"ತೀರಾ ಅಗತ್ಯ ಬಿದ್ದರೆ 15 ದಿನ ಲಾಕ್ಡೌನ್ ಮಾಡಲಿ''
ರಾಮನಗರ, ಮಾರ್ಚ್ 22: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹೆಚ್ಚಾದ ಹಿನ್ನಲೆಯಲ್ಲಿ ತೀರಾ ಅವಶ್ಯಕತೆ ಇದ್ದರೆ, ಒಂದು ವಾರ ಅಥವಾ 15 ದಿನ ಲಾಕ್ಡೌನ್ ಮಾಡಲಿ ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದರು.
ರಾಮನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ, ಜಿಲ್ಲಾ ಆಸ್ಪತ್ರೆಗೆ ತೆರಳಿ ಕೋವಿಡ್-19 ಲಸಿಕೆ ಪಡೆದುಕೊಂಡು ಕ್ಷೇತ್ರದ ಜನತೆ ಯಾವುದೇ ಅಳುಕಿಲ್ಲದೇ ಕೋವಿಡ್-19 ಲಸಿಕೆ ಪಡೆದು ಕೊರೊನಾ ಮಹಾಮಾರಿಯನ್ನು ತಡೆಗಟ್ಟಬೇಕು ಎಂದು ಜನತೆಗೆ ಕರೆ ನೀಡಿದರು.
ಈಗಾಗಲೇ ರಾಜ್ಯದಲ್ಲಿ ಕೊರೊನಾ 2ನೇ ಅಲೆ ಪ್ರಾರಂಭವಾಗಿದೆ. ನಾನು ಇಂದು ಕೋವಿಶಿಲ್ಡ್ ಲಸಿಕೆ ಪಡೆದುಕೊಂಡಿದ್ದೇನೆ. ಸಾರ್ವಜನಿಕರಿಗೂ ಯಾವುದೇ ಆತಂಕ ಬೇಡ, ಎಲ್ಲರೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿರಿ. ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ನಾವು ಸೇಫ್ ಆಗಿ ಕೊರೊನಾ ರೋಗದಿಂದ ಮುಕ್ತಿ ಹೊಂದುವಂತೆ ಶಾಸಕಿ ಅನಿತಾ ಕುಮಾರಸ್ವಾಮಿ ಕರೆ ನೀಡಿದರು.

ನಾನು ಲಸಿಕೆ ಪಡೆದಿದ್ದೇನೆ, ಯಾವುದೇ ಆತಂಕ ಇಲ್ಲ, ಇತರೆ ಇಂಜೆಕ್ಷನ್ನಂತೆ ಕೊರೊನಾ ಲಸಿಕೆಯು ಸಣ್ಣ ಇಂಜೆಕ್ಷನ್. ಹೆಚ್ಚೆಂದರೆ ಸಣ್ಣ ಪ್ರಮಾಣದಲ್ಲಿ ಜ್ವರ ಬರುತ್ತದೆ ಅಷ್ಟೇ. ಕೊರೊನಾ ಎರಡನೇ ಅಲೆ ಜೋರಾಗಿದ್ದು, ಜನರೇ ಮುಂದೆ ಬಂದು ಲಸಿಕೆ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರದಲ್ಲಿ ಹೇಳಿದರು.












Click it and Unblock the Notifications