ಯಾವನಾದ್ರೂ ದೊಡ್ಡಮಟ್ಟದಲ್ಲಿ ರೈತರ ಸಾಲಮನ್ನಾ ಮಾಡಿದ್ರೆ ಅದು ಎಚ್.ಡಿ.ಕುಮಾರಸ್ವಾಮಿ: ಎಚ್.ಡಿ.ದೇವೇಗೌಡ
ಚನ್ನಪಟ್ಟಣ, ಮೇ, 03: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕುಮಾರಸ್ವಾಮಿ ಪರ ಪ್ರಚಾರ ಮಾಡಲು ಎಚ್.ಡಿ.ದೇವೇಗೌಡ ಅವರು ಇಂದು ಚನ್ನಪಟ್ಟಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಯಾವುದೇ ಸಿಎಂ ಕೂಡ ದೊಡ್ಡಮಟ್ಟದಲ್ಲಿ ರೈತರ ಸಾಲ ಮನ್ನ ಮಾಡಿಲ್ಲ. ಎಚ್.ಡಿ.ಕುಮಾರಸ್ವಾಮಿ 26 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ ಎಂದರು.
ಬೊಂಬೆನಾಡು ಚನ್ನಪಟ್ಟಣಕ್ಕೆ ಹೆಲಿಕ್ಯಾಪ್ಟರ್ನಲ್ಲಿ ಪೊಲೀಸ್ ತರಬೇತಿ ಶಾಲೆಯ ಹೆಲಿಪ್ಯಾಡ್ಗೆ ಬಂದಿಳಿದ ಎಚ್.ಡಿ.ದೇವೇಗೌಡ ಅವರಿಗೆ ಜೆಡಿಎಸ್ ಕಾರ್ಯಕರ್ತರು ಸ್ವಾಗತ ಕೋರಿದರು. ನಂತರ ಎಚ್.ಡಿ.ದೇವೇಗೌಡ ಅವರು ಚನ್ನಪಟ್ಟಣದಲ್ಲಿ ಪುತ್ರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರ ಪ್ರಚಾರ ನಡೆಸಿದರು.

ಯಾವಾನಾದರೂ ದೇಶದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಾಲಮನ್ನಾ ಮಾಡಿದ್ದಾರೆ ತೋರಿಸಿ. ಆದರೆ ಕುಮಾರಸ್ವಾಮಿ ಏಕಾಂಗಿಯಾಗಿ ನಿಂತು ರೈತರ ಸಾಲಮನ್ನ ಮಾಡಿದ್ದಾರೆ. ಹಾಗೆಯೇ ಇವತ್ತು ಚನ್ನಪಟ್ಟಣಕ್ಕೆ ಪ್ರಚಾರಕ್ಕೆ ಬಂದಿದ್ದೇನೆ, ಮೊನ್ನೆ ಕೂಡ ಬಹಿರಂಗ ಸಭೆ ಮಾಡಿದ್ದೆ. ಎರಡು ಕಡೆ ಸಭೆ ನಡೆಸಿ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಿದ್ದೇನೆ. ಹಾಗೂ ಇಬ್ರಾಹಿಂ ಕೂಡ ರಾಜ್ಯದ ಹಲವು ಭಾಗದಲ್ಲಿ ಪ್ರವಾಸ ಮಾಡುತ್ತಿದ್ದಾರೆ ಎಂದರು.
ತಮಿಳ ರೀತಿ ಇಲ್ಲೂ ಕೂಡ ಕಲಿಯಬೇಕು. ತಮಿಳುನಾಡಿನಲ್ಲಿ ಯಾವುದೇ ಕಾಂಗ್ರೆಸ್, ಬಿಜೆಪಿ ಇಲ್ಲ. ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಬೆಂಬಲ ಇದೆ. ನಾವು ಕನ್ನಡಿಗರು, ನಮ್ಮ ನೀರನ್ನು ನಾವು ಉಳಿಸಿಕೊಳ್ಳಬೇಕು. ಚನ್ನಪಟ್ಟಣ ಇಡೀ ತಾಲೂಕನ್ನು ನೀರಾವರಿ ಮಾಡಿದ್ದು ಯಾರು? ಚನ್ನಪಟ್ಟಣದ ರೈತರು ಬದುಕಿದ್ದಾರೆ ಅಂದರೆ ಕಾರಣ ದೇವೇಗೌಡರು. ಆಗ ಬಿಜೆಪಿ, ಕಾಂಗ್ರೆಸ್ನವರು ಕೈಕಟ್ಟಿಕೊಂಡು ಕುಳಿತುಕೊಂಡಿದ್ದರು ಎಂದು ವಾಗ್ದಾಳಿ ನಡೆಸಿದರು.
ಏಕಾಂಗಿಯಾಗಿ ನೀರಿಗೆ ಹೋರಾಟ ಮಾಡಿದ್ದು ನಾನು. ರೈತರು ಬೆವರು ಸುರಿಸಿದ ದುಡ್ಡಲ್ಲಿ ನಾವು ನೀರಾವರಿ ತಂದಿದ್ದೇವೆ. ಅದೇ ತಮಿಳುನಾಡಿನವರಿಗೆ ದುಡ್ಡು ಕೊಡುತ್ತೀರಿ, ಅಲ್ಕದೆ ಪ್ರಾಜೆಕ್ಟ್ ಕ್ಲಿಯರ್ ಮಾಡುತ್ತೀರಿ. ನಮ್ಮ ಕನ್ನಡಿಗರಿಗೆ ಸ್ವಾಭಿಮಾನ ಇಲ್ವವೆ? ಒಂದು ಮೇಕೆದಾಟು ಆಣೆಕಟ್ಟು ಕಟ್ಟಲು ಬಿಡುತ್ತಿಲ್ಲ. ಅದಕ್ಕಾಗಿ ಪ್ರಾದೇಶಿಕ ಪಕ್ಷ ಉಳಿಸಿ, ಬೆಳೆಸಬೇಕು ಎಂದರು.
ಎಚ್.ಡಿ.ಕುಮಾರಸ್ವಾಮಿ ಕಳೆದೆರಡು ದಿನಗಳಲ್ಲಿ ಹದಿನಾರು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದಾರೆ. ಈ ದೇಶದಲ್ಲಿ ರೈತನಿಗೆ ಪಿಂಚಣಿ ಕೊಡುತ್ತೇನೆ ಎಂದು ಹೇಳುವ ವ್ಯಕ್ತಿ ಇದ್ದರೆ ಅದು ಕುಮಾರಸ್ವಾಮಿ. ಯಾವನಾದರೂ ಸಿಎಂ ಇದ್ದರೆ, ನುಡಿದಂತೆ ನಡೆಯುವ ರಾಜಕಾರಣಿ ಯಾವನಾದರೂ ಇದ್ದರೆ ಅದು ಕುಮಾರಸ್ವಾಮಿ ಎಂದರು
ಇನ್ನುಬ ಕಾಂಗ್ರೆಸ್ನವರ ವ್ಯಂಗ್ಯದ ನಡುವೆ ಸಾಲ ಮನ್ನಾ ಮಾಡಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಎರಡನೇ ಸಾಲಿನಲ್ಲಿ ಕುಳಿತ ಸಿದ್ದರಾಮಯ್ಯ ವ್ಯಂಗ್ಯ ಮಾಡಿ ಹೊರಗೆ ಹೋಗುತ್ತಾರೆ. ಹಿಂದೂಸ್ಥಾನದಲ್ಲಿ ಕಾಂಗ್ರೆಸ್ನ ಎಲ್ಲಾ ಕಾರ್ಯಕ್ರಮಗಳಿಗೆ ಹಣ ಕೊಟ್ಟು ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ. ಸಿದ್ದರಾಮಯ್ಯ ಐವತ್ತು ಸಾವಿರ ಸಾಲ ಮನ್ನಾ ಮಾಡಿದ್ದರೂ, 3,500 ಕೋಟಿ ಬಾಕಿ ಉಳಿದಿತ್ತು. ಅದರ ಜೊತೆಗೆ 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ಎಂದರು.
ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತಹ ಮತ್ತೊಬ್ಬ ಸಿಎಂ ಇಲ್ಲ. ಕಾಂಗ್ರೆಸ್ ಬಿಜೆಪಿಯವರು ನನ್ನ ಮುಂದೆ ನಿಂತು ಹೇಳಲಿ, ಇದು ನನ್ನ ಸವಾಲು. ಈ ಬಾರಿ ಮಂಡ್ಯದಿಂದ ಸ್ಪರ್ಧೆಗೆ ಒತ್ತಡ ಬಂದರೂ ಚನ್ನಪಟ್ಟಣ ನನ್ನ ಕರ್ಮ ಭೂಮಿ ಅಂತಾ ಕುಮಾರಸ್ವಾಮಿ ನಿರಾಕರಿಸಿದರು ಎಂದರು.
ನಾನು ಮುಸ್ಲಿಂ ವಸತಿ ಶಾಲೆಗಳನ್ನು ಕೊಟ್ಟಿದ್ದೆ. ಆದರೆ ಸಮಾಜ ಕಲ್ಯಾಣ ಇಲಾಖೆಗಳಿಗೆ ಸೇರಿಸಿ ಹಾಳು ಮಾಡಿದರು. ಹದಿಮೂರು ಬಾರಿ ಬಜೆಟ್ ಮಂಡಿಸಿದ್ದೇನೆ ಎನ್ನುವವರು ಉತ್ಸಾಹ ತೋರಲಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹರಿಹಾಯ್ದರು.
ಚನ್ನಪಟ್ಟಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಿ. ಸಮೀಕ್ಷಾ ವರದಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ದ. ಎರಡನೇ ಬಾರಿಗೆ ರಾಜ್ಯಕ್ಕೆ ಮುಖ್ಯಮಂತ್ರಿ ಕೊಡುವ ಹೆಗ್ಗಳಿಕೆ ಚನ್ನಪಟ್ಟಣಕ್ಕೆ ಸಲ್ಲಬೇಕು. ಯುವಕರು ದೇಶದ ಮುಂದಿನ ಪ್ರಜೆಗಳು ಈ ಪಕ್ಷವನ್ನ ಉಳಿಸಿ. ನಾವು ತಾಯಿ ಭುವನೇಶ್ವರಿ ಮಕ್ಕಳು, ನಾಡಿಗಾಗಿ ತಮ್ಮ ಶಕ್ತಿ ತೋರಿಸಿ ಎಂದರು.
ಯಾರು ಏನೇ ಹೇಳಿದರೂ, ಅಪಪ್ರಚಾರ ಮಾಡಿದರೂ ನಿಮ್ಮ ಮನೆ ಮಗನನ್ನು ಸಿಎಂ ಮಾಡುತ್ತೇವೆ ಅಂತಾ ಪಣ ತೊಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ಕುಮಾರಸ್ವಾಮಿ ಅವರು ಕರೆಕೊಟ್ಟರು.












Click it and Unblock the Notifications