ಕುಮಾರಸ್ವಾಮಿ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ ಬಾಲಕೃಷ್ಣ!
ರಾಮನಗರ, ಮೇ 02: ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ಮಾಜಿ ಸಿಎಂ ಕುಮಾರಸ್ವಾಮಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು ಎಂದಿದ್ದಾರೆ!
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಇತ್ತೀಚೆಗಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದರು.
ಬಾಲಕೃಷ್ಣ, ಮಾಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಾ ಮಾಧ್ಯಮದವರಿಗೆ ಈ ವಿಚಾರ ತಿಳಿಸಿದ್ದು, ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಾರದೆ ಹೋಗಿದ್ದರೆ ಆಗಲೇ ಬಿಜೆಪಿಯೊಂದಿಗೆ ಕೈಜೋಡಿಸಲು ತೀರ್ಮಾನ ಮಾಡಲಾಗಿತ್ತು.
ಆದರೆ ಬಿಜೆಪಿ ಬಹುಮತ ಪಡೆದ ಹಿನ್ನಲೆಯಲ್ಲಿ ಕುಮಾರಸ್ವಾಮಿ ಆಸೆ ಕೈಗೂಡಲಿಲ್ಲ. ಆವತ್ತು ಕುಮಾರಸ್ವಾಮಿ ತಮ್ಮ ತಂದೆ ದೇವೇಗೌಡರೇ ಪ್ರಧಾನಿ ಆಗುತ್ತಾರೆಂಬ ಭಾವನೆಯನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದರು ಎಂಬ ಆರೋಪ ಮಾಡಿದ್ದಾರೆ.
ದೆಹಲಿ ಏರ್ಪೋರ್ಟಲ್ಲಿ ಶಾ-ಕುಮಾರಸ್ವಾಮಿ ಭೇಟಿ: ಸಿದ್ದರಾಮಯ್ಯ ಹೊಸ ಬಾಂಬ್
ಈ ಬಾರಿ ಹಾಸನ ಜಿಲ್ಲೆಯ ಹೊಳೆನರಸೀಪುರ, ಮಾಗಡಿ ಸೇರಿದಂತೆ ಕೆಲವಡೆ ಕುಮಾರಸ್ವಾಮಿರವರ ಆದೇಶದ ಮೇರೆಗೆ ಬಿಜೆಪಿ ಹೈಕಮಾಂಡ್ ಬಿ ಫಾರಂ ನೀಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಅಧಿಕಾರ ಮುಖ್ಯವಾಗಿದೆಯೇ ಹೊರತು ತತ್ವ ಸಿದ್ಧಾಂತ ಅಲ್ಲ. ಅಧಿಕಾರಕ್ಕಾಗಿ ಬಿಜೆಪಿ ಅಥವಾ ಕಾಂಗ್ರೆಸ್ ಜತೆ ಹೊಂದಾಣಿಕೆಗೆ ಸದಾ ಸಿದ್ಧವಿರುವುದಾಗಿ ಆ ಪಕ್ಷದ ನಾಯಕರೇ ನನ್ನೊಂದಿಗೆ ಹೇಳಿಕೊಂಡಿದ್ದಾರೆ.
ಬಿಬಿಎಂಪಿನಲ್ಲಿ ಕಾಂಗ್ರೆಸ್ ಹಾಗೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಜೆಡಿಎಸ್ ನಿಜವಾಗಿಯೂ ಜಾತ್ಯತೀತ ತತ್ವಕ್ಕೆ ಬದ್ಧವಾಗಿದ್ದರೆ ಎರಡು ದೋಣಿಗಳಲ್ಲಿ ಕಾಲಿಡುವ ಕೆಲಸ ಮಾಡುತ್ತಿರಲಿಲ್ಲ, ಅವಶ್ಯಕತೆಗೆ ತಕ್ಕಂತೆ ರಾಜಕಾರಣ ಮಾಡುತ್ತಿದ್ದಾರೆ. ಪುತ್ರ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈ ಜೋಡಿಸಿದರೆ ಬಹಿಷ್ಕಾರ ಹಾಕುವುದಾಗಿ ಜೆಡಿಎಸ್ ದೇವೇಗೌಡರು ಹೇಳಿರುವುದು ಒಂದು ಹೈಡ್ರಾಮ ಎಂದು ಲೇವಡಿ ಮಾಡಿದ್ದಾರೆ.
ಒಟ್ಟಾರೆ ಜೆಡಿಎಸ್ ನಲ್ಲಿ ಬಂಡಾಯ ಎದ್ದು ಬಳಿಕ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ನಾಯಕರು ಈಗ ಒಂದರ ಮೇಲೊಂದರಂತೆ ದೇವೇಗೌಡರು ಮತ್ತು ಕುಮಾರಸ್ವಾಮಿ ವಿರುದ್ಧ ಹೊಸ ಬಾಂಬ್ ಗಳನ್ನು ಸಿಡಿಸಲಾರಂಭಿಸಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಈ ಆರೋಪಗಳು ಯಾವ ರೀತಿಯಲ್ಲೆಲ್ಲ ತಿರುವು ಪಡೆದುಕೊಳ್ಳುತ್ತದೆ ಎಂಬುದು ಮಾತ್ರ ಕುತೂಹಲಕಾರಿಯಾಗಿದೆ.