ಹೋರಾಟದ ಸ್ವರೂಪ ಪಡೆಯುತ್ತಿರುವ ಉದ್ದೇಶಿತ ಸಂಸ್ಕೃತ ವಿಶ್ವವಿದ್ಯಾಲಯ ಯೋಜನೆ
ರಾಮನಗರ, ಜನವರಿ 24: ರಾಜ್ಯ ಸರ್ಕಾರವು ರಾಮನಗರ ಜಿಲ್ಲೆಯಲ್ಲಿ 320 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಸಂಸ್ಕೃತ ವಿಶ್ವವಿದ್ಯಾಲಯದ ಯೋಜನೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಯೋಜನೆಯನ್ನು ಕೈಬಿಡುವಂತೆ ಈಗಾಗಲೇ ಹಲವು ಕನ್ನಡಪರ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.
ಕನ್ನಡಪರ ಸಂಘಟನೆಗಳು ಹಾಗೂ ಸರ್ಕಾರದ ನಡುವಿನ ಸಂಘರ್ಷಕ್ಕೆ ಸಂಸ್ಕೃತ ವಿವಿ ನಿರ್ಮಾಣ ಯೋಜನೆ ಗುರಿಯಾಗಿದ್ದು, ಸರ್ಕಾರ ಸಂಸ್ಕೃತ ವಿವಿ ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎನ್ನುವ ಮೂಲಕ ವಿವಾದ ಮತ್ತಷ್ಟು ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
ಕರ್ನಾಟಕ ರಕ್ಷಣಾ ವೇದಿಕೆ ಈಗಾಗಲೇ ಟ್ವಿಟರ್ ಅಭಿಯಾನದ ಮೂಲಕ ತಮ್ಮ ಹೋರಾಟವನ್ನು ಪ್ರಾರಂಭಿಸಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಕ್ಕೆ ವ್ಯಾಪಕ ಬೆಂಬಲ ಕೂಡ ವ್ಯಕ್ತವಾಗುತ್ತಿದೆ. ಅಲ್ಲದೇ ಹಲವು ಸಂಘಟನೆಗಳು ಕರುನಾಡಿನ ಜನರ ತೆರಿಗೆ ಹಣ 320 ಕೋಟಿ ರೂ, ಸುರಿದು ಸಂಸ್ಕೃತ ವಿವಿ ನಿರ್ಮಾಣ ಯಾಕೆ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ನಿರ್ಣಯದಿಂದ ಹಿಂದೆ ಸರಿಯದಂತೆ ಹಿಂದೂಪರ ಸಂಘಟನೆಗಳು ಹಾಗೂ ಕೆಲ ಮಠಾಧೀಶರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ.

100 ಎಕರೆ ಜಾಗದಲ್ಲಿ ತಲೆ ಎತ್ತಲಿದೆ ಸಂಸ್ಕೃತ ವಿಶ್ವವಿದ್ಯಾಲಯ
ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತದ ವಿಶ್ವವಿದ್ಯಾಲಯವನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಗ್ರಾಮದ ಬಳಿಯ ಮರಡಿಗುಡ್ಡೆ ಪ್ರದೇಶದ 100 ಎಕರೆ ಜಾಗದಲ್ಲಿ ಸುಸಜ್ಜಿತ ಸಂಸ್ಕೃತ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಇದೇ ಜ.3ರ ಸೋಮವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು.
ವೇದ, ವಿಜ್ಞಾನ, ಗಣಿತ ಹಾಗೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಸ್ಕೃತ ಭಾಷೆಯ ಕೊಡುಗೆ ಅನನ್ಯವಾದುದಾಗಿದೆ. ಇದರ ಕುರಿತಂತೆ ಜಗತ್ತಿನ ವಿವಿಧ ಮೂಲೆಗಳಿಂದ ಅಧ್ಯಯನ ಮಾಡಲು ಭಾರತಕ್ಕೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಈ ನೆಲದ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ಜೊತೆಗೆ ಆಧುನಿಕ ಶಿಕ್ಷಣ ಪಡೆಯುವಂತಹ ಕೇಂದ್ರಗಳನ್ನು ಇದೇ ವಿಶ್ವವಿದ್ಯಾಲಯದ ಅಡಿಯಲ್ಲಿ ಪ್ರಾರಂಭ ಮಾಡಲಾಗುತ್ತಿದೆ.
ತರ್ಕ, ವಿಮರ್ಶೆ, ಅರ್ಥಶಾಸ್ತ್ರ, ಕಂಪ್ಯೂಟರ್, ಯೋಗ, ಆಯುರ್ವೇದ ವೈದ್ಯ ತರಬೇತಿ, ದೇಶಿ ಗಿಡಮೂಲಿಕೆಗಳ ವನ ಹಾಗೂ ವೇದಗಣಿತ, ಶಿಕ್ಷಕ ತರಬೇತಿ ಕೇಂದ್ರಗಳು, ದೇಶದ ಅತ್ಯಂತ ಬೃಹತ್ ಗ್ರಂಥಾಲಯ ನಿರ್ಮಾಣ ಇಂತಹ ಹತ್ತು ಹಲವು ಯೋಜನೆಗಳನ್ನು ಸಂಸ್ಕೃತ ವಿಶ್ವವಿದ್ಯಾಲಯದ ಯೋಜನೆಯಡಿಯಲ್ಲಿ ಆರಂಭವಾಗಲಿದೆ.

320 ಕೋಟಿ ರೂಪಾಯಿ ವೆಚ್ಚದ ಸಂಸ್ಕ್ರತ ವಿವಿ
ಕಳೆದ ಹತ್ತು ವರ್ಷಗಳ ಹಿಂದೆಯೇ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಜಾಗ ಮಂಜೂರಾಗಿದ್ದರೂ, ಅದನ್ನು ವಿಶ್ವವಿದ್ಯಾಲಯದ ಸುಪರ್ದಿಗೆ ಕೊಡಲು, ಪ್ರಾರಂಭದಿಂದಲೂ ತಾಂತ್ರಿಕ ಕಾರಣಗಳನ್ನು ನೀಡಿ ತಡ ಮಾಡಲಾಯಿತು.
ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಮೂರು ಕಿಮೀ ದೂರದ ಗುಡ್ಡದ ಸುಂದರ ಪರಿಸರದಲ್ಲಿ 320 ಕೋಟಿ ರೂ. ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣವಾಗುತ್ತಿದೆ. ಹಲವಾರು ವರ್ಷಗಳಿಂದ ಸಂಸ್ಕೃತ ವಿದ್ಯಾಭ್ಯಾಸ ನೀಡುತ್ತಿರುವ ಆದಿಚುಂಚನಗಿರಿ ಮತ್ತು ಸಿದ್ದಗಂಗಾ ಮಠವು ಈ ಜಾಗದಿಂದ ಕೇವಲ 50 ಕಿಮೀ ವ್ಯಾಪ್ತಿಯಲ್ಲಿದೆ. ಇಲ್ಲಿನ ಮಕ್ಕಳ ಸಂಸ್ಕೃತ ವಿದ್ಯಾಭ್ಯಾಸಕ್ಕೆ ಈ ವಿಶ್ವವಿದ್ಯಾಲಯವು ಹೆಚ್ಚು ಸಹಕಾರಿಯಾಗಲಿದೆ.
ಸಂಸ್ಕೃತ ವಿವಿ ನಿರ್ಮಾಣದಿಂದ ಅಭಿವೃದ್ಧಿ
ಮಾಗಡಿ ತಾಲ್ಲೂಕಿನಲ್ಲೇ ಹಿಂದುಳಿದ ಹೋಬಳಿಗಳಲ್ಲಿ ಒಂದಾಗಿರುವ ತಿಪ್ಪಸಂದ್ರ ಹೋಬಳಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯಿಂದ ಅಭಿವೃದ್ದಿ ಹೊಂದಲಿದೆ. ಸುಸಜ್ಜಿತ ರಸ್ತೆಗಳು, ಉದ್ಯೋಗವಕಾಶಗಳು, ಶಿಕ್ಷಣ, ವ್ಯಾಪಾರ ಮುಂತಾದ ರೀತಿಯಲ್ಲಿ ತಿಪ್ಪಸಂದ್ರ ದೇಶದ ಗಮನ ಸೆಳೆಯಲಿದೆ ಎಂಬುದು ಸ್ಥಳೀಯರ ಆಶಾಭಾವನೆ.
ಸಂಸ್ಕೃತ ವಿಶ್ವವಿದ್ಯಾಲಯದ ಸಂಕೀರ್ಣ ನಿರ್ಮಾಣವಾಗುತ್ತಿರುವ ಪ್ರದೇಶದ ಹಿಂಭಾಗದಲ್ಲೇ ರೈಲ್ವೆ ನಿಲ್ದಾಣವಿದೆ. ಮುಂದೆ ರಾಷ್ಟ್ರೀಯ ಹೆದ್ದಾರಿಯಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸರ್ಕಾರ ವಿಶ್ವವಿದ್ಯಾಲಯಕ್ಕೆ ಸ್ಥಳ ಮಂಜೂರು ಮಾಡಿದೆ. ಸಂಸ್ಕೃತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸರ್ಕಾರ ಮುಂದಾಗಿರುವುದು ಈ ಭಾಗದ ಜನರಲ್ಲಿ ಹೆಚ್ಚು ಸಂತಸ ಮೂಡಿಸಿದೆ. ಇಲ್ಲಿಗೆ ದೇಶದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಬರುತ್ತಾರೆ. ಈ ಪ್ರಾಂತ್ಯದ ಮಕ್ಕಳಿಗೂ ಇದು ಅನುಕೂಲವಾಗಲಿದೆ. ಇನ್ನೊಂದು ವರ್ಷದಲ್ಲಿ ಕಟ್ಟಡಗಳ ಒಂದು ಹಂತದ ಕಾರ್ಯ ಮುಕ್ತಾಯಗೊಂಡು ಸಂಸ್ಕೃತ ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳು ಆರಂಭವಾಗಲಿವೆ ಎನ್ನಲಾಗುತ್ತಿದೆ.












Click it and Unblock the Notifications