ಕನಕಪುರ 'ಕಲ್ಲಿನಪುರ' ಮಾಡಿದ ಡಿಕೆ ಬ್ರದರ್ಸ್ 'ಚಿನ್ನದ ಪಟ್ಟಣ' ಮಾಡ್ತಾರಾ?
ಚನ್ನಪಟ್ಟಣ ವಿಧಾನಸಭಾ ಚುನಾವಣಾ ಅಖಾಡದಲ್ಲಿ ತೊಡೆತಟ್ಟಿರುವ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ (ಡಿಕೆ ಬ್ರದರ್ಸ್) ಈ ಕ್ಷೇತ್ರವನ್ನು ಚಿನ್ನದ ಪಟ್ಟಣ ಮಾಡುತ್ತೇವೆ ಎಂದು ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರವಾಗಿ ಜೆಡಿಎಸ್ ಪಕ್ಷವು ಡಿ.ಕೆ.ಶಿವಕುಮಾರ್, ಸುರೇಶ್ ಅವರನ್ನು ವ್ಯಂಗ್ಯ ಮಾಡಿದೆ.
ಚನ್ನಪಟ್ಟಣ ಕ್ಷೇತ್ರವು ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಬ್ರದರ್ಸ್ ಕನಕಪುರವನ್ನು "ಕಲ್ಲಿನಪುರ" ಮಾಡಿ ಬಂಡೆಕಲ್ಲುಗಳನ್ನು ಖಾಲಿ ಮಾಡಿದ್ದಾಗಿದೆ ಎಂದು ವಾಗ್ದಾಳಿ ನಡೆಸಿದೆ.

ಈಗ ಚನ್ನಪಟ್ಟಣವನ್ನು ಚಿನ್ನದಪಟ್ಟಣ ಮಾಡುತ್ತೇನೆ ಎಂದು ಹೇಳಿಕೊಂಡು, ಏನನ್ನು ದೋಚಲು ಬರುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದೆ. ಗೊಂಬೆನಾಡಿನ ಬುದ್ಧಿವಂತ ಮತದಾರರೇ ಜಾಗೃತರಾಗಿ, ಕುತಂತ್ರಿಗಳ ಬಣ್ಣದ ಮಾತಿಗೆ ಮರುಳಾಗದಿರಿ ಎಂದು ಮನವಿ ಮಾಡಿದೆ.
ಇತ್ತೀಚೆಗೆ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಟ್ವೀಟ್ಗಳ ಮೂಲಕ ಹರಿಹಾಯ್ದಿದೆ. ಬೆಲೆಕೇರಿ ಅದಿರು ಕಳ್ಳ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅಪರಾಧಿ. ಬೆಲೆಕೇರಿ ಅದಿರು ಕಳ್ಳತನ ಪ್ರಕರಣದಲ್ಲಿ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ ಎಂದು ಕುಟುಕಿದೆ.
ಬೇಲೆಕೇರಿ ಅದಿರು ಕಳ್ಳತನ ಪ್ರಕರಣದಲ್ಲಿ ಭ್ರಷ್ಟ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ಅದಿರು ಲೂಟಿಕೋರ ಶಾಸಕ ಸತೀಶ್ ಸೈಲ್ ವಿರುದ್ಧದ 6 ಪ್ರಕರಣಗಳಲ್ಲೂ ಶಿಕ್ಷೆ ವಿಧಿಸಿ ಅಂತಿಮ ಆದೇಶ ಹೊರಡಿಸಿರುವ ಕೋರ್ಟ್, ಒಟ್ಟು 44 ಕೋಟಿಗೂ ಹೆಚ್ಚು ದಂಡ ವಿಧಿಸಿದೆ ಎಂದು ವಾಗ್ದಾಳಿ ನಡೆಸಿದೆ.

ನಿಯಮಗಳ ಪ್ರಕಾರ 2 ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದರೆ ಸತೀಶ್ ಸೈಲ್ ಶಾಸಕ ಸ್ಥಾನವು ಅನರ್ಹಗೊಳ್ಳಲಿದೆ. ಭ್ರಷ್ಟ ಕಾಂಗ್ರೆಸ್ ಪಕ್ಷವು ಗಣಿ ಹಗರಣದ ವಿರುದ್ಧ ಬೆಂಗಳೂರಿನಿಂದ-ಬಳ್ಳಾರಿ ವರೆಗೂ ಪಾದಯಾತ್ರೆ ಮಾಡಿತ್ತು. ಅಂದು ವೀರಾವೇಶದಿಂದ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಅದು ಯಾವ ಮುಖ ಇಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತೀರಿ? ಭ್ರಷ್ಟಾಚಾರಂ ಕಾಂಗ್ರೆಸ್ ಲಕ್ಷಣಂ ಎಂದು ಕಾಲೆಳೆದಿದೆ.
ಮುಡಾ ಹಗರಣದಲ್ಲಿ 420, A1 ಆರೋಪಿ ಸಿದ್ದರಾಮಯ್ಯ ವಿರುದ್ಧ ಇ.ಡಿ. ತನಿಖೆ ನಡೆಸುತ್ತಿದೆ. ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷದ ಮತ್ತಷ್ಟು ನಾಯಕರು ಅಪರಾಧಿಗಳಾಗಿ ಜೈಲು ಸೇರುವುದು ಗ್ಯಾರಂಟಿ ಎಂದು ಭವಿಷ್ಯ ನುಡಿದಿದೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಶ್ರೀಮತಿ ಪಾರ್ವತಿ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. A2 ಆರೋಪಿಯಾಗಿರುವ ಪಾರ್ವತಿ ಅವರು, ಮುಡಾದಲ್ಲಿ ಅಕ್ರಮವಾಗಿ ಪಡೆದಿದ್ದ 14 ಸೈಟುಗಳ ಬಗ್ಗೆ ತನಿಖೆ ಎದುರಿಸಿದ್ದಾರೆ. ಸದ್ಯದಲ್ಲೇ ಮುಡಾ ಹಗರಣದಲ್ಲಿ 420,
A1 ಆರೋಪಿಯಾಗಿರುವ ಸಿದ್ದರಾಮಯ್ಯ ಕೂಡ ವಿಚಾರಣೆ ಎದುರಿಸಬೇಕಿದೆ ಎಂದು ಹೇಳಿದೆ.
ಭ್ರಷ್ಟಾಚಾರದಲ್ಲಿ ಸಿಲುಕಿರುವ ಸಿದ್ದರಾಮಯ್ಯ ರಾಜೀನಾಮೆ ನೀಡದೆ ಭಂಡತನ ತೋರುತ್ತಿರುವುದು ಮುಖ್ಯಮಂತ್ರಿ ಹುದ್ದೆಗೆ ಮಾಡುತ್ತಿರುವ ಅಪಮಾನ ಎಂದು ಜೆಡಿಎಸ್ ದೂರಿದೆ.












Click it and Unblock the Notifications