ಮಾಗಡಿ; ಬಲೆಗೆ ಬಿತ್ತು ನರಹಂತಕ ಚಿರತೆ, ಜನರ ನಿಟ್ಟುಸಿರು
ರಾಮನಗರ, ನವೆಂಬರ್ 12; ಕಳೆದ 15 ದಿನಗಳ ಹಿಂದೆ ಮಹಿಳೆ ಮೇಲೆರಗಿ ಆಕೆಯನ್ನು ಬಲಿ ಪಡೆದಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಮಾಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮಾಗಡಿ ತಾಲೂಕಿನ ಕಲ್ಲುಪಾಳ್ಯ ಗ್ರಾಮದ ರೈತ ಮಹಿಳೆ ಮಹಾಲಕ್ಷ್ಮಿ (38) ಚಿರತೆ ದಾಳಿಗೆ ಬಲಿಯಾಗಿದ್ದರು. ಇದಾದ ನಂತರ ಚಿರತೆ ಸೆರೆ ಹಿಡಿಯುವಂತೆ ಸಾಕಷ್ಟು ಒತ್ತಡ ಕೇಳಿ ಬಂದಿತ್ತು, ಅರಣ್ಯ ಇಲಾಖೆ ಸತತ ಪ್ರಯತ್ನದಿಂದ 8 ವರ್ಷದ ಹೆಣ್ಣು ಚಿರತೆ ಸೆರೆ ಸಿಕ್ಕಿದೆ.
ಗ್ರಾಮದಲ್ಲಿ ನರಹಂತಕ ಚಿರತೆ ಚಲನವಲನಗಳ ಬಗ್ಗೆ ತಿಳಿಯಲು ಅರಣ್ಯ ಇಲಾಖೆಯ 15ಕ್ಕೂ ಹೆಚ್ಚು ಸಿಬ್ಬಂದಿಗಳು, ವನ್ಯ ಜೀವಿ ತಜ್ಞರು ಕಾರ್ಯಾಚರಣೆ ಕೈಗೊಂಡಿದ್ದರು. 32 ಕ್ಯಾಮರಗಳು, 6ಕ್ಕೂ ಹೆಚ್ಚು ಬೋನ್ಗಳನ್ನು ಇರಿಸಲಾಗಿತ್ತು. ಬೋನಿಗೆ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟಿಸಿರುವ ಬಿಡುವಂತಾಗಿದೆ.

"ಈ ಕಾರ್ಯಚರಣೆ ಇನ್ನು ಕೆಲವು ದಿನಗಳ ಕಾಲ ನಡೆಯಲಿದ್ದು ಈ ಭಾಗದಲ್ಲಿ ಇನ್ನಷ್ಟು ಚಿರತೆಗಳು ಇರುವುದರಿಂದ ಕಾರ್ಯಚರಣೆ ಮುಂದುವರಿಸಲಾಗುತ್ತದೆ" ಎಂದು ಮಾಗಡಿ ವಲಯ ಅರಣ್ಯ ಅಧಿಕಾರಿ ಜಗದೀಶ್ ಗೌಡ ತಿಳಿಸಿದ್ದಾರೆ.
"ಈಗ ಸೆರೆಯಾಗಿರುವುದು 8 ವರ್ಷದ ಹೆಣ್ಣು ಚಿರತೆಯಾಗಿದ್ದು ಸಾಕಷ್ಟು ಬಲಿಷ್ಟುವಾಗಿದೆ. ಈ ಚಿರತೆಯೇ ಮಹಾಲಕ್ಷ್ಮಮ್ಮ ಅವರನ್ನು ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು ಗ್ರಾಮಸ್ಥರು ಸಹಕಾರ ನೀಡಿದರೆ ಈ ಭಾಗದಲ್ಲಿರುವ ಇನ್ನು ಹಲವು ಚಿರತೆಗಳನ್ನು ಸೆರೆ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ" ಎಂದು ಹೇಳಿದ್ದಾರೆ.
ಚಿರತೆ ಬೋನಿಗೆ ಬಿದ್ದಿರುವ ವಿಚಾರ ತಿಳಿಯು ತ್ತಿದ್ದಂತೆ ಚಿರತೆ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ಜನರನ್ನು ಕಂಡು ಚಿರತೆ ಮತ್ತಷ್ಟು ಕೋಪಗೊಂಡಿತು. ಜನರು ಮೊಬೈಲ್ನಲ್ಲಿ ಪೋಟೋ ತೆಗೆದುಕೊಂಡರು.
ಚಿರತೆ ಸೆರೆಗೆ ಅಗ್ರಹಿಸಿದ್ದರು; ಚಿರತೆ ದಾಳಿಗೆ ಮಹಿಳೆ ಬಲಿಯಾದ ದಿನ ಮಾಗಡಿ ತಾಲೂಕಿನಾದ್ಯಂತ ಚಿರತೆ, ಕಾಡಾನೆಗಳ ಉಪಟಳ ಹೆಚ್ಚಾಗಿ. ಕಾಡು ಪ್ರಾಣಿಗಳು ಪದೇ ಪದೇ ರೈತರ ಮೇಲೆ ದಾಳಿ ಮಾಡುತ್ತಿವೆ ಹಾಗಾಗಿ ಶಾಶ್ವತವಾಗಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಸುಮಾರು ಒಂದೂವರೆ ಗಂಟೆಗಳ ಕಾಲ ಮಾಗಡಿ-ಕುಣಿಗಲ್ ರಸ್ತೆ ತಡೆ ನಡೆಸಿದ್ದ ಗ್ರಾಮಸ್ಥರು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಕುಟುಂಬ ಒಬ್ಬರಿಗೆ ನೌಕರಿ ಕೊಡುವಂತೆ ಸರ್ಕಾರ ಮತ್ತು, ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು.
ಚಿರತೆ ಸೆರೆಯಿಡಿದರುವ ಅರಣ್ಯ ಇಲಾಖೆಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮಾಸ್ಥರು ಮತ್ತಷ್ಟು ಚಿರತೆಗಳನ್ನು ಹಿಡಿದು ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಗೋಡೆ ಕುಸಿದು ವೃದ್ಧೆ ಸಾವು; ಗೋಡೆ ಕುಸಿದು ಬಿದ್ದು ವೃದ್ಧೆ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೆಣಸಿಗನಹಳ್ಳಿ ಗ್ರಾಮದ ಬಳಿಯ ಲಂಬಾಣಿ ತಾಂಡ್ಯದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಗೌರಿಬಾಯಿ (55) ಎಂದು ಗುರುತಿಸಲಾಗಿದೆ. ಲಂಬಾಣಿ ತಾಂಡ್ಯದ ಡಾಕುನಾಯ್ಕ ಎಂಬುವರ ಪತ್ನಿಯಾದ ಈಕೆಯ ಮೇಲೆ ಸುಮಾರು 10 ರಿಂದ 15 ಅಡಿ ಎತ್ತರದ ಗೋಡೆ ಕುಸಿದು ಬಿದ್ದಿದೆ.
ಇಟ್ಟಿಗೆ ಹಾಗೂ ಮಣ್ಣಿನ ರಾಶಿಯ ಅವಶೇಷಗಳಡಿ ಸಿಲುಕಿದ್ದ ಮಹಿಳೆಯನ್ನು ಗ್ರಾಮದ ಜನರು ಸಾಹಸ ಪಟ್ಟು ಹೊರತೆಗೆದು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಎರಡು ಕಾಲುಗಳು ಮುರಿದು, ತಲೆಗೆ ಗಂಭೀರ ಗಾಯವಾಗಿದ್ದ ಆಕೆಯ ದೇಹಸ್ಥಿತಿಯನ್ನು ಗಮನಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.

ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಗೌರಿಬಾಯಿ ಸಾವನ್ನಪ್ಪಿದ್ದಾರೆ. ಪ್ರಕರಣದ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇತ್ತೀಚಿಗೆ ಸುರಿಯುತ್ತಿರುವ ಭಾರೀ ಮಳೆಯಿಂದ ಮನೆಯ ಗೋಡೆಯು ಸಂಪೂರ್ಣ ಶಿಥಿಲಗೊಂಡಿದ್ದರಿಂದಲೇ ಈ ರೀತಿ ಗೋಡೆ ಬಿದ್ದು ಅಮಾಯಕ ಜೀವ ಬಲಿಯಾಗಿದೆ. ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಲಂಬಾಣಿ ಸಮುದಾಯದ ಜಿಲ್ಲಾಧ್ಯಕ್ಷ ಚಂದ್ರನಾಯ್ಕ ಮನವಿ ಮಾಡಿದ್ದಾರೆ.












Click it and Unblock the Notifications