ರಾಮನಗರ: 17 ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಬಂಧನ, ಬಿಡುಗಡೆ
ರಾಮನಗರ, ಸೆಪ್ಟೆಂಬರ್ 27: ಎಸ್ಡಿಪಿಐ ಹಾಗೂ ಪಿಎಪ್ಐ ಸಂಘಟನೆ ಪ್ರಮುಖರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ ನಡೆಸಿದ ಬೆನ್ನಲ್ಲೇ ರಾಜ್ಯದ ಪೋಲಿಸರು ರಾಜ್ಯಾದ್ಯಂತ ಎರಡು ಸಂಘಟನೆಯಲ್ಲಿ ಸಕ್ರಿಯ ಸದಸ್ಯರ ಮನೆಗಳ ಮೇಲೆ ಮಂಗಳವಾರ ಬೆಳಗಿನ ಜಾವದಿಂದ ದಾಳಿ ನಡೆಸಿ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಮಹಾನಗರ ಬೆಂಗಳೂರಿಗೆ ಹೊಂದಿಕೊಂಡಿರುವ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲೂ ಮಂಗಳವಾರ ಪಿಎಫ್ಐ ಹಾಗೂ ಎಸ್ಡಿಪಿಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ ಜಿಲ್ಲಾ ಪೋಲಿಸರು 17 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಆಯಾ ತಾಲ್ಲೂಕು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಹಳ್ಳ ಹಿಡಿದ 108 ಆ್ಯಂಬುಲೆನ್ಸ್ ಸೇವೆ; ಜಿವಿಕೆ ನಿರ್ಲಕ್ಷ್ಯ
ರಾಮನಗರ ಜಿಲ್ಲಾದ್ಯಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾರ್ಗದರ್ಶನದಲ್ಲಿ ಆರಕ್ಕೂ ಹೆಚ್ಚು ಪೋಲಿಸ್ ತಂಡಗಳನ್ನ ರಚಿಸಿ ಪಿಎಫ್ಐ ಹಾಗೂ ಎಸ್ಡಿಪಿಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಪೋಲಿಸರ ದಾಳಿ ವೇಳೆ ರಾಮನಗರ ಎಸ್ಡಿಪಿಐ ಜಿಲ್ಲಾಧ್ಯಕ್ಷ ಇಮಾಮ್ ಶರೀಫ್ ಹಾಗೂ ಪಿಎಫ್ಐ ಜಿಲ್ಲಾಧ್ಯಕ್ಷ ಶಕೀಲ್ ಪಾಷಾ ಸೇರಿದಂತೆ ನಾಲ್ವರು ನಾಪತ್ತೆಯಾಗಿದ್ದಾರೆ. ದಾಳಿಯ ಸುಳಿವು ಸಿಕ್ಕದ್ದರಿಂದ ನಾಲ್ವರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು ರಾಮನಗರದಲ್ಲಿ 9, ಚನ್ನಪಟ್ಟಣದಲ್ಲಿ 6 ಮಂದಿ ಹಾಗೂ ಮಾಗಡಿಯಲ್ಲಿ ಇಬ್ಬರು ಎಸ್ಡಿಪಿಐ ಹಾಗೂ ಪಿಎಪ್ಐ ಮುಖಂಡರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದು, ಅವರ ವಿರುದ್ಧ ಸಿಆರ್ಪಿಸಿ ಸೆಕ್ಷನ್ 107ರ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.
ಬಂಧಿತರಿಗೆ ಜಾಮೀನು
ಬಂಧಿತರನ್ನು ತಾಲೂಕು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಬಂಧಿತರ ಬಳಿಯಿದ್ದ ಮೊಬೈಲ್ ಜಪ್ತಿ ಮಾಡಿಕೊಂಡು ಇಂಚಿಂಚು ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದು, ತನಿಖೆ ವೇಳೆ ಬಂಧಿತರ ಸಾಮಾಜಿಕ ಜಾಲತಾಣ ಅಕೌಂಟ್ಗಳು, ಯಾರು ಯಾರ ಜೊತೆ ಸಂಪರ್ಕದಲ್ಲಿದ್ದರು, ಎಸ್ಡಿಪಿಐ, ಪಿಎಫ್ಐ ಸಂಘಟನೆ ಸೇರಿದ್ದು ಯಾವಾಗ, ಏನೆಲ್ಲಾ ಕೆಲಸ ಮಾಡುತ್ತಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೇಗೆಲ್ಲ ಆಕ್ಟಿವ್ ಇದ್ದರು ಎಂಬ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ತಾಲೂಕು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾದ 17 ಮಂದಿ ಪಿಎಫ್ಐ ಹಾಗೂ ಎಸ್ಡಿಪಿಐ ಕಾರ್ಯಕರ್ತರಿಂದ ಮುಚ್ಚಳಿಕೆ ಬರೆಸಿಕೊಂಡು, 25 ಸಾವಿರ ಮೌಲ್ಯದ ಬಾಂಡ್ ಹಾಗೂ ಇಬ್ಬರು ಸಂಬಂಧಿಕರ ಶೂರಿಟಿ ಪಡೆದು ಬಿಡುಗಡೆಗೊಳಿಸಿ ಬಿಡುಗಡೆ ಮಾಡಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸುವ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.
ರಾಮನಗರದ ಐಜೂರು ಪೊಲೀಸ್ ಠಾಣೆ ಮುಂದೆ ಹಾಗೂ ತಾಲ್ಲೂಕು ಕಛೇರಿ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಜಮಾವಣೆಗೊಂಡು ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದ ಪರಿಣಾಮ ಕೆಲಕಾಲ ಹೈಡ್ರಾಮ ಕ್ರಿಯೆಟ್ ಆಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಪೋಲಿಸ್ ಭದ್ರತೆ ಎರ್ಪಡಿಸಿದ್ದ ಹಿನ್ನಲೆಯಲ್ಲಿ ಪರಿಸ್ಥಿತಿ ನಿಬಾಯಿಸುವಲ್ಲಿ ಪೋಲಿಸರು ಯಶಸ್ವಿಯಾದರು