ಜೆಡಿಎಸ್ 30 ಸೀಟಿನ ಪಕ್ಷ ಎಂದವರಿಗೆ ಎಚ್‌ಡಿಕೆ ತಿರುಗೇಟು!

ರಾಮನಗರ, ಸೆಪ್ಟೆಂಬರ್ 27: 'ಕೆಲವರು ಜೆಡಿಎಸ್ ಪಕ್ಷವನ್ನು 30 ಸೀಟುಗಳ ಪಕ್ಷ ಎಂದು ಲಘುವಾಗಿ ಮಾತನಾಡುತ್ತಿದ್ದಾರೆ. ಅಂಥವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಗುಡುಗಿದರು.

ರಾಮನಗರ ಜಿಲ್ಲೆಯ ಬಿಡದಿಯ ತೋಟದ ಮನೆಯಲ್ಲಿ ಆಯೋಜಿಸಲಾಗಿದ್ದ 'ಜನತಾ ಪರ್ವ 1.O' ಹಾಗೂ, 'ಮಿಷನ್ -123' ಕಾರ್ಯಗಾರದಲ್ಲಿ ಪ್ರಚಲಿತ ರಾಜಕೀಯ ಸನ್ನಿವೇಶದ ಕುರಿತು ಕುಮಾರಸ್ವಾಮಿ ಮಾತನಾಡಿದರು.

"ಜೆಡಿಎಸ್ ಪಕ್ಷದಿಂದ ರಾಜಕೀಯವಾಗಿ ಬೆಳೆದವರು ಕೊನೆಗೆ ರಾಜಕೀಯ ಬದುಕು ಕೊಟ್ಟ ಪಕ್ಷವನ್ನೇ ಮುಗಿಸಲು ಹುನ್ನಾರ ನಡೆಸಿದವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ. ಜೆಡಿಎಸ್ 30 ಸೀಟಿನ ಪಕ್ಷವಲ್ಲ. ಹಾಗೆಂದು ಹಾದಿ ಬೀದಿಯಲ್ಲಿ ಹೇಳಿಕೊಂಡು ಓಡಾಡುತ್ತಿರುವ ಸಿದ್ದರಾಮಯ್ಯರಂತಹ ನಾಯಕರಿಗೆ ಉತ್ತರ ಕೊಡುವ ಕಾಲ ದೂರವಿಲ್ಲ. 30 ಸೀಟಿನ ಪಕ್ಷ ಎಂದವರು ರಾಜಕೀಯವಾಗಿ ಮೂರಾಬಟ್ಟೆ ಆಗುವುದು ಖಚಿತ" ಎಂದರು.

JDS Work Shop In Bidadi HD Kumaraswamy Speech Highlights

"ಕಾಂಗ್ರೆಸ್ ನಮ್ಮ, ಜೆಡಿಎಸ್ ಬೆನ್ನಿಗೆ ಇರಿಯುವ ಕೆಲಸ ಮಾಡಿದೆ. ಸಮ್ಮಿಶ್ರ ಸರಕಾರ ರಚನೆಯಾದ ಮೇಲೆಯೂ ನಮ್ಮ ಪಕ್ಷವನ್ನು ಮುಗಿಸಲು ಆ ಪಕ್ಷದ ಕೆಲ ನಾಯಕರು ಪ್ರಯತ್ನ ನಡೆಸಿದರು. ಅದು ಫಲಕಾರಿ ಆಗದಿದ್ದಾಗ ಸರಕಾರವನ್ನು ಬೀಳಿಸಿದರು" ಎಂದು ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದರು.

"ಧರ್ಮಸಿಂಗ್ ಸರಕಾರ ಇದ್ದಾಗಲೂ ಪಕ್ಷವನ್ನು ಒಡೆಯುವ ಪ್ರಯತ್ನ ನಡೆಯಿತು. ಪಕ್ಷವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಜತೆ ಕೈ ಜೋಡಿಸಿ ಸರಕಾರ ರಚನೆ ಮಾಡಲಾಯಿತು. ಆದರೆ, ಆ ಪಕ್ಷಕ್ಕೆ ತನ್ನ ಹಿಡನ್ ಅಜೆಂಡಾವನ್ನು ಜಾರಿ ಮಾಡಲು ನಾವು ಅವಕಾಶ ನೀಡಲಿಲ್ಲ" ಎಂದು ಹೇಳಿದರು.

"ಜೆಡಿಎಸ್ ಅವರಿವರ ಜತೆ ಹೋಗಿ ಸರಕಾರ ಮಾಡುತ್ತದೆ ಎಂದು ಒಬ್ಬರು ಹೇಳಿಕೊಂಡಿದ್ದಾರೆ. ಆದರೆ, ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಿಜೆಪಿ ಬಲವಾಗಿ ಬೆಳೆಯಲು ಕಾಂಗ್ರೆಸ್ ಪಕ್ಷವೇ ಕಾರಣ. ಆ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ನಿರಂತರವಾಗಿ ಇಟ್ಟ ತಪ್ಪು ಹೆಜ್ಜೆಗಳ ಕಾರಣ ಬಿಜೆಪಿ ಬೆಳೆಯುತ್ತಾ ಹೋಯಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಬೇರುಗಳು ಸಡಿಲವಾಗುತ್ತಿವೆ. ದೇಶದ ಉದ್ದಗಲಕ್ಕೂ ನಶಿಸಿ ಹೋಗುತ್ತಿರುವಂತೆ ರಾಜ್ಯದಲ್ಲಿಯೂ ನಶಿಸುತ್ತಿದೆ. 2023ರ ಚುನಾವಣೆ ಆ ಪಕ್ಷಕ್ಕೆ ಚರಮಗೀತೆ ಹಾಡಲಿದೆ" ಎಂದು ಭವಿಷ್ಯ ನುಡಿದರು.

"ದಕ್ಷಿಣ ಭಾರತದಲ್ಲಿ ಈಗಾಗಲೇ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳದಲ್ಲಿ ಕಾಂಗ್ರೆಸ್ ನಶಿಸಿದೆ. ಕರ್ನಾಟಕದಲ್ಲಿ ಅದು ಅಂತ್ಯಕಾಲದಲ್ಲಿದೆ. ಅಷ್ಟೇ ಅಲ್ಲ, ನರೇಂದ್ರ ಮೋದಿ ಪ್ರಧಾನಿಯಾಗಲು ನೇರ ಕಾರಣ ಕಾಂಗ್ರೆಸ್ ಪಕ್ಷ. ಆದರೆ, ಜೆಡಿಎಸ್ ಪಕ್ಷವನ್ನು ಆ ಪಕ್ಷ ಬಿಜೆಪಿಯ ಬಿ-ಟೀಮ್ ಎಂದು ಅಪಪ್ರಚಾರ ಮಾಡುತ್ತಿದೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಇತರೆ ಪಕ್ಷಗಳ ಮೇಲೆ ಕೆಸರು ಎರಚುತ್ತಿದೆ" ಎಂದು ಕುಮಾರಸ್ವಾಮಿ ದೂರಿದರು.

"ಅಯೋಧ್ಯೆಯಲ್ಲಿ ಪೂಜೆಗೆ ಅವಕಾಶ ಮಾಡಿಕೊಟ್ಟವರು ಯಾರು?. ಮಸೀದಿ ನೆಲಸಮಕ್ಕೆ ಅವಕಾಶ ನೀಡಿದವರು ಯಾರು?. ಬಿಜೆಪಿ ಬೆಳೆಯಲು ಕಾರಣ ಯಾರು?. ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷಕ್ಕೆ ಮಂದಿನ ಚುನಾವಣೆಗೆ ವಿಷಯವೇ ಇಲ್ಲ. ಅನ್ನ ಭಾಗ್ಯ, ಜಾತಿ ಗಣತಿ ಬಿಟ್ಟರೆ ಸಿದ್ದರಾಮಯ್ಯ ಬತ್ತಳಿಕೆಯಲ್ಲಿ ಬೇರೆ ಅಸ್ತ್ರಗಳು ಇಲ್ಲ. ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡದೇ ಇದ್ದರೆ ನಿದ್ದೆಯೇ ಬರುವುದಿಲ್ಲ. ಹೀಗಾಗಿ ಆ ಪಕ್ಷದ ಬಗ್ಗೆ ನಮಗೆ ಭಯವಿಲ್ಲ. ಇನ್ನಾದರೂ ಸಿದ್ದರಾಮಯ್ಯ ಜೆಡಿಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ ಉತ್ತಮ. ಇಲ್ಲವಾದರೆ ಅದರ ಫಲ ಅನುಭವಿಸಬೇಕಾಗುತ್ತದೆ" ಎಂದು ಎಚ್. ಡಿ. ಕುಮಾರಸ್ವಾಮಿ ಎಚ್ಚರಿಸಿದರು.

ಅಭ್ಯರ್ಥಿಗಳಿಗೆ ಗೆಲುವಿನ ಪಾಠ; ಎಚ್. ಡಿ. ಕುಮಾರಸ್ವಾಮಿ ಕಾರ್ಯಗಾರದಲ್ಲಿ ಭಾಗವಹಿಸಿದ್ದ 200 ಪ್ರತಿನಿಧಿಗಳಿಗೆ ಚುನಾವಣೆಯ ಗೆಲುವಿನ ಪಾಠ ಮಾಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ 2023ರ ಚುನಾವಣೆ ಎದುರಿಸುವ ಬಗ್ಗೆ ತಮ್ಮ ಕನಸು ಮತ್ತು ಪರಿಕಲ್ಪನೆಗಳನ್ನು ಹಂಚಿಕೊಂಡ ಅವರು, ಜನರನ್ನು ತಲುಪುವ ಬಗೆ, ಸಂಘಟನೆ, ಕಾರ್ಯಕರ್ತರನ್ನು ಒಗ್ಗೂಡಿಸುವುದು, ಕಾಲ ಕಾಲಕ್ಕೆ ಪಕ್ಷ ನೀಡುವ ಸೂಚನೆಗಳನ್ನು ಪಾಲಿಸುವುದು, ಗೆಲುವಿಗಾಗಿ ಮಾಡಬೇಕಾದ ಎಲ್ಲ ಪ್ರಯತ್ನಗಳ ಬಗ್ಗೆ ವಿವರಣೆ ನೀಡಿದರು.

ಪಕ್ಷವನ್ನು ಸಂಘಟನೆ ಮಾಡುವುದರ ಜತೆಗೆ ಮಹಿಳಾ ಘಟಕ, ಯುವ ಘಟಕ, ವಿಧ್ಯಾರ್ಥಿ ಘಟಕವನ್ನು ಬಲಗೊಳಿಸುವ ಬಗ್ಗೆ ಕೂಡ ಅವರು ಕೆಲ ಸಲಹೆಗಳನ್ನು ನೀಡಿದರು. ಕಷ್ಟ ಕಾಲದಲ್ಲಿ ಪಕ್ಷದ ಜೊತೆ ನಿಂತ ಯಾರನ್ನು ಕೈ ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ಅವರು, ಎಲ್ಲರೂ ತಮ್ಮ ಶಕ್ತಿಯನ್ನು ಬಳಸಿ ಸಂಘಟನೆ ಮಾಡಿ, ಗೆಲ್ಲಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರ ಪಕ್ಷ ನೀಡಲಿದೆ ಎಂದರು.

ಅಭ್ಯರ್ಥಿ ಆಗಬೇಕೆಂಬ ಹಂಬಲ ಇದ್ದರೆ ಸಾಲದು. ಗೆಲ್ಲಲೇಬೇಕು ಎಂಬ ಛಲವು ಬೇಕು. ಸಿಕ್ಕಿದ ಅವಕಾಶವನ್ನು ಕಳೆದುಕೊಳ್ಳುವುದು ಬೇಡ ಎಂದು ಅವರು ಕಿವಿಮಾತು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+