ಚನ್ನಪಟ್ಟಣ; ಖಾಲಿ ನಿವೇಶನದಲ್ಲಿ ನವಜಾತ ಗಂಡು ಮಗು ಪತ್ತೆ
ರಾಮನಗರ, ಅಕ್ಟೋಬರ್ 22: ಆಗತಾನೇ ಜನಿಸಿರುವ ಗಂಡು ಮಗುವನ್ನು ಕರುಳುಬಳ್ಳಿ ಸಮೇತ ಖಾಲಿ ನಿವೇಶನದಲ್ಲಿ ಬಿಸಾಡಿ ಹೋಗಿರುವ ಘಟನೆ ಚನ್ನಪಟ್ಟಣ ನಗರದ ಕೆ.ಎಚ್.ಬಿ ಬಡಾವಣೆಯಲ್ಲಿ ನಡೆದಿದೆ.
ಜಿಟಿ ಜಿಟಿ ಮಳೆ ನಡುವೆ ಖಾಲಿ ನಿವೇಶನವೊಂದರಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲದಿಂದ ಮಗುವಿನ ಶಬ್ದ ಕೇಳಿ ಬಡಾವಣೆಯ ಜನರು ಬಂದು ನೋಡಿದ್ದಾರೆ. ನಂತರ ಮಗುವನ್ನು ರಕ್ಷಿಸಿ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಮಗುವನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅ.21ರ ರಾತ್ರಿ ಸುಮಾರು 8ರ ಸಮಯದಲ್ಲಿ ಹೌಸಿಂಗ್ ಬೋರ್ಡ್ ಬಡಾವಣೆಯ ಡೆಪ್ಯುಟಿ ತಹಶೀಲ್ದಾರ್ ಸೋಮೇಶ್ ಅವರ ಮನೆಯ ಪಕ್ಕದ ಖಾಲಿ ನಿವೇಶನದಲ್ಲಿ ಮಗುವನ್ನು ಎಸೆಯಲಾಗಿದೆ. ಬಡಾವಣೆಯ ಜನರ ಕರ್ತವ್ಯ ಪ್ರಜ್ಞೆಯಿಂದ ಮಗು ಬದುಕುಳಿದಿದೆ. ಕೆಲವೇ ಗಂಟೆಗಳ ಹಿಂದೆ ಜನಿಸಿದ ಹೆತ್ತ ಕೂಸನ್ನು ಕರುಳಬಳ್ಳಿಯ ಸಮೇತ, ಸುರಿಯುತ್ತಿರುವ ಮಳೆಯಲ್ಲೇ ಬಿಟ್ಟು ಹೋಗಿರುವ ಕೃತ್ಯ ಕಂಡು ಬಡಾವಣೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವಜಾತ ಗಂಡು ಶಿಶು ವೈದ್ಯರ ಆರೈಕೆಯಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆಯ ಪೊಲೀಸರು ಪೋಷಕರ ಪತ್ತೆಗೆ ಮುಂದಾಗಿದ್ದಾರೆ.












Click it and Unblock the Notifications