ರೈತನಿಂದ ಲಂಚಕ್ಕೆ ಬೇಡಿಕೆ: ಮಾಗಡಿ ತಹಶೀಲ್ದಾರ್ ಎಸಿಬಿ ಬಲೆಗೆ
ರಾಮನಗರ, ಮಾರ್ಚ್ 11: ರೈತನಿಂದ ಲಂಚದ ಬೇಡಿಕೆ ಇಟ್ಟಿದ್ದ ಮಾಗಡಿ ತಹಶೀಲ್ದಾರ್ ರಮೇಶ್ ಹಾಗೂ ಗುಮಾಸ್ತ ಪ್ರವೀಣ್ ಮಂಗಳವಾರ ಮಧ್ಯಾಹ್ನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಮಾಗಡಿ ತಾಲೂಕಿನ ದಬ್ಬಗುಳಿ ರೈತ ಡಿ.ರಾಮಯ್ಯ ಅವರು ತಮ್ಮ ಸರ್ವೆ ನಂ. 35/1 ರ ಜಮೀನಿನ ಪಹಣಿ ಹೆಸರು ತಿದ್ದುಪಡಿಗಾಗಿ ಹಾಗೂ ಸರ್ವೆ ನಂ. 23 ರ ಜಮೀನಿನ ಪೋಡಿ ಮಾಡಿಸಲು ಸುಮಾರು ವರ್ಷಗಳ ಹಿಂದೆಯೇ ತಹಶೀಲ್ದಾರ್ ಕಚೇರಿಗೆ ದಾಖಲೆಗಳನ್ನು ನೀಡಿದ್ದು, ಇದಕ್ಕಾಗಿ ತಾಲೂಕು ಕಚೇರಿಗೆ ಅಲೆಯುತ್ತಿದ್ದರು. ರಾಮನಗರ ಉಪವಿಭಾಗಾಧಿಕಾರಿಗಳು ರಾಮಯ್ಯ ಅವರ ಕಡತವನ್ನು ಮುಂದಿನ ಕ್ರಮಕ್ಕಾಗಿ ಮಾಗಡಿ ತಹಸೀಲ್ದಾರ್ ಕಚೇರಿಗೆ ರವಾನಿಸಿದ್ದರು ಎಂದು ತಿಳಿದು ಬಂದಿದೆ.
ದರೋಡೆ ನಡೆದಿದ್ದ ಎಸಿಪಿ ಸಹೋದರಿ ಮನೆಗೆ ಐಜಿ ಶರತ್ ಚಂದ್ರ ಭೇಟಿ
ರೈತ ರಾಮಯ್ಯ ಪಹಣಿಯಲ್ಲಿ ಹೆಸರು ತಿದ್ದುಪಡಿ ಹಾಗೂ ಪೋಡಿ ಮಾಡಿಸಿಕೊಳ್ಳಲು ಮಾಗಡಿ ತಾಲೂಕು ಕಚೇರಿಗೆ ಸುಮಾರು ವರ್ಷಗಳಿಂದ ಅಲೆಯುತ್ತಿದ್ದು, ಇವರ ಕಡತಗಳನ್ನು ನಿರ್ವಹಿಸುತ್ತಿದ್ದ ಪ್ರವೀಣ್ ಎಂಬ ಗುಮಾಸ್ತ ಇಂದು ಬಾ, ನಾಳೆ ಬಾ ಎಂದು ಅಲೆಸುತ್ತಿದ್ದು, ಕಡೆಗೆ 50 ಸಾವಿರ ರೂ. ಕೊಟ್ಟರೆ ಕೆಲಸ ಮಾಡಿಸಿಕೊಡುತ್ತೇನೆ, ನೀನು ಕೊಡುವ ಹಣವನ್ನು ತಹಸೀಲ್ದಾರ್ ಅವರಿಗೆ ನೀಡಬೇಕು ಎಂದು ಹೇಳಿದ್ದ ಎನ್ನಲಾಗಿದೆ.
ರೈತ ರಾಮಯ್ಯನು ತಾಲ್ಲೂಕು ಕಚೇರಿಯ ಸಿಬ್ಬಂದಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದ ವಿಷಯವನ್ನು ರಾಮನಗರ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಟಿ. ಮಲ್ಲೇಶ್ ಅವರ ಗಮನಕ್ಕೆ ತಂದಿದ್ದರು, ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಎಸಿಬಿ ಅಧಿಕಾರಿಗಳು ಮಂಗಳವಾರ ಸಂಜೆ 4 ಗಂಟೆಯ ಸಮಯಕ್ಕೆ ಕಾದು, ತಹಶೀಲ್ದಾರ್ ರಮೇಶ್ ಹಾಗೂ ಗುಮಾಸ್ತ ಪ್ರವೀಣ್ ಗೆ ಬಲೆ ಬೀಸಿದ್ದಾರೆ. ಎಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ಬಗ್ಗೆ ದೂರುದಾರ ರೈತ ರಾಮಯ್ಯ ಮಾತನಾಡಿ, ""ರಾಮನಗರದ ಉಪ ವಿಭಾಗಾಧಿಕಾರಿಗಳು ಆದೇಶ ಮಾಡಿದ್ದರೂ ಸಹ, ಮಾಗಡಿ ತಾಲ್ಲೂಕು ಕಚೇರಿಯ ನೌಕರರು ತಮ್ಮ ಕೆಲಸವನ್ನು ಮಾಡಿಕೊಡಲು ವಿಳಂಬ ಮಾಡುತ್ತಿದ್ದರು. ಗುಮಾಸ್ತ ಪ್ರವೀಣ್ ಎಂಬುವವರು 50 ಸಾವಿರ ರುಪಾಯಿ ಕೊಟ್ಟರೆ ನಿಮ್ಮ ಕೆಲಸವನ್ನು ಮಾಡಿ ಕೊಡುತ್ತೇನೆ ಎಂದು ಮೊಬೈಲ್ ನಲ್ಲಿ ತಿಳಿಸಿದ್ದರು.
ಚನ್ನಪಟ್ಟಣ; ಎಸಿಪಿ ತಂಗಿ ಮನೆ ದರೋಡೆ ಮಾಡಿ, ಧೈರ್ಯ ಹೇಳಿ ಹೋದ ಕಳ್ಳರು
ಇದರ ಧ್ವನಿ ಮುದ್ರಿಕೆಯನ್ನು ಎಸಿಬಿ ಅಧಿಕಾರಿಗಳಿಗೆ ನೀಡಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಟಿ. ಮಲ್ಲೇಶ್, ಪೊಲೀಸ್ ಆರಕ್ಷರಕರಾದ ಕೆ.ಆರ್.ಚಂದ್ರಶೇಖರ್, ಕೆ. ಸತ್ಯನಾರಾಯಣ್ ತಂಡ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು.
ಎಸಿಬಿ ಅಧಿಕಾರಿಗಳು ತಹಸೀಲ್ದಾರ್ ರಮೇಶ್ ಅವರ ಕೊಠಡಿಗೆ ತೆರಳಿದ ಸಮಯದಲ್ಲಿ ಅಲ್ಲಿದ್ದ ಪ್ರತ್ಯಕ್ಷದರ್ಶಿ ಗುಡೇಮಾರನಹಳ್ಳಿ ಕೆಡಿಪಿ ಸದಸ್ಯ ನಾಗರಾಜ್ ಮಾತನಾಡಿ, ""ಮಂಗಳವಾರ ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ನಾನು ಕೆಲಸದ ನಿಮಿತ್ತ ತಹಶೀಲ್ದಾರ್ ಕೊಠಡಿಯಲ್ಲಿ ಕುಳಿತಿದ್ದ ಸಮಯದಲ್ಲಿ ಅಲ್ಲಿಗೆ ಬಂದ ಗುಮಾಸ್ತ ಪ್ರವೀಣ್, ಅಲ್ಲಿಗೆ ಬಂದರು.
ತಾತನ ಕಡತ ಪೂರ್ಣಗೊಂಡಿದೆ ಎಂದು ತಿಳಿಸಿದ್ದು, ಅದಕ್ಕೆ ತಹಶೀಲ್ದಾರ್ ರಮೇಶ್ ಅವರು ಕಡತವನ್ನು ತರಿಸಿ ಸಹಿ ಹಾಕಿದರು. ಈ ಸಮಯದಲ್ಲಿ ಎಸಿಬಿ ಅಧಿಕಾರಿಗಳು ತಹಶೀಲ್ದಾರ್ ರಮೇಶ್ ಕೊಠಡಿಗೆ ಬಂದು ಅವರ ಮೊಬೈಲ್ ತೆಗೆದುಕೊಂಡರು, ನಂತರ ಪ್ರವೀಣ್ ನನ್ನು ಹಿಡಿದುಕೊಂಡು ತಾವು ಎಸಿಬಿ ಅಧಿಕಾರಿಗಳು ತನಿಖೆಗೆ ಸಹಕರಿಸಿ ಎಂದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ'' ಎಂದು ವಿವರಿಸಿದರು.