ಕಾರ್ಮಿಕರ ಸುರಕ್ಷತೆಗೆ ಒತ್ತು ನೀಡಿವಂತೆ ಕರೆ ನೀಡಿದ ಸಚಿವ ಜಗದೀಶ್ ಶೆಟ್ಟರ್
ರಾಮನಗರ, ಆಗಸ್ಟ್ 09: ಕೊರೊನಾ ಸೋಂಕಿಗೆ ತುತ್ತಾಗದಂತೆ ಕಾರ್ಮಿಕರಿಗೆ ಹೆಚ್ಚಿನ ರಕ್ಷಣೆ ನೀಡುವ ಮೂಲಕ ಅವರುಗಳ ಹಿತ ಕಾಯುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ಕೈಗಾರಿಕೆಗಳಿಗೆ ಕರೆ ನೀಡಿದರು.
ಶನಿವಾರ ಬಿಡದಿಯ ಕೋಕೊ ಕೋಲಾ ಫ್ಯಾಕ್ಟರಿಗೆ ಭೇಟಿ ನೀಡಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ್ ಅವರು, ಕೊರೊನಾ ಸಾಂಕ್ರಾಮಿಕ ರೋಗವು ಎಲ್ಲಾ ಕ್ಷೇತ್ರ ಹಾಗೂ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ದೇಶ ಹಾಗೂ ರಾಜ್ಯದ ಆರ್ಥಿಕತೆ ಮುಂದೆ ಸಾಗಲು ಕೈಗಾರಿಕಾ ಕ್ಷೇತ್ರ ಕಾರ್ಯಾರಂಭ ಮಾಡುವುದು ಅನಿವಾರ್ಯ, ಇದನ್ನು ಮನಗಂಡ ರಾಜ್ಯ ಹಾಗೂ ಕೇಂದ್ರ ಸರಕಾರ ಲಾಕ್ ಡೌನ್ ಸಡಲಿಕೆ ಮಾಡಿದೆ ಎಂದರು.
ಜಗತ್ತು ಇನ್ನು ಕೊರೊನಾ ಸೋಂಕಿನ ಬಾಧೆಯಿಂದ ಮುಕ್ತವಾಗಿಲ್ಲ.ಕೊರೊನಾ ಸೋಂಕಿನ ಜೊತೆಯಲ್ಲಿಯೇ ಬದುಕಲು ನಾವು ಕಲಿತುಕೊಳ್ಳಬೇಕಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆಯನ್ನು ನಮ್ಮ ಬದುಕಿನ ಕರ್ತವ್ಯಗಳಾಗಿ ಸ್ವೀಕರಿಸಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಕಾರ್ಮಿಕರಿಗೆ ತಿಳಿ ಹೇಳಿದರು.

ಕಾರ್ಮಿಕರುಗಳಿಗೆ ಅಗತ್ಯವಿರುವ ಸುರಕ್ಷತಾ ಸೌಲಭ್ಯಗಳನ್ನು ಕಾರ್ಖಾನೆ ಆಡಳಿತ ಮಂಡಳಿ ಒದಗಿಸುವ ಮೂಲಕ ಕಾರ್ಖಾನೆಯ ಕೆಲಸಗಳು ಮುಂದುವರೆಸಿಕೊಂಡು ಹೋಗಬೇಕು ಎಂದು ಕಂಪನಿಗಳಿಗೆ ಸಚಿವರು ತಾಕೀತು ಮಾಡಿದರು.

ಸಚಿವರು ಕೋಕೊ ಕೋಲಾ ಫ್ಯಾಕ್ಟರಿಯಲ್ಲಿ ಅಳವಡಿಸಿಕೊಂಡಿರುವ ಸುರಕ್ಷತೆಯ ಕ್ರಮಗಳನ್ನು ಪರಿಶೀಲಿಸಿದರು. ಇದೇ ವೇಳೆ ಕೋಕೊ ಕೋಲಾ ಕಂಪನಿಯ ಆವರಣದಲ್ಲಿ ಸಚಿವರ ಭೇಟಿಯ ನೆನಪಿಗೆ ಗಿಡವನ್ನು ನೆಟ್ಟರು.











Click it and Unblock the Notifications