ಕುಮಾರಸ್ವಾಮಿಗೆ ಮಂಡ್ಯ ರೈತರಿಂದ ಜೋಡಿ ಎತ್ತುಗಳ ಕಾಣಿಕೆ
ರಾಮನಗರ, ಮಾರ್ಚ್ 12: ಕೇವಲ 14 ತಿಂಗಳ ತನ್ನ ಅಧಿಕಾರವಧಿಯಲ್ಲಿ ರೈತರ ಸಾಲ ಮನ್ನಾ ಮಾಡುವ ಮೂಲಕ ಸಂಕಷ್ಟದಲ್ಲಿದ್ದ ಅನ್ನದಾತನ ನೆರವಿಗೆ ಧಾವಿಸಿದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಮಂಡ್ಯ ಜಿಲ್ಲೆಯ ರೈತರು ಜೋಡಿ ಎತ್ತುಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.
ರೈತರು ಹಾಗೂ ಗ್ರಾಮೀಣ ಜನರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಹರಕೆ ಹೊತ್ತ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೋಣಸಾಲೆ ಗ್ರಾಮಸ್ಥರು ಹಳ್ಳಿಕಾರ್ ತಳಿಯ ಜೋಡಿ ಎತ್ತುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ಶನಿವಾರ ಬಿಡದಿ ಬಳಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಕೋಣಸಾಲೆ ರೈತರು ಜೋಡಿ ಎತ್ತುಗಳನ್ನು ಕುಮಾರಸ್ವಾಮಿಗೆ ನೀಡಿದರು. ರೈತರು ನೀಡಿದ ಜೋಡಿ ಎತ್ತುಗಳಿಗೆ ಪೂಜೆ ಸಲ್ಲಿಸಿ, ಬಾಳೆಹಣ್ಣು ತಿನ್ನಸಿ ಮೈ ಸವರಿ ಕುಮಾರಸ್ವಾಮಿ ಬರಮಾಡಿಕೊಂಡರು.
ಕಳೆದ ರಾತ್ರಿ ಮದ್ದೂರಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಶ್ರೀ ಮಲೆಮಹದೇಶ್ವರಸ್ವಾಮಿಯ 37ನೇ ವಾರ್ಷಿಕ ಪೂಜಾ ಕಾರ್ಯಕ್ರಮ ಹಾಗೂ ಜಾನುವಾರುಗಳ ಜಾತ್ರೆಯನ್ನು ಏರ್ಪಡಿಸಲಾಗಿತ್ತು. ಇನ್ನು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿ ವಿಶೇಷ ಪೂಜಾ ಕೈಂಕರ್ಯ ನಡೆಸಿ ಪ್ರಾರ್ಥನೆ ಸಲ್ಲಿಸಿದ್ದರು.

ಎತ್ತಿನಗಾಡಿಯಲ್ಲಿ ಮೆರವಣಿಗೆ
ಮದ್ದೂರಿನ ಚೊಟ್ಟನಹಳ್ಳಿ ಗ್ರಾಮಕ್ಕೆ ಎಚ್. ಡಿ. ಕುಮಾರಸ್ವಾಮಿ ಭೇಟಿ ನೀಡಿದಾಗಲೇ ಗ್ರಾಮಸ್ಥರು ಅಭಿಮಾನದಿಂದ ಕುಮಾರಸ್ವಾಮಿಯನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಅಭಿಮಾನ ಮೆರೆದಿದ್ದರು. ಈ ಸಂದರ್ಭದಲ್ಲೇ ತಮ್ಮ ಕೋರಿಕೆ ಹೇಳಿದ್ದ ರೈತರು ಇಂದು ಜೋಡಿ ಎತ್ತುಗಳನ್ನು ತೋಟದ ಮನೆಯಲ್ಲಿ ಕುಮಾರಸ್ವಾಮಿಗೆ ಹಸ್ತಾಂತರಿಸಿದರು.

ಹಳ್ಳಿಕಾರ್ ತಳಿಯ ಎತ್ತುಗಳು
ರೈತರ ಸಾಲಮನ್ನಾ ಸೇರಿದಂತೆ ನಾಡಿನ ರೈತರಿಗೆ ಹಲವು ಸವಲತ್ತು ಒದಗಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಮಲೆಮಹದೇಶ್ವರ ಸ್ವಾಮಿಯಲ್ಲಿ ಹರಕೆ ಹೊತ್ತಿರುವ ಗ್ರಾಮಸ್ಥರು ಹಳ್ಳಿಕಾರ್ ತಳಿಯ ಜೋಡೆತ್ತುಗಳನ್ನು ಕುಮಾರಸ್ವಾಮಿಗೆ ಉಡುಗೊರೆಯಾಗಿ ನೀಡಿದ್ದಾರೆ. ಕುಮಾರಸ್ವಾಮಿಯ ಬಿಡದಿ ತೋಟದ ಮನೆಯಲ್ಲಿ ಹಲವಾರು ಜಾನುವಾರುಗಳಿದ್ದು, ಈಗ ಹಳ್ಳಿಕಾರ್ ಎತ್ತುಗಳು ಅಲ್ಲಿಗೆ ಸೇರಿವೆ.

ರೈತರು ಹೇಳುವುದೇನು?
ರೈತ ಮಧು ಮಾತನಾಡಿ, "ಕೋಣಸಾಲೆ ಗ್ರಾಮಸ್ಥರಿಗೆ ಕುಮಾರಸ್ವಾಮಿ ಕಂಡರೆ ಇನ್ನಿಲ್ಲದ ಪ್ರೀತಿ. ಇನ್ನು ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ನಮ್ಮೂರಿಗೆ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿದ್ದರು. ಇನ್ನು ಇಂತಹ ಮಾತೃ ಹೃದಯಿ ರೈತಪರ ಚಿಂತನೆಯುಳ್ಳ ಅವರು ಮತ್ತೊಮ್ಮೆ ಸಿಎಂ ಆಗಬೇಕೆಂದು ಶ್ರೀ ಮಲೈಮಹದೇಶ್ವರಸ್ವಾಮಿಯ ಸನ್ನಿಧಿಯಲ್ಲಿ ನಡೆದ ಜಾನುವಾರು ಜಾತ್ರೆಯಲ್ಲಿ ಹರಕೆ ಹೊತ್ತು, ಜೋಡೆತ್ತುಗಳನ್ನು ಉಡುಗೊರೆಯಾಗಿ ನೀಡಿದ್ದೇವೆ" ಎಂದರು.

ಜನ ಮೆಚ್ಚುವ ಆಡಳಿತ ನೀಡಿದ್ದಾರೆ
ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಶಿವರಾಮು, "ಎರಡು ಬಾರಿಯೂ ತಮಗೆ ದೊರೆತ ಅಲ್ಪಾವಧಿಯಲ್ಲಿ ರೈತರು, ಬಡವರು, ಕಾರ್ಮಿಕರು, ಮಹಿಳೆಯರ ಕಲ್ಯಾಣಕ್ಕಾಗಿ ಹಗಲಿರುಳು ದುಡಿದ ಎಚ್. ಡಿ. ಕುಮಾರಸ್ವಾಮಿ ನಾಡಿನ ಜನ ಮೆಚ್ಚುವಂತಹ ಆಡಳಿತವನ್ನು ನೀಡಿದ್ದರು. ಹೀಗಾಗಿ ಅವರು ಪೂರ್ಣಾವಧಿಗೆ ಸಿಎಂ ಆಗಬೇಕೆಂಬುದು ನಾಡಿನ ಸಮಸ್ತ ಜನರು ಸೇರಿದಂತೆ ಕೋಣಸಾಲೆ ಗ್ರಾಮಸ್ಥರ ಅಭಿಲಾಷೆಯಾಗಿದ್ದು, ಹರಕೆ ಹೊತ್ತ ಜೊಡೆತ್ತುಗಳನ್ನ ಅವರಿಗೆ ನೀಡಿದ್ದೇವೆ" ಎಂದರು.












Click it and Unblock the Notifications