ಚನ್ನಪಟ್ಟಣ; ಕೋವಿಡ್ ಕೇರ್ ಸೆಂಟರ್ಗೆ ಸ್ಥಳೀಯರ ವಿರೋಧ
ರಾಮನಗರ, ಮೇ 28; ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜನರು ಮನೆಯಿಂದ ಹೊರ ಬಾರದೇ ಮನೆಯಲ್ಲೇ ಕಾಲಕಳೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಜನವಸತಿ ಪ್ರದೇಶದಲ್ಲೇ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿ ಜನರಲ್ಲಿ ಕೋವಿಡ್ ಹರಡುವ ಭೀತಿಯನ್ನು ಹೆಚ್ಚಿಸಿದ್ದಾರೆ.
ಚನ್ನಪಟ್ಟಣದ ಮಹದೇಶ್ವರ ದೇವಸ್ಥಾನದ ಬಳಿಯ ಬಾಲಕರ ಹಾಸ್ಟೆಲ್ನಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡಲಾಗಿದೆ. ಈಗ ಸುಮಾರು 35 ಜನ ಸೋಂಕಿತರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇದೇ ಹಾಸ್ಟೆಲ್ ಗೋಡೆಗೆ ಅಂಟಿಕೊಂಡಂತೆ ಹತ್ತಾರು ಮನೆಗಳಿವೆ.ಬಡಾವಣೆಯಲ್ಲಿ 500ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಯಾವುದೇ ಕೋವಿಡ್ ಕೇರ್ ಸೆಂಟರ್ ಜನವಸತಿ ಪ್ರದೇಶದಿಂದ 10 ಮೀಟರ್ ದೂರದಲ್ಲಿರಬೇಕು. ಜೊತೆಗೆ ಇದರಿಂದಾಗಿ ಕೋವಿಡ್ ಸೋಂಕಿತರಲ್ಲದ ಜನರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ನಿಯಮವಿದೆ. ಆದರೆ ಇದೆಲ್ಲವನ್ನ ಸ್ವತಃ ಸರ್ಕಾರಿ ಅಧಿಕಾರಿಗಳು ಪಾಲನೆ ಮಾಡಿಲ್ಲ.

ಅಧಿಕಾರಿಗಳ ವರ್ತನೆ ಖಂಡಿಸಿ ಬಡವಾಣೆಯ ನೊಂದ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಇಲ್ಲಿನ ಕೋವಿಡ್ ಕೇರ್ ಸೆಂಟರ್ ಬೇರೆಡೆಗೆ ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜನವಸತಿ ಪ್ರದೇಶದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿರುವುದರಿಂದ ಕೇಂದ್ರದಲ್ಲಿರುವ ಸುಮಾರು 35 ಜನ ಸೋಂಕಿತರು ತೊಂದರೆ ಅನುಭವಿಸುತ್ತಿದ್ದಾರೆ. ಮನೆಗಳಿಗೆ ಕೊರೊನಾ ಕೇರ್ ಸೆಂಟರ್ ಗೋಡೆ ಅಂಟಿಕೊಂಡಿರುವ ಹಿನ್ನೆಲೆ ಕಿಟಕಿಗಳಿಗೆ ಫ್ಲೈವುಡ್ ಸೀಟ್ ಹೊಡೆಯಲಾಗಿದೆ.
ಇದರಿಂದಾಗಿ ಸೋಂಕಿತರಿಗೂ ಗಾಳಿ, ಬೆಳಕು ಸರಿಯಾಗಿ ಸಿಗುತ್ತಿಲ್ಲ. ಜೊತೆಗೆ ಸೋಂಕಿತರು ಉಪಯೋಗಿಸಿದ ಮಾಸ್ಕ್, ಗ್ಲೌಸ್ ಗಳನ್ನ ಮನೆಗಳ ಬಳಿ ಬಿಸಾಡುತ್ತಿದ್ದಾರೆ. ಇದರಿಂದಾಗಿ ಆರೋಗ್ಯವಂತ ಜನರಿಗೂ ಸಹ ಸೋಂಕು ಹರಡುವ ಭೀತಿ ಎದುರಾಗಿದೆ.
ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿ ಗೊತ್ತಿದ್ದರೂ ಸಹ ಯಾವುದೇ ಆಲೋಚನೆ ಮಾಡದೇ ಕೇರ್ ಸೆಂಟರ್ ತೆರೆದಿದ್ದಾರೆ. ಇದರಿಂದಾಗಿ ಕೋವಿಡ್ ಇಲ್ಲದ ಜನರು ಪರಿತಪಿಸುವಂತಾಗಿದೆ. ಹಾಗಾಗಿ ಈ ಕೂಡಲೇ ಈ ಕೋವಿಡ್ ಕೇರ್ ಸೆಂಟರ್ ಸ್ಥಳಾಂತರ ಮಾಡಿ ಎಂದು ಜನರು ಆಗ್ರಹಿಸಿದ್ದಾರೆ.












Click it and Unblock the Notifications