ಚನ್ನಪಟ್ಟಣ ತಹಶೀಲ್ದಾರ್ ವರ್ಗಾವಣೆ ಖಂಡಿಸಿ ಹೋರಾಟಕ್ಕೆ ನಿರ್ಣಯ
ರಾಮನಗರ, ಆಗಸ್ಟ್ 01: ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ದಂಡಾಧಿಕಾರಿಗಳ ವರ್ಗಾವಣೆ ಹೋರಾಟಗಾರರ ಕಣ್ಣು ಕೆಂಪಗಾಗಿಸಿದೆ. ಇದೀಗ ತಹಶೀಲ್ದಾರ್ ವರ್ಗಾವಣೆ ಹೋರಾಟದ ರೂಪ ಪಡೆದಿದ್ದು, ವಿವಿಧ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ಹಮ್ಮಿಕೊಳ್ಳುವ ನಿರ್ಣಯ ಕೈಗೊಂಡಿದ್ದಾರೆ.
ಕಿರಿಯ ವಯಸ್ಸಿನಲ್ಲೇ ಉತ್ತಮ ಹೆಸರು ಗಳಿಸಿರುವ ತಾಲ್ಲೂಕು ದಂಡಾಧಿಕಾರಿ ಸುದರ್ಶನ ಅವರನ್ನು ಸರ್ಕಾರ ಯಾವುದೇ ಕಾರಣವಿಲ್ಲದೇ ಬೇರೆಡೆಗೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಒಗ್ಗೂಡಿ ಸಮಾನ ಮನಸ್ಕರ ಒಕ್ಕೂಟ ರಚಿಸಿಕೊಂಡು ಹೋರಾಟದ ಹಾದಿ ತುಳಿದಿವೆ.
ಆಗಸ್ಟ್ 3ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಚನ್ನಪಟ್ಟಣದ ಗಾಂಧಿಭವನದಲ್ಲಿ ಸಮಾವೇಶಗೊಂಡು ಅಲ್ಲಿಂದ ತಹಶೀಲ್ದಾರ್ ಕಚೇರಿಗೆ ತೆರಳಿ ಕಚೇರಿಗೆ ಬೀಗ ಜಡಿಯಲು ನಿರ್ಣಯ ಕೈಗೊಳ್ಳಲಾಗಿದೆ. ನಂತರ ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಪಟ್ಟಣದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಾಲಯದಲ್ಲಿ ಸಭೆ ಸೇರಿದ್ದ ಹಲವು ಸಂಘಟನೆಗಳ ಪದಾಧಿಕಾರಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಜನಪರ ವೇದಿಕೆ, ಪತ್ರಕರ್ತರು ಹಾಗೂ ಮಹಿಳಾ ಸಂಘಟನೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.