ರಾಮನಗರ: ಶ್ರೀ ಶಂಕರ್ ಟೂರ್ ಏಜೆನ್ಸಿ ಪರವಾನಗಿ ರದ್ದುಪಡಿಸಲು ಒತ್ತಾಯ
ರಾಮನಗರ, ಜುಲೈ.09: ಬೊಂಬೆನಗರಿ ಚನ್ನಪಟ್ಟಣದಿಂದ ಮೂವರು ಯಾತ್ರಿಕರು ದೂರದ ಕೈಲಾಸ ಪರ್ವತ ಮಾನಸ ಸರೋವರಕ್ಕೆ ತೆರಳಿದ್ದರು. ಕಳೆದ 15 ದಿನಗಳಿಂದ ಸಾಕಷ್ಟು ಸ್ಥಳಗಳಿಗೆ ಭೇಟಿ ಕೂಡ ನೀಡಿದ್ದರು.
ಆದರೆ ಕೊನೆ ಕ್ಷಣದಲ್ಲಿ ಆ ಯಾತ್ರಿಗಳಿಗೆ ಪ್ರಕೃತಿ ವಿಕೋಪ ಎದುರಾಗಿತ್ತು. ಹೀಗೆ ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿ ವಾಪಸಾಗುವ ವೇಳೆ ಭಾರಿ ಮಳೆ ಹಿನ್ನೆಲೆಯಲ್ಲಿ, ನೇಪಾಳದ ಸಿಮಿಕೋಟ್ ನ ಪರ್ವತ ಪ್ರದೇಶದಲ್ಲಿ ತ್ರಿಶಂಕು ಸ್ಥಿತಿಗೆ ಸಿಲುಕಿದರು.
ಕಡೆಗೂ ಯಾತ್ರಿಗಳು ಸುರಕ್ಷಿತವಾಗಿ ತವರಿಗೆ ಮರಳಿರು. ಮಾನಸ ಸರೋವರ ಯಾತ್ರೆಗೆಂದು ಕರ್ನಾಟಕದಿಂದ ತೆರಳಿದ್ದ ಪ್ರವಾಸಿಗರು ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಕಳೆದ ಜೂನ್ 21 ರಂದು ಮಾನಸ ಸರೋವರ ಯಾತ್ರೆಗೆ ರಾಮನಗರ, ಮಂಡ್ಯ, ಮೈಸೂರು, ದಾವಣಗೆರೆಯ ಸೇರಿದಂತೆ ವಿವಿಧೆಡೆಯಿಂದ 290 ಕ್ಕೂ ಹೆಚ್ಚು ಪ್ರವಾಸಿಗರು ತೆರಳಿದ್ದರು.

ಆದರೆ ಕಡೆ ಕ್ಷಣದಲ್ಲಿ ಅಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಅವರೆಲ್ಲರೂ ಸಾವಿನ ದವಡೆಗೆ ಸಿಲುಕಿದ್ದರು. ಇನ್ನು ನೇಪಾಳದ ಮೂಲಕ ಹೋಗುವ ನೇಪಾಳಗಂಜ್ ಸಿಮಿಕೋಟ್ ಹಿಲ್ಸಾ ಮಾರ್ಗದ ಮಾನಸ ಸರೋವರ ಯಾತ್ರೆಯ ಮಾರ್ಗವು ದುರ್ಗಮ ಹಾದಿಯಿಂದ ಕೂಡಿದ್ದು, ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು.
ಇತ್ತ ಈ ಯಾತ್ರಾರ್ಥಿಗಳ ಕುಟುಂಬವು ಸಹ ಇವರ ಸಂಪರ್ಕ ಸಾಧ್ಯವಾಗದೇ ಆತಂಕಕ್ಕೆ ಒಳಗಾಗಿತ್ತು. ಇನ್ನು ಈ ಸಿಮಿಕೋಟ್ ಮತ್ತು ಹಿಲ್ಸಾ ಪರ್ವತ ಪ್ರದೇಶಕ್ಕೆ ಲಘು ವಿಮಾನ ಇಲ್ಲವೇ ಹೆಲಿಕಾಪ್ಟರ್ ಮೂಲಕ ಮಾತ್ರ ಸಂಪರ್ಕ ಸಾಧ್ಯ ಎಂದು ತಿಳಿಸಿದ ಯಾತ್ರಿಕರು ತಮ್ಮ ಸಂಕಷ್ಟಕ್ಕೆ ನೆರವಾದವರನ್ನು ಸ್ಮರಿಸಿದರು.
ಅಂದಹಾಗೆ ಮಾನಸ ಸರೋವರ ಮತ್ತು ಕೈಲಾಸ ಪರ್ವತಗಳೆರಡು ಒಂದಕ್ಕೊಂದು ಹೊಂದಿಕೊಂಡಂತೆ ಇವೆ. ಸ್ಪಟಿಕದಷ್ಟೆ ಶುಭ್ರವಾಗಿರುವ ಮಾನಸ ಸರೋವರ ಹಿಂದೂಗಳ ಪಾಲಿಗೆ ಜೀವನದಲ್ಲಿ ಒಮ್ಮೆಯಾದ್ರು ಮಿಂದು ಪಾವನರಾಗಬೇಕೆಂದು ಬಯಸುವ ಸ್ಥಳ.
ಇಂತಹ ನಯನ ಮನೋಹರ ಪುಣ್ಯ ಕ್ಷೇತ್ರಕ್ಕೆ ಚನ್ನಪಟ್ಟಣ ತಾಲೂಕಿನ ರಾಂಪುರ ಮಲ್ಲೇಶ್, ನಾಗವಾರ ರಂಗಸ್ವಾಮಿ, ಕೋಟೆ ಶಿವರಾಮ್ ಕರ್ನಾಟಕದ ಇನ್ನಿತರ ಯಾತ್ರಿಕರ ಜೊತೆ ತೆರಳಿದ್ದರು. ಇನ್ನು ಯಾತ್ರೆಯಿಂದ ಮರಳುವ ವೇಳೆ ಭಾರಿ ಮಳೆ ಹಾಗೂ ಮಂಜು ಕವಿದ ವಾತಾವರಣದ ನಡುವೆ ತ್ರಿಶಂಕು ಸ್ಥಿತಿಗೆ ತಲುಪಿದ್ದರು.
ಕಡೆಗೂ ಸುರುಕ್ಷಿತವಾಗಿ ಮರಳಿದ ಯಾತ್ರಿಕ ಮಲ್ಲೇಶ್ "ಅತಿಯಾದ ಮಳೆ, ಚಳಿಯಿಂದಾಗಿ ಮತ್ತೆ ನಾವು ನಮ್ಮ ತವರಿಗೆ ಮರಳುತ್ತೇವೆ" ಎಂಬ ನಂಬಿಕೆಯ ಕೂಡ ಇರಲಿಲ್ಲ ಅಂತಾರೆ.
ಅಲ್ಲದೇ ಪರಿಕ್ರಮ ಮಾಡಲು ಕುದುರೆ ಏರಲು ಹೋಗಿ ಕಾಲು ಪೆಟ್ಟು ಮಾಡಿಕೊಂಡಿರುವ ಮಲ್ಲೇಶ್ ಯಾತ್ರೆ ಆಯೋಜಿಸಿದ್ದ ಶಂಕರ್ ಟ್ರಾವೆಲಿಂಗ್ ಏಜೆನ್ಸಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. "ಈ ಏಜೆನ್ಸಿಯವರು ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ನಮ್ಮನ್ನು ರಕ್ಷಿಸಿದ ರಾಜ್ಯದ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿಯವರಿಗೆ ಹಾಗೂ ಕೇಂದ್ರ ಸರ್ಕಾರಕ್ಕೂ ಧನ್ಯವಾದಗಳು.
ಶ್ರೀ ಶಂಕರ ಟೂರ್ ನವರು ಪ್ರತಿ ಸದಸ್ಯರಿಂದ ಎರಡು ಲಕ್ಷಕ್ಕೂ ಅಧಿಕ ಹಣ ಪಡೆದು ನಮ್ಮನ್ನು ವಂಚಿಸಿದ್ದಾರೆ. ನಮಗೆ ಕನಿಷ್ಟ ಊಟದ ವ್ಯವಸ್ಥೆ ಮತ್ತು ವೈದ್ಯಕೀಯ ಸೌಲಭ್ಯ ನೀಡಿಲ್ಲ.
ಪ್ರವಾಸದ ಹೆಸರಿನಲ್ಲಿ ಅಮಾಯಕರನ್ನು ನಂಬಿಸಿ ಹಣ ಲೂಟಿ ಮಾಡುವ ಶಂಕರ್ ಟೂರ್ ಪರವಾನಿಗೆಯನ್ನು ರದ್ದುಪಡಿಸಿ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ. ಇನ್ನು ಮುಂದೆ ತೆರಳುವ ಯಾತ್ರಿಕರಿಗೆ ಇವರಿಂದ ಅಗುವ ತೊಂದರೆ ತಪ್ಪಿಸಬೇಕೆಂದು" ಸರ್ಕಾರವನ್ನು ಒತ್ತಾಯಿಸಿದರು.
ಒಟ್ಟಾರೆ ಭಾರಿ ಮಳೆ ಹಾಗೂ ಮಂಜಿನ ಹೊಡೆತಕ್ಕೆ ಸಿಲುಕಿ ಮಾನಸ ಸರೋವರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಚನ್ನಪಟ್ಟಣದ ಈ ಯಾತ್ರಿಕರು ತಮ್ಮ ಕಹಿ ಅನುಭವ ಹಂಚಿಕೊಂಡದ್ದಲ್ಲದೇ ಶಂಕರ್ ಟ್ರಾವೆಲಿಂಗ್ ಏಜೆನ್ಸಿ ವಿರುದ್ಧ ಕಿಡಿಕಾರಿದ್ದಾರೆ. ಈ ಯಾತ್ರಿಕರ ಕುಟುಂಬಸ್ಥರು ತಮ್ಮವರು ಸುರಕ್ಷಿತವಾಗಿ ಮರಳಿದ್ದು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications