ರಾಮನಗರ; ಜಿಲ್ಲಾ ಆಸ್ಪತ್ರೆಗೆ 10 ದಿನದಲ್ಲಿ ಆಕ್ಸಿಜನ್ ಟ್ಯಾಂಕ್
ರಾಮನಗರ, ಮೇ 06; " ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಇನ್ನು 10 ದಿನದಲ್ಲಿ ಆಕ್ಸಿಜನ್ ಟ್ಯಾಂಕ್ ಅಳವಡಿಕೆ ಮಾಡಲಾಗುತ್ತದೆ" ಎಂದು ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ್ ಹೇಳಿದರು.
ಚನ್ನಪಟ್ಟಣ ಶಾಸಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಉಂಟಾಗಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
"ಬುಧವಾರ ಒಂದೇ ದಿನ 550 ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ 3,000 ಸೋಂಕಿತರು ಇದ್ದಾರೆ. ಈ ಪ್ರಮಾಣದಲ್ಲಿ ಕೇವಲ ಶೇ.10ರಷ್ಟು ಸೋಂಕಿತರಿಗೆ ಆಕ್ಸಿಜನ್ ಬೆಡ್ಗಳ ಅಗತ್ಯವಿದೆ. ಆದರೆ, ಸರಕಾರ ಶೇ 20-30ರಷ್ಟು ಸೋಂಕಿತರಿಗೂ ಆಕ್ಸಿಜನ್ ಬೆಡ್ಗಳನ್ನು ವ್ಯವಸ್ಥೆ ಮಾಡಿದೆ" ಎಂದರು.

"ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕೋವಿಡ್ ಕಾಲ್ ಸೆಂಟರ್ ಸ್ಥಾಪನೆ ಮಾಡುತ್ತೆವೆ. ಇನ್ನು 10 ದಿನದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಂಗ್ರಹಕ್ಕೆ ಟ್ಯಾಂಕ್ನ್ನು ಅಳವಡಿಸಲಾಗುತ್ತಿದೆ ಹಾಗೂ ಪ್ರತಿ ನಿಮಿಷಕ್ಕೆ 1000 ಕೆಎಲ್ ಆಮ್ಲಜನಕ ಪೂರೈಕೆ ಮಾಡುವ ಆಕ್ಸಿಜನ್ ಜನರೇಟರ್ ಹಾಕಲಿಕ್ಕೂ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಕೆಲ ದಿನಗಳಲ್ಲೇ ಇವೆಲ್ಲ ಸೌಲಭ್ಯಗಳು ಕಾರ್ಯಾಚರಣೆಗೆ ಬರಲಿವೆ" ಎಂದು ಹೇಳಿದರು.
ಜೈಲಿಗೆ ಅಟ್ಟುತ್ತೇವೆ; "ಯಾರಾದರೂ ಕೋವಿಡ್ ಪರಿಸ್ಥಿತಿಯ ದುರ್ಲಾಭವನ್ನು ಪಡೆದುಕೊಂಡು ಹಣ ಸುಲಿಗೆ ಮಾಡಲೆತ್ನಸಿದರೆ ಮುಲಾಜಿಲ್ಲದೆ ಕ್ರಮ ಕೈಕೊಳ್ಳಲಾಗುವುದು ಹಾಗೂ ಬಂಧಿಸಿ ಜೈಲಿಗಟ್ಟಲಾಗುವುದು" ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಅಶ್ವಥ್ ನಾರಾಯಣ್ ಎಚ್ಚರಿಕೆ ನೀಡಿದರು.
"ಈ ಬಗ್ಗೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಯಾರಾದರೂ ಆಮ್ಲಜನಕ, ಹಾಸಿಗೆಗಳು, ರೆಮಿಡಿಸ್ವಿರ್, ಆಂಬ್ಯುಲೆನ್ಸ್, ಚಿತಾಗಾರ ಮತ್ತಿತರೆ ಯಾವುದೇ ಇರಲಿ, ಪರಿಸ್ಥಿತಿಯ ದುರ್ಲಾಭ ಮಾಡಿಕೊಳ್ಳಲು ಯತ್ನಸಿದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಅತ್ಯಂತ ಕಠಿಣ ಕ್ರಮ ಜರುಗಿಸುತ್ತೇವೆ" ಎಂದರು.
ರೆಮಿಡಿಸ್ವಿರ್ ಬೇಡ: "ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಪಾಸಿಟಿವ್ ಬಂದರೆ ಅವರಿಗೆ ಕೂಡಲೇ ರೆಮಿಡಿಸ್ವಿರ್ ಕೊಡುವ ಅಗತ್ಯವಿಲ್ಲ" ಎಂದು ಉಪಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
"ಸದ್ಯದ ಸ್ಥಿತಿಯಲ್ಲಿ ಪ್ರತಿದಿನ 24,000 ವೈಲ್ ರೆಮಿಡಿಸ್ವಿರ್ ಕೊಡಲು ಸಾಧ್ಯವಾಗುತ್ತದೆ. ಅದು ಸದ್ಬಳಕೆ ಆಗುವ ಹಾಗೂ ಅಗತ್ಯವಿರುವವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಔಷಧಿ ಕೊರತೆ ಆಗದಂತೆ ಎಚ್ಚರಿಕೆ ವಹಿಸಿದ್ದೇವೆ" ಎಂದರು.











Click it and Unblock the Notifications