಿದ್ದು, ಮೊದಲ ಅಲೆಯಲ್ಲಿ ಲಸಿಕೆ ಇರಲಿಲ್ಲ, 150 ಜನರು ಕೋವಿಡ್ ಸೋಂಕಿಗೆ ಒಳಗಾದರು. ಎರಡನೇ ಅಲೆಯಲ್ಲಿ ಲಸಿಕೆ ಪಡೆದವರು ಕೋವಿಡ್ ಸೋಂಕಿಗೆ ಒಳಗಾದವರ ಸಂಖ್ಯೆ ತೀರಾ ಕಡಿಮೆ. ಲಸಿಕೆಗೆ ಇರುವ ರೋಗ ನಿರೋಧಕ ಶಕ್ತಿಯನ್ನು ತಿಳಿದುಕೊಳ್ಳಬೇಕು,"ಎಂದು ಉದಾಹರಣೆ ಸಹಿತ ಮುಸ್ಲಿಂ ಸಮುದಾಯದ ಮುಖಂಡರಿಗೆ ಲಸಿಕೆ ಮಹತ್ವ ತಿಳಿಸಿದರು.

3800 ಗರ್ಭಿಣಿ ಸ್ತ್ರೀಯರಿಗೆ ಲಸಿಕೆ ನೀಡಿದ್ದೇವೆ; ಡಾ.ಪದ್ಮಾ
ಆರ್.ಸಿ.ಎಚ್ ಅಧಿಕಾರಿ ಡಾ. ಪದ್ಮಾ ಮಾತನಾಡಿ, "18 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯಲು ಅರ್ಹರು. ಗರ್ಬಿಣಿ ಹಾಗೂ ಬಾಣಂತಿ ಸ್ತ್ರೀಯರು ಸಹ ಯಾವುದೇ ಆತಂಕ ಪಡದೇ ಕೋವಿಡ್ ಲಸಿಕೆ ಪಡೆದುಕೊಳ್ಳಬಹುದು. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ 3800 ಗರ್ಬಿಣಿಯರಿಗೆ ಲಸಿಕೆ ನೀಡಲಾಗಿದೆ. ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ. ಸಕ್ಕರೆ, ರಕ್ತದ ಒತ್ತಡ, ವಯಸ್ಸಾದವರು ಮೊದಲ ಆದ್ಯತೆ ನೀಡಿ ಲಸಿಕೆ ಪಡೆಯಬೇಕು."
Recommended Video
"ಸೆ.17ರಂದು ಮೊದಲ ಡೋಸ್ ಹಾಗೂ ಅವಧಿ ಪೂರ್ಣಗೊಳಿಸಿ ಎರಡನೇ ಡೋಸ್ಗೆ ಅರ್ಹರಾಗಿರುವವರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗುವುದು," ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ , ರಾಮನಗರ ನಗರಸಭೆ ಆಯುಕ್ತ ನಂದ ಕುಮಾರ್, ವಕ್ಫ್ ಬೋರ್ಡ್ ಅಧಿಕಾರಿ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications